ಬಾಲಕಿ ಜೊತೆ ಅಸಭ್ಯ ವರ್ತನೆ !- ಪವಾಡ ಪುರುಷನೆಂದು ಬಿಂಬಿಸಿಕೊಂಡಿದ್ದ ಮಲ್ಲಿಕಾರ್ಜುನ ಮುತ್ಯಾ ಮೇಲೆ ಕೇಸ್

ಬಾಲಕಿ ಜೊತೆ ಅಸಭ್ಯ ವರ್ತನೆ !-  ಪವಾಡ ಪುರುಷನೆಂದು ಬಿಂಬಿಸಿಕೊಂಡಿದ್ದ ಮಲ್ಲಿಕಾರ್ಜುನ ಮುತ್ಯಾ ಮೇಲೆ ಕೇಸ್

ತನ್ನನ್ನ ತಾನು  ಪವಾಡ ಪುರುಷನೆಂದು ಬಿಂಬಿಸಿಕೊಂಡಿದ್ದ ಯಾದಗಿರಿ ಜಿಲ್ಲೆಯ ಮಲ್ಲಿಕಾರ್ಜುನ ಮುತ್ಯಾ  ಮೇಲೆ ‘ಪೋಕ್ಸೋ’  ಪ್ರಕರಣ ದಾಖಲಾಗಿದೆ. ಶಹಾಪುರ ತಾಲೂಕಿನ ಮಹಲ್ ರೋಜಾ ಗ್ರಾಮದ ಯಮನೂರಪ್ಪ ಮುತ್ಯಾನ ಮಠದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಬಂಧನದ ಭೀತಿ ಹಿನ್ನೆಲೆ ಪ್ರಕರಣ ದಾಖಲಾಗುತ್ತಿದ್ದಂತೆ ಮುತ್ಯಾ ನಾಪತ್ತೆಯಾಗಿದ್ದು, ತಲೆಮರೆಸಿಕೊಂಡಿರುವ ಸುದ್ದಿ ಹರಿದಾಡಿವೆ. ಘಟನೆ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗ ಕೂಡ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಕಾರಣ ಸ್ವಯಂ ಘೋಷಿತ ದೇವಮಾನವನಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ:  ಇಂದು ಭಾರತ VS ಜಿಂಬಾಬ್ವೆ ಹೈವೋಲ್ಟೇಜ್‌ ಪಂದ್ಯ!‌ –  ಮ್ಯಾಚ್ ಟಿಕೆಟ್‌ ಇದ್ರೆ ಮೆಟ್ರೋ ಪ್ರಯಾಣ ಫ್ರೀ!

ಆಗಿದ್ದೇನು?

ಇತ್ತೀಚೆಗೆ ಅಪ್ರಾಪ್ತ ಬಾಲಕಿಯೊಬ್ಬಳ ಜೊತೆ ಮುತ್ಯಾ ಇರುವ ವಿಡಿಯೋವೊಂದು ವೈರಲ್ ಆಗಿತ್ತು. ಬಾಲಕಿಯನ್ನು ಆಕ್ಷೇಪಾರ್ಹ ರೀತಿಯಲ್ಲಿ ಸ್ಪರ್ಶಿಸಿರುವ ಆರೋಪ ಕೇಳಿಬಂದು, ಸಾರ್ವಜನಿಕವಾಗಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಪರಿಶೀಲನೆ ನಡೆಸುವಂತೆ ಯಾದಗಿರಿ ಡಿಸಿಗೆ ಸೂಚನೆ ನೀಡಿತ್ತು. ಯಾದಗಿರಿ ಡಿಸಿ ಅಧ್ಯಕ್ಷತೆಯಲ್ಲಿ ಮಕ್ಕಳ ರಕ್ಷಣಾ ಸಮಿತಿ ಸಮನ್ವಯತೆ ಸಭೆ ನಡೆಸಿ, ವೀಡಿಯೋ ಪರಿಶೀಲಿಸಿ ಸೂಕ್ತ ತನಿಖೆ ನಡೆಸಲು ನಿರ್ದೇಶನ ನೀಡಲಾಗಿತ್ತು. ಇದರ ಬೆನ್ನಲ್ಲೇ ಗೋಗಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ವೈರಲ್​​ ಆಗಿರುವ ವಿಡಿಯೋದಲ್ಲಿರುವ ಅಪ್ರಾಪ್ತ ಬಾಲಕಿ ಪೋಷಕರು ಮಲ್ಲಿಕಾರ್ಜುನ್​​ ಮುತ್ಯಾ ಸಂಬಂಧಿಕರು. ಹೀಗಾಗಿ ಮಠಕ್ಕೆ ಬಂದಾಗ ಬಾಲಕಿ ಜತೆ ಸಹೋದರನ ರೀತಿ ಪ್ರೀತಿ ತೋರಿದ್ದಾರೆ. ಮಗಳು ಖುಷಿಯಿಂದ ಇದ್ದ ಕಾರಣಕ್ಕೆ ಕುಟುಂಬ ಸಮೇತ ಮಠಕ್ಕೆ ಬಂದ ಬಾಲಕಿ ತಂದೆಯೇ ವಿಡಿಯೋ ಮಾಡಿದ್ದಾರೆ. ಆದ್ರೆ ವಿಡಿಯೋವನ್ನು ಕೆಟ್ಟ ದೃಷ್ಟಿಯಿಂದ ಬಿಂಬಿಸಲಾಗಿದೆ. ನನ್ನ ಸಹೋದರನ ವಿರುದ್ಧ ಕೇಸ್​ ದಾಖಲಿಸಿದ್ದನ್ನು ಖಂಡಿಸುತ್ತೇವೆ. ಮುತ್ಯಾ ಎಲ್ಲೂ ಪರಾರಿ ಆಗಿಲ್ಲ, ಬೇರೆ ಬೇರೆ ಮಠಗಳಿಗೆ ಹೋಗ್ತಿದ್ದಾರೆ. ನಾವು ತಪ್ಪು ಮಾಡಿಲ್ಲ ಎಂದ ಮೇಲೆ ಯಾಕೆ ಪರಾರಿ ಆಗುತ್ತೇವೆ ಎಂದು ಮಲ್ಲಿಕಾರ್ಜುನ ಮುತ್ಯಾ ಸಹೋದರ ಪರಶುರಾಮ ಮುತ್ಯಾ ಟಿವಿ9ಗೆ ತಿಳಿಸಿದ್ದಾರೆ.

ಕೇವಲ 25 ವಯಸ್ಸಿನ ಮಲ್ಲಿಕಾರ್ಜುನ ಮುತ್ಯಾನನ್ನು ಯಾದಗಿರಿ, ಕಲಬುರಗಿ, ವಿಜಯಪುರ ಸೇರಿದಂತೆ ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಲಕ್ಷಾಂತರ ಭಕ್ತರು ‘ದೇವರು’ ಎಂದೇ ನಂಬುತ್ತಾರೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಮಹಲ್ ರೋಜಾದ ಚಾಂಗದೆವ್ ಮಠದ ಪೀಠಾಧಿಪತಿಯಾಗಿರುವ ಈತನಿಗೆ ದೊಡ್ಡ ಭಕ್ತ ವರ್ಗವೇ ಇದೆ. ಈತನ ತಂದೆ ಅಲೈ ದೇವರು ಭಕ್ತರಿಗೆ ಪ್ರವಚನ ನೀಡುತ್ತಿದ್ದರು. ಕೆಲವು ವರ್ಷಗಳ ಹಿಂದೆ ಅಲೈ ದೇವರ ಹ*ತ್ಯೆಯಾಗಿತ್ತು. ತಂದೆಯ ಹ*ತ್ಯೆ ಬಳಿಕ ಮಠದ ಪೀಠಾಧಿಪತಿಯಾದ ಮಲ್ಲಿಕಾರ್ಜುನ ಮುತ್ಯಾ, ಭಕ್ತರ ಮುಖ ನೋಡುತ್ತಲೇ ಅವರ ಅಂತರಂಗದ ಮಾತು ಹೇಳುತ್ತಾನೆ ಎನ್ನಲಾಗಿದೆ. ಆತನ ಮಾತು ಸತ್ಯವಾಗುತ್ತದೆ ಎಂಬುದು ಭಕ್ತರ ನಂಬಿಕೆ.

Kishor KV

Leave a Reply

Your email address will not be published. Required fields are marked *