ಮೆಜೆಸ್ಟಿಕ್ KSRTC ಬಸ್ ನಿಲ್ದಾಣದಲ್ಲಿ ಕಳ್ಳರ ಕೈಚಳಕ! – ಟಿಕೆಟ್ ಮಷಿನ್ ಕದ್ದೊಯ್ದ ಖದೀಮರು!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳ್ಳರ ಕಾಟ ದಿನೇ ದಿನೆ ಹೆಚ್ಚಾಗುತ್ತಿದೆ. ಅಲ್ಲಲ್ಲಿ ಕಳ್ಳತನ ನಡೆದಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೀಗ ಬೆಂಗಳೂರಿನ ಹೃದಯಭಾಗವಾಗಿರುವ ಮೆಜೆಸ್ಟಿಕ್ ನಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಇಲೆಕ್ಟ್ರಾನಿಕ್ ಟಿಕೆಟ್ ಮಷಿನ್ ಅನ್ನ ಕಳ್ಳತನ ಮಾಡಿದ್ದಾರೆ.
ಇದನ್ನೂ ಓದಿ: ಡಿವೋರ್ಸ್ ಕೊಟ್ರೂ ತಪ್ಪಲಿಲ್ಲ ಮಾಜಿ ಗಂಡನ ಕಾಟ! – 2ನೇ ಮದುವೆಯಾಗಿ ಗರ್ಭಿಣಿಯಾಗಿದ್ದಕ್ಕೆ ಕೊಂದೇ ಬಿಟ್ಟ ಪಾಪಿ!
ಬೆಂಗಳೂರು–ಶಿರಸಿ ನಾನ್ ಎಸಿ ಸ್ಲೀಪರ್ ಬಸ್ಗೆ ಸಂಬಂಧಿಸಿದಂತೆ, ಬಸ್ನ ಕಂಡಕ್ಟರ್ ಹಾಗೂ ಚಾಲಕ ತಮ್ಮ ಬ್ಯಾಗ್ಗಳನ್ನು ಮೆಜೆಸ್ಟಿಕ್ನಲ್ಲಿ ಇಟ್ಟಿದ್ದ ಸಂದರ್ಭದಲ್ಲಿ ಖದೀಮರು ತಮ್ಮ ಕೈಚಳಕ ತೋರಿಸಿದ್ದಾರೆ. ಟಿಕೆಟ್ ಮಷಿನ್ನ್ಅನ್ನು ಕದ್ದೊಯ್ದಿದ್ದಾರೆ. ಇದ್ರಿಂದಾಗಿ KSRTC ಸಿಬ್ಬಂದಿ ಹಾಗೂ ಪ್ರಯಾಣಿಕರು ತೀವ್ರ ಹೈರಾಣಾಗಿದ್ದಾರೆ.
ಇಲೆಕ್ಟ್ರಾನಿಕ್ ಟಿಕೆಟ್ ಮಷಿನ್ ಕಳ್ಳತನ ಆಗಿದ್ದರಿಂದ ನಿಗದಿತ ಸಮಯದಲ್ಲಿ ಹೊರಡಬೇಕಾಗಿದ್ದ KSRTC ಬಸ್ನ್ನು ತಕ್ಷಣವೇ ಚಾಲನೆ ಮಾಡಲು ಸಾಧ್ಯವಾಗದೆ, ಬಸ್ನ್ನು ನಿಲ್ದಾಣದಲ್ಲೇ ನಿಲ್ಲಿಸಲಾಗಿತ್ತು. ಈ ಹಿನ್ನೆಲೆ ಪ್ರಯಾಣಿಕರು ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲೇ ಪರದಾಡುವ ಸ್ಥಿತಿ ಎದುರಿಸಬೇಕಾಯಿತು. ತಡರಾತ್ರಿವರೆಗೂ ಬಸ್ ಚಾಲನೆ ಆರಂಭವಾಗದೆ ಇದ್ದುದು ಪ್ರಯಾಣಿಕರಲ್ಲಿ ಆಕ್ರೋಶಕ್ಕೂ ಕಾರಣವಾಯಿತು.
ಬಳಿಕ KSRTC ಸಿಬ್ಬಂದಿ ಪರ್ಯಾಯ ವ್ಯವಸ್ಥೆ ಮಾಡಿದ್ದು, ನಂತರ ಮ್ಯಾನುವಲ್ ಟಿಕೆಟ್ ನೀಡಿ ಬಸ್ ಸೇವೆಯನ್ನು ಆರಂಭಿಸಿದ್ದಾರೆ. ಇನ್ನು ಕಳ್ಳರು ಬ್ಯಾಗ್ ಹೊತ್ತೊಯ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ಮೆಜೆಸ್ಟಿಕ್ನಂತಹ ಅತಿ ಜನಸಂದಣಿ ಪ್ರದೇಶದಲ್ಲಿ ಈ ರೀತಿಯ ಕಳ್ಳತನ ನಡೆದಿರುವುದು ಭದ್ರತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಬೆಂಗಳೂರು ನಗರದಲ್ಲಿ ಬಸ್ ನಿಲ್ದಾಣಗಳ ಭದ್ರತೆಯನ್ನು ಮತ್ತಷ್ಟು ಬಲಪಡಿಸಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ನೋಡಿರಿ

