ಮದುವೆಗೆ ಮುಂಚೆಯೇ ಮಗು – ಮರ್ಯಾದೆಗೆ ಅಂಜಿ ಹಸುಗೂಸಿನ ಉಸಿರು ನಿಲ್ಲಿಸಿದ್ರಾ ಪಾಪಿಗಳು?

ಹೆರಿಗೆಯಾದ ತಕ್ಷಣ ಹಸುಗೂಸು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಕಾಫಿನಾಡಿನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಬಾವಿಕೆರೆ ಗ್ರಾಮದ ಸ್ಟಾಫ್ ನರ್ಸ್ ಒಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ, ಮದುವೆಗೆ ಮುನ್ನವೇ ಯುವತಿ ತಾಯಿಯಾಗಿದ್ದರಿಂದ ಮರ್ಯಾದೆಗೆ ಅಂಜಿ ಕುಟುಂಬಸ್ಥರೇ ಹಸುಗೂಸನ್ನು ಕೊಲೆ ಮಾಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ರೋಹಿಲ್ & ಗಿಲ್ ಫೇಲ್.. ಸೂರ್ಯ? – ಪ್ರಜ್ವಲಿಸದೇ ಇದ್ರೆ ಮುಳುಗೋದು ಪಕ್ಕಾ!
ಘಟನೆ ಸಂಬಂಧ ಲಕ್ಕವಳ್ಳಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ. ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿ, ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದಾಳೆ ಎನ್ನಲಾಗಿದ್ದು, ಮರ್ಯಾದೆ ದೃಷ್ಟಿಯಿಂದ ಈ ವಿಷಯವನ್ನು ಗುಟ್ಟಾಗಿಡಲಾಗಿತ್ತು. ಆದರೆ ಕಳೆದ 15 ದಿನಗಳ ಹಿಂದೆ ಮನೆಯಲ್ಲೇ ಯುವತಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಹೋದರೆ ವಿಷಯ ಬಹಿರಂಗವಾಗುತ್ತದೆ ಎಂಬ ಭಯಕ್ಕೆ ನರ್ಸ್ ಆಗಿದ್ದ ಯುವತಿ, ತನ್ನ ತಂದೆ-ತಾಯಿ ಮತ್ತು ಅಜ್ಜಿಯ ಸಹಾಯದಿಂದ ಮನೆಯಲ್ಲೇ ಹೆರಿಗೆ ಮಾಡಿಸಿಕೊಂಡಿದ್ದಾಳೆ. ಆದರೆ, ಹುಟ್ಟಿದ ತಕ್ಷಣ ಮಗು ಸಾವನ್ನಪ್ಪಿದೆ. ಹೀಗಾಗಿ ಮರ್ಯಾದೆ ಹೆದರಿ ಮಗುವನ್ನು ಕುಟುಂಬಸ್ಥರೇ ಉಸಿರುಗಟ್ಟಿಸಿ ಕೊಂದಿರಬಹುದು ಎಂದು ಶಂಕಿಸಲಾಗಿದೆ.
ಮಗು ಮೃತಪಟ್ಟ ಬಳಿಕ ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ತಿಪ್ಪೆಯ ಗುಂಡಿಯಲ್ಲಿ ಹೂತು ಹಾಕಲಾಗಿದೆ. ಆದರೆ, ಇದನ್ನು ತಿಪ್ಪೆ ಗುಂಡಿಯ ಪಕ್ಕದ ಮನೆಯ ಯುವಕ ನೋಡಿದ್ದು, ಏನೋ ಹೂತು ಹಾಕಿರುವ ಬಗ್ಗೆ ಯುವಕನಿಗೆ ಅನುಮಾನ ಮೂಡಿದೆ. ಬಳಿಕ ಯುವಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ಮಾಹಿತಿ ಮೇರೆಗೆ ಕೂಡಲೇ ಲಕ್ಕವಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದಾಗ ತಿಪ್ಪೆಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.

ನೋಡಿರಿ

