ಕಾಪಾಡಿ ಎಂದು ಅಂಗಲಾಚಿದ್ರೂ ಮಾನವೀಯತೆ ಮರೆತ ಡ್ರೈವರ್! – 6 ವರ್ಷದ ಬಾಲಕಿ ದುರಂತ ಅಂತ್ಯ!

ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಮಗು ರಕ್ತದ ಮಡುವಲ್ಲಿ ಬಿದ್ದಿದ್ರೂ ಕಾರು ಚಾಲಕ ಮಾನವೀಯತೆ ಮರೆತಿದ್ದಾನೆ. ಹಿಟ್ ಆಂಡ್ ರನ್ನಿಂದ 6 ವರ್ಷದ ಬಾಲಕಿ ದುರಂತ ಅಂತ್ಯ ಕಂಡಿದ್ದಾಳೆ.
ಇದನ್ನೂ ಓದಿ: ರಾಯನ ಡಬಲ್ ರೋಲ್ ಹವಾ – ಐ ಆ್ಯಮ್ ಹೋಮ್ ಡ್ಯಾಡಿ ಎಂದಿದ್ದು ಯಾರು?
ಏನಿದು ಘಟನೆ?
ದೆಹಲಿಯಲ್ಲಿ ಅಜ್ಜಿ ಮತ್ತು 6 ವರ್ಷದ ಮೊಮ್ಮಗಳು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಅತಿ ವೇಗವಾಗಿ ಬಂದ ವಾಹನವೊಂದು ಮಗುವಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಗು ಗಂಭೀರ ಗಾಯಗೊಂಡಿದೆ. ಅಪಘಾತದ ಬಳಿಕ ಚಾಲಕನ ಬಳಿ ಮಗುವಿನ ಅಜ್ಜಿ ಸಹಾಯಕ್ಕಾಗಿ ಅಂಗಲಾಚಿದರೂ, ಪಾಪಿ ಚಾಲಕ ಕರುಣೆ ತೋರದೆ ಪರಾರಿಯಾಗಿದ್ದಾನೆ.
ಈ ಬಗ್ಗೆ ಕಣ್ಣೀರು ಹಾಕುತ್ತಾ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಮೃತ ಬಾಲಕಿಯ ಅಜ್ಜಿ, ‘ಅಪಘಾತವಾದ ತಕ್ಷಣ ನಾನು ಚಾಲಕನ ಬಳಿ ಓಡಿ ಹೋದೆ. ಕೈಮುಗಿದು ಬೇಡಿಕೊಂಡೆ. ದಯವಿಟ್ಟು ನನ್ನ ಮೊಮ್ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಹಾಯ ಮಾಡಿ ಎಂದು ಗೋಗರೆದೆ. ಆದರೆ ಆತ ನನ್ನ ಮಾತನ್ನು ಕೇಳಿಸಿಕೊಳ್ಳಲೇ ಇಲ್ಲ. ಸಹಾಯ ಮಾಡುವ ಬದಲು ವಾಹನದ ವೇಗ ಹೆಚ್ಚಿಸಿ ಅಲ್ಲಿಂದ ಓಡಿಹೋದ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಮಗು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಹಿಟ್ ಅಂಡ್ ರನ್ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಪರಾರಿಯಾಗಿರುವ ಚಾಲಕನಿಗಾಗಿ ಬಲೆ ಬೀಸಿದ್ದಾರೆ.

ನೋಡಿರಿ

