ಕೊಪ್ಪಳದಲ್ಲಿ ವಿದೇಶಿ ಮಹಿಳೆಯನ್ನ ರೇ***ಪ್ ಮಾಡಿದ್ದ ಮೂವರಿಗೆ ಮರಣದಂಡನೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ನಡೆದಿದ್ದ ವಿದೇಶಿ ಮಹಿಳೆ ಮೇಲಿನ ರೇ*ಪ್ ಹಾಗೂ ದೇಶಿ ಪ್ರವಾಸಿಗನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳಿಗೆ ಮರಣದಂಡನೆ ವಿಧಿಸಲಾಗಿದೆ. ಕೆಳ ಹಂತದ ನ್ಯಾಯಾಲಯದ ಐತಿಹಾಸಿಕ ತೀರ್ಪು ಇದಾಗಿದೆ.
3 ಆರೋಪಿಳಿಗೂ ಮರಣ ದಂಡನೆ
ಪ್ರಕರಣದ ಆರೋಪಿಗಳಾದ ಗಂಗಾವತಿ ಸಾಯಿನಗರದ ನಿವಾಸಿಗಳಾದ ಮಲ್ಲೇಶ್ @ ಹಂದಿಮಲ್ಲ, ಸಾಯಿ ಹಾಗೂ ಶರಣಪ್ಪ ಎಂಬ ಮೂವರು ಆರೋಪಿಗಳು ಪ್ರಕರಣದಲ್ಲಿ ದೋಷಿಗಳೆಂದು ಈಗಾಗಲೇ ನ್ಯಾಯಾಲಯ ತೀರ್ಮಾನಿಸಿತ್ತು. ಇಂದು ಶಿಕ್ಷೆಯ ಪ್ರಮಾಣ ಘೋಷಣೆ ಮಾಡಿದ ನ್ಯಾಯಧೀಶ ಸದಾನಂದ ನಾಗಪ್ಪ ನಾಯಕ್ ಅವರು ಮೂವರಿಗೂ ಮರಣದಂಡನೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಆಗಿದ್ದೇನು?
ಹಂಪಿ ಸಮೀಪದ ಸಾಣಾಪುರದ ತುಂಗಭದ್ರಾ ಎಡದಂಡೆ ಕಾಲುವೆ ಬಳಿ 2025ರ ಮಾರ್ಚ್ 6ರಂದು ಘಟನೆ ನಡೆದಿತ್ತು. ವಿದೇಶಿ ಮಹಿಳೆ, ಅಮೆರಿಕದ ಪ್ರವಾಸಿಗನ ಕೊಲೆ ನಡೆದಿತ್ತು. ಅನೇಕುಂದಿ ಪ್ರದೇಶದ ಹೋಮ್ಸ್ಟೇನಲ್ಲಿ ತಂಗಿದ್ದ 5 ಮಂದಿ ಪ್ರವಾಸಿಗರು ಊಟದ ನಂತರ ಕಾಲುವೆ ಬಳಿ ಮ್ಯೂಸಿಕ್ ಕೇಳುತ್ತ ಕುಳಿತಿದ್ದರು. ಈ ವೇಳೆ ಮದ್ಯಪಾನ ಮಾಡಿ ಬಂದಿದ್ದ ಮೂವರು ಆರೋಪಿಗಳು ಈ ಕೃತ್ಯ ಎಸಗಿದ್ದರು. ಮಾತ್ರವಲ್ಲ ಗುಂಪಿನಲ್ಲಿದ್ದ ಮೂವರು ಪುರುಷ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿ ಅವರನ್ನು ಕಾಲುವೆಗೆ ತಳ್ಳಿ ಇಬ್ಬರು ಮಹಿಳಾ ಪ್ರವಾಸಿಗರ ಮೇಲೆ ಸಾಮೂಹಿಕ ಅ*ತ್ಯಾ*ಚಾರ ನಡೆಸಿದ್ದರು. ಸಂತ್ರಸ್ತ ಮಹಿಳೆಯರಲ್ಲಿ ಒಬ್ಬರು ಇಸ್ರೇಲ್ ಪ್ರಜೆಯಾಗಿದ್ದರೆ, ಮತ್ತೊಬ್ಬರು ಭಾರತೀಯ ಮಹಿಳೆಯಾಗಿದ್ದರು. ಇನ್ನು ಆರೋಪಿಗಳು ನಡೆಸಿದ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಒಡಿಶಾ ಮೂಲದ ಬಿಭಾಷಾ ಎಂಬ ಯುವಕ ಈಜಲು ಆಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ. ಮೃತದೇಹವನ್ನು ಸುಮಾರು 24 ಗಂಟೆಗಳ ನಂತರ ಪತ್ತೆ ಹಚ್ಚಲಾಗಿತ್ತು. ಇತರ ಇಬ್ಬರು ಪ್ರವಾಸಿಗರು ಈಜಿ ದಡ ಸೇರಿ, ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಪ್ರಕರಣವು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.

ನೋಡಿರಿ

