ಜ್ಯೋತಿಷಿ ಅಲ್ಪಾಯುಷ್ಯ ಎಂದಿದ್ದಕ್ಕೆ ಮನನೊಂದು ಪ್ರಾಣ ಬಿಟ್ಟ ಯುವತಿ!  

ಜ್ಯೋತಿಷಿ ಅಲ್ಪಾಯುಷ್ಯ ಎಂದಿದ್ದಕ್ಕೆ ಮನನೊಂದು ಪ್ರಾಣ ಬಿಟ್ಟ ಯುವತಿ!  

ವಿದ್ಯಾಭ್ಯಾಸ, ಮದುವೆ, ಕೆಲಸದ ವಿಚಾರವಾಗಿ ಅನೇಕರು ಜೋತಿಷಿಗಳ ಬಳಿ ಭವಿಷ್ಯ ಕೇಳುತ್ತಾರೆ.  ಈ ವೇಳೆ ಜಾತಕದಲ್ಲಿ ಸಮಸ್ಯೆ ಇದೆ. ದೋಷ ಪರಿಹಾರಕ್ಕಾಗಿ ಪೂಜೆ ನಡೆಸಬೇಕು ಎಂದು ಕೆಲವರು ಹೇಳುವುದು ಸಾಮಾನ್ಯ. ಇದೀಗ ಇಲ್ಲೊಂದು ಕಡೆ ಜ್ಯೋತಿಷಿಯೊಬ್ಬರು ಯುವತಿಗೆ ಅಲ್ಪಾಯುಷ್ಯ ಎಂದು ಭವಿಷ್ಯಕ್ಕೆ ನುಡಿದಿದ್ದು, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಬ್ಯಾಟಿಂಗ್ ಕಷ್ಟ.. ಚೇಸಿಂಗ್ ಇನ್ನೂ ಕಷ್ಟ.. ಫೇಲ್ ಆಗುತ್ತಾ ಪಾಕಿಸ್ತಾನ? – ಲಂಕಾ ಜೊತೆ ಅಘಾ ಟೀಂ ಔಟ್?

ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಎಂಇಐ ಬಡಾವಣೆಯಲ್ಲಿ ನಡೆದಿದೆ. ಕಳೆದ ಕೆಲವು ತಿಂಗಳುಗಳಿಂದ ಮನೆಯಿಂದಲೇ ಕೆಲಸ ಮಾಡುತ್ತಿದ್ದ ಈಕೆ ಇತ್ತೀಚೆಗೆ ಮಾನಸಿಕವಾಗಿ ತೀವ್ರ ಆತಂಕಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಇದಕ್ಕೆ ಮೂಲ ಕಾರಣ ಜ್ಯೋತಿಷಿಯೊಬ್ಬರು ನೀಡಿದ್ದ ಎಚ್ಚರಿಕೆ.

ಕುಟುಂಬದ ಮೂಲಗಳ ಪ್ರಕಾರ, ಜ್ಯೋತಿಷಿಯೊಬ್ಬರು ವಿದ್ಯಾಜ್ಯೋತಿಯ ಜಾತಕ ವಿಶ್ಲೇಷಿಸಿ ಆಕೆಗೆ ‘ಅಲ್ಪಾಯುಷ್ಯ’ವಿದೆ ಎಂದು ಭವಿಷ್ಯ ನುಡಿದಿದ್ದರು. ಈ ಸಂಕಷ್ಟದಿಂದ ಪಾರಾಗಲು ಒಂಬತ್ತು ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸುವಂತೆ ಹಾಗೂ ಕೊನೆಯ ದಿನ ಮಾರಮ್ಮ ದೇವಿಗೆ ತಾಳಿ ಅರ್ಪಿಸುವಂತೆ ಸೂಚಿಸಿದ್ದರು. ಈ ಭವಿಷ್ಯವಾಣಿಯು ಯುವತಿಯ ಮನಸ್ಸಿನ ಮೇಲೆ ತೀವ್ರ ಪರಿಣಾಮ ಬೀರಿದ್ದು, ಅಂದಿನಿಂದಲೇ ಅವರು ಸಾವಿನ ಭೀತಿಯಲ್ಲಿ ಬದುಕುತ್ತಿದ್ದರು ಎಂದು ತಿಳಿದುಬಂದಿದೆ.

ಶುಕ್ರವಾರ ಪೂಜೆಯ ಕೊನೆಯ ದಿನವಾಗಿದ್ದು, ಕುಟುಂಬಸ್ಥರೆಲ್ಲರೂ ದೇವಸ್ಥಾನಕ್ಕೆ ಹೋಗಲು ಸಿದ್ಧತೆ ನಡೆಸುತ್ತಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ತಾಯಿ ಕವಿತಾ ಅವರು ಮಗಳನ್ನು ಕರೆಯಲು ಹೋದಾಗ ರೂಮಿನ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಕಿಟಕಿಯ ಮೂಲಕ ಇಣುಕಿ ನೋಡಿದಾಗ ವಿದ್ಯಾಜ್ಯೋತಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ವಿದ್ಯಾಜ್ಯೋತಿ ಅವರು ಕೊಡಗು ಮೂಲದ ಯುವಕನೋರ್ವನನ್ನು ಪ್ರೀತಿಸುತ್ತಿದ್ದರು. ಇವರ ಪ್ರೇಮಕ್ಕೆ ಎರಡೂ ಕುಟುಂಬಗಳು ಒಪ್ಪಿಗೆ ನೀಡಿ ಮದುವೆಯ ಮಾತುಕತೆ ಕೂಡ ನಡೆದಿತ್ತು. ಬದುಕಿನಲ್ಲಿ ಹೊಸ ಅಧ್ಯಾಯ ಆರಂಭಿಸಬೇಕಾಗಿದ್ದ ಯುವತಿ ನಿರ್ಧಾರ ಕೈಗೊಂಡಿರುವುದು ಎಲ್ಲರನ್ನೂ ಕಣ್ಣೀರಲ್ಲಿ ಮುಳುಗಿಸಿದೆ. ಘಟನಾ ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Shwetha M

Leave a Reply

Your email address will not be published. Required fields are marked *