ರಾಜ್ಯ ಬಜೆಟ್ ಮಂಡನೆಗೆ ಮುಹೂರ್ತ ಫಿಕ್ಸ್! – ಮತ್ತೊಂದು ದಾಖಲೆ ಬರೆಯಲು ಸಿಎಂ ಸಿದ್ಧರಾಮಯ್ಯ ಸಜ್ಜು!

ರಾಜ್ಯ ಬಜೆಟ್ ಮಂಡನೆಗೆ ದಿನಾಂಕ ನಿಗದಿಯಾಗಿದೆ. 2026-27ನೇ ಆರ್ಥಿಕ ವರ್ಷದ ಕರ್ನಾಟಕ ಬಜೆಟ್ ಅನ್ನು ಮಾರ್ಚ್ 6ರಂದು ಸಿಎಂ ಸಿದ್ದರಾಮಯ್ಯ ಮಂಡಿಸಲಿದ್ದಾರೆ. ಈ ಮೂಕಲ ಮತ್ತೊಂದು ದಾಖಲೆ ಬರೆಯಲು ಸಿಎಂ ಸಿದ್ದರಾಮಯ್ಯ ಸಜ್ಜಾಗಿದ್ದಾರೆ.
ಇದನ್ನೂ ಓದಿ: ಕಿಶನ್, ಪಾಂಡ್ಯ ಮ್ಯಾಜಿಕ್ – ನಮೀಬಿಯಾ ವಿರುದ್ಧ ಭಾರತಕ್ಕೆ 93 ರನ್ಗಳ ಜಯ!
ಮಾರ್ಚ್ 6ರಿಂದ ಬಜೆಟ್ ಅಧಿವೇಶನ ನಡೆಯಲಿದೆ. ಅಧಿವೇಶನದ ಮೊದಲ ದಿನವೇ ಸಿದ್ದರಾಮಯ್ಯ 17ನೇ ಬಜೆಟ್ ಮಂಡಿಸಲಿದ್ದಾರೆ. ಆ ಮೂಲಕ ಮತ್ತೊಂದು ಇತಿಹಾಸ ನಿರ್ಮಿಸಲಿದ್ದಾರೆ. ಈಗಾಲೇ ಸಿದ್ದರಾಮಯ್ಯ 2026-27ನೇ ಸಾಲಿನ ಆಯವ್ಯಯದ ಪೂರ್ವಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದು, ಸರಣಿ ಸಭೆ ಮಾಡುತ್ತಿದ್ದಾರೆ. ಸಚಿವರು, ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ. ಮಾರ್ಚ್ 6ರಿಂದ ಮಾರ್ಚ್ 27ರವರೆಗೆ ಬಜೆಟ್ ಅಧಿವೇಶನ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಈಗಾಗಲೇ ದೀರ್ಘಾವಧಿ ಸಿಎಂ ಎನಿಸಿಕೊಂಡಿರುವ ಸಿದ್ದರಾಮಯ್ಯ ಬಜೆಟ್ ಮಂಡನೆಯಲ್ಲಿಯೂ ದಾಖಲೆ ಬರೆಯಲು ದಿನಗಣನೆ ಆರಂಭವಾಗಿದೆ. ʼಉಳುವವನೇ ಹೊಲದೊಡೆಯʼ ಎಂಬ ಕ್ರಾಂತಿಕಾರಿ ಯೋಜನೆಯನ್ನು ರಾಜ್ಯದಲ್ಲಿ ಪರಿಚಯಿಸಿದ್ದ ದೇವರಾಜ ಅರಸರು ಏಳೂವರೆ ವರ್ಷ ಮುಖ್ಯಮಂತ್ರಿಯಾಗಿದ್ದರು. ಅರಸು ಏಳೂವರೆ ವರ್ಷದ ಆಡಳಿತಾವಧಿಯಲ್ಲಿ 2,792 ದಿನಗಳ ಕಾಲ ಅಧಿಕಾರದಲ್ಲಿದ್ದರು. ಸಿದ್ದರಾಮಯ್ಯ 2013-2018ರ ಅವಧಿಯಲ್ಲಿ ಮೊದಲ ಬಾರಿಗೆ ಸಿಎಂ ಆಗಿದ್ದಾಗ 1,829 ದಿನಗಳ ಕಾಲ ಅಧಿಕಾರದಲ್ಲಿದ್ದರು. ಈಗ ಎರಡನೇ ಅವಧಿಗೆ ಆಡಳಿತದ ಸೂತ್ರ ಹಿಡಿದಿರುವ ಅವರು, ಈ ವರ್ಷದ ಜನವರಿ 6ರಂದು ದೇವರಾಜ ಅರಸರ ದಾಖಲೆಯನ್ನು ಸರಿಗಟ್ಟಿದ್ದರು. ಸಿದ್ದರಾಮಯ್ಯ ಜನವರಿ 6ರಂದು ಮುಖ್ಯಮಂತ್ರಿಯಾಗಿ 7 ವರ್ಷ 240ನೇ ದಿನ ಪೂರೈಸಿಸಿದರು. ಅರಸು 7 ವರ್ಷ 230 ದಿನ ಸಿಎಂ ಆಗಿದ್ದರು.
ಇನ್ನು ಸಿದ್ದರಾಮಯ್ಯ ಈಗಾಗಲೇ 16 ಬಜೆಟ್ ಮಂಡಿಸಿ ರಾಜ್ಯಕ್ಕೆ ಅತಿಹೆಚ್ಚು ಮುಂಗಡ ಪತ್ರ ಕೊಟ್ಟ ದಾಖಲೆಯನ್ನು ಹೊಂದಿದ್ದಾರೆ. 2026-27ರ ತಮ್ಮ 17ನೇ ಬಜೆಟ್ ಮಂಡನೆ ಮೂಲಕ ವಿಶಿಷ್ಟ ದಾಖಲೆ ಮುಡಿಗೇರಿಸಿಕೊಳ್ಳಲಿದ್ದಾರೆ. ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ಯಾವೆಲ್ಲ ಯೋಜನೆ ಘೋಷಿಸಲಿದೆ ಎನ್ನುವ ಕುತೂಹಲ ಮೂಡಿದೆ.

ನೋಡಿರಿ

