ಹಳ್ಳಿ ಸೊಗಡು, ಹಸುವಿಗಾಗಿ ಹುಡುಕಾಟ – ವಲವಾರ ಸಿನಿಮಾ ಇಷ್ಟವಾಗೋದು ಯಾಕೆ ಗೊತ್ತಾ?

ಕನ್ನಡದಲ್ಲಿ ಒಂದು ಚೆಂದದ ಕಥೆ ಕಟ್ಟಿ, ಸಿನಿಮಾ ರೂಪಕ್ಕೆ ಇಳಿಸಿ ನೋಡಿದಷ್ಟು ಆಳಕ್ಕೆ ಇಳಿಯುವಂತೆ ಮಾಡದ ಸಿನಿಮಾ ವಲವಾರ. ಸಿಂಪಲ್ ಸ್ಟೋರಿ ಸಿನಿಮಾ ಆಗೋದು ಹೇಗೆ, ಆ ಸಿನಿಮಾ ವೀಕ್ಷಕರಿಗೆ ಯಾಕೆ ಇಷ್ಟವಾಗುತ್ತೆ ಅನ್ನೋದಕ್ಕೆ ಒಂದು ಬೆಸ್ಟ್ ಉದಾಹರಣೆಯೇ ಈ ವಲವಾರ.
ಇದನ್ನೂ ಓದಿ:ರಕ್ಕಸಪುರದೋಳ್ ಗೆದ್ದ ವಿಲನ್ – ರಾಜ್ ಎದುರು ರಕ್ಕಸನಂತೆ ಅನಿರುದ್ಧ್ ಭಟ್ ನಟನೆ
ಕನ್ನಡದಲ್ಲಿ ವಲವಾರ ಸಿನಿಮಾ ತೆರೆಗೆ ಬಂದಿದೆ. ಸೂತನ್ ಗೌಡ ಎಂಬ ಹೊಸ ನಿರ್ದೇಶಕ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಸಕಲೇಶಪುರದ ಒಂದು ಹಳ್ಳಿಯಲ್ಲಿ ನಡೆಯೋ ಈ ಸಿನಿಮಾ. ತೀರ ಸಹಜವಾಗಿ ಮೂಡಿಬಂದಿದೆ. ಈ ಸಿನಿಮಾ ನೋಡುತ್ತಿದ್ದಂತೆ ಅನೇಕರಿಗೆ ಅವರ ಬಾಲ್ಯ ನೆನಪಾಗುತ್ತಿದೆ. ಯಾಕೆಂದರೆ, ಈ ಸಿನಿಮಾ ರಿಯಾಲಿಟಿಗೆ ಹತ್ತಿರವಾಗಿದೆ. ಎಲ್ಲೂ ನಾಟಕೀಯತೆ ಕಾಣಿಸೋದೆ ಇಲ್ಲ. ಇನ್ನು ಈ ಸಿನಿಮಾದಲ್ಲಿ ನಟಿಸಿರೋ ಪ್ರತಿಯೊಬ್ಬರು ಸಹ ಪಾತ್ರಗಳೇ ಆಗಿ ಹೋಗಿದ್ದಾರೆ. ಕನ್ನಡದಲ್ಲಿ ಈ ರೀತಿ ಸಿನಿಮಾ ಬರೋದಿಲ್ಲ ಎನ್ನುವವರು ವಲವಾರದಂತಹ ಸಿನಿಮಾವನ್ನ ನೋಡಲೇಬೇಕಿದೆ. ಮನಸ್ಸಿಗೆ ಮುದ ನೀಡುವ ಈ ಸಿನಿಮಾವನ್ನ ಮನೆ ಮಂದಿಯೆಲ್ಲಾ ನೋಡಬಹುದು. ಅದರಲ್ಲೂ ಗ್ರಾಮೀಣ ಪರಿಸರದಲ್ಲಿ ಬೆಳೆದವರಿಗೆ. ಬಡತನದ ಬದುಕನ್ನ ಅನುಭವಿಸಿರೋರಿಗೆ ಈ ಸಿನಿಮಾ ಮನಸಿಗೆ ಹತ್ತಿರವಾಗುತ್ತದೆ. ಕಾಣೆಯಾದ ಹಸುವನ್ನು ಹುಡುಕುವ ಅನ್ವೇಷಣೆಯಲ್ಲಿ ಯುವ ಸಹೋದರರ ಕಥೆ ಈ ಸಿನಿಮಾ ಮೂಲಕ ಮನ ಮುಟ್ಟುವಂತಿದೆ.
ಇನ್ನು ಸಿನಿಮಾ ನೋಡಿದವರು ಕೂಡಾ ತಮ್ಮದೇ ಶೈಲಿಯಲ್ಲಿ ಸಿನಿಮಾ ನೋಡಲು ಕನ್ನಡಿಗರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಈ ಸಿನಿಮಾವನ್ನು ಗೆಲ್ಲಿಸಿಕೊಳ್ಳದಿದ್ದ ಮೇಲೆ, ಉತ್ತಮ ಸಿನಿಮಾಗಳು ಬರುತ್ತಿಲ್ಲ ಎಂದು ಆರೋಪಿಸುವ ಹಕ್ಕು ನಮಗಿಲ್ಲ. ಇದು ಸಿನಿಮಾವಲ್ಲ; 70-90 ರ ನಡುವಿನಲ್ಲಿ ಹಳ್ಳಿಯಲ್ಲಿ ಹುಟ್ಟಿದ ಪ್ರತಿ ಬಡವನ ಕತೆ! ಇಲ್ಲಿ ನಿಮ್ಮ ಅಮ್ಮ ನಿಮಗೆ ಹೊಸ ರೂಪದಲ್ಲಿ ಸಿಗುತ್ತಾರೆ. ನೀವಾಕೆಯನ್ನು ಅಪ್ಪಿ ಅಳುವಿರಿ. ನಿಮ್ಮ ಬಾಲ್ಯ ನಿಮಗೆ ಟನ್ ಗಟ್ಟಲೆ ವಾಪಸ್ ಸಿಗುತ್ತದೆ. ನೀವದನ್ನು ಅಪ್ಪಿ ನಗುವಿರಿ. ಆ ಊರು, ಆ ಕೆರೆ, ಆ ಹಸು, ಆ ಹೊಲ, ಆ ಕೋಳಿ, ಅದೊಂದು ಪೊದೆ… ಎಲ್ಲವೂ ನಮ್ಮದೇ! ಒಂದು ಫೀಲ್ ಗುಡ್ ಮೂವಿ. ಹೀಗೆ ಈ ಸಿನಿಮಾದ ಬಗ್ಗೆ ಒಳ್ಳೇ ವಿಮರ್ಶೆಗಳು ಕೇಳಿ ಬರುತ್ತಿದೆ.
ಇತ್ತೀಚೆಗೆ ತೆರೆಕಂಡ ರಕ್ಕಸಪುರದೋಳ್ ಜೊತೆಗೆ ವಲವಾರ ಸಿನಿಮಾಗಳನ್ನು ಕನ್ನಡಿಗರು ನೋಡಬೇಕು. ನೋಡಿ ಬೇರೆಯವರಿಗೂ ನೋಡುವಂತೆ ಪ್ರೋತ್ಸಾಹಿಸಬೇಕು. ಹೀಗಾದಾಗ ಮಾತ್ರ ರಿಯಲ್ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗುತ್ತದೆ. ಜೊತೆಗೆ ಸ್ಯಾಂಡಲ್ವುಡ್ನಲ್ಲೂ ಇಂತಹ ಸಿನಿಮಾಗಳಿಗೆ ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ.

ನೋಡಿರಿ

