ಸಿಎಂ ಸಿದ್ದರಾಮಯ್ಯ ಯಾವತ್ತಿಗೂ ದೇವರಾಜ ಅರಸು ಆಗಲು ಸಾಧ್ಯವಿಲ್ಲ: ಪ್ರತಾಪ್ ಸಿಂಹ

ನಾನು ಮೈಸೂರಿನ ಚಾಮರಾಜ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಸ್ಪರ್ಧಿಸುತ್ತೇನೆ ಎಂದು ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು. ಆ ಮೂಲಕ, ಚಾಮರಾಜ ಕ್ಷೇತ್ರದಿಂದ ಸ್ಪರ್ಧೆಗಿಳಿಯಲು ಪ್ರತಾಪ್ ಸಿಂಹ ಇಷ್ಟಪಟ್ಟಿದ್ದಾರೆ ಎಂಬ ಸುದ್ದಿಗಳನ್ನು ಅವರು ದೃಢಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಸಿಂಹ ಅಭ್ಯರ್ಥಿಗೂ ಮತ್ತು ಆಕಾಂಕ್ಷಿಗೂ ತುಂಬಾ ವ್ಯತ್ಯಾಸ ಇದೆ. ಆಕಾಂಕ್ಷಿಗೂ ಅಭ್ಯರ್ಥಿಗೂ ವ್ಯತ್ಯಾಸ ಗೊತ್ತಿಲ್ಲದೇ ಮಾತನಾಡುತ್ತಿದ್ದಾರೆ. ಅಭ್ಯರ್ಥಿ ಯಾರು ಎಂದು ನಮ್ಮ ಪಕ್ಷ ನಿರ್ಧಾರ ಮಾಡುತ್ತದೆ. ವಾಸು ಎಚ್ಎಸ್, ಶಂಕರಲಿಂಗೇಗೌಡ ಹಾದಿಯಲ್ಲಿ ನಾನು ನಡೆಯುತ್ತೇನೆ. ಮುಂದೆ ನಾನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಚಾಮರಾಜ ಕ್ಷೇತ್ರದ ಜನ ವಿದ್ಯಾವಂತ ಪ್ರತಿನಿಧಿ ಬಯಸುತ್ತಾರೆ ಎಂದು ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋ*ಟ – ಅಕ್ರಮ ಬಾಂಗ್ಲಾ ವಲಸಿಗರಿದ್ದ ಶೆಡ್ ಭಸ್ಮ!
ಸಿಎಂ ಸಿದ್ದರಾಮಯ್ಯ ಯಾವತ್ತಿಗೂ ದೇವರಾಜ ಅರಸು ಆಗಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಸತ್ತಿದೆ. ಆಡಳಿತದ ಹೆಣವನ್ನು ಸಿಎಂ- ಡಿಸಿಎಂ ಮುಂದೆ ಹಿಂದೆ ಹೊತ್ತಿದ್ದಾರೆ. ಸಿದ್ದರಾಮಯ್ಯ ಬಹಳ ಬೇಗ ಜನರ ಮನಸಿನಿಂದ ದೂರ ಆಗುತ್ತಾರೆ. ಜನ ಸಿದ್ದರಾಮಯ್ಯ ಅವರನ್ನು ಮರೆಯುವ ದಿನಗಳು ಬಹಳ ದೂರವಿಲ್ಲ. ಡಿಕೆ ಶಿವಕುಮಾರ್ ಜೊತೆ ಪೈಪೋಟಿ ಮಾಡಿ ಇನ್ನಷ್ಟು ದಿನ ಸ್ಥಾನ ಉಳಿಸಿಕೊಳ್ಳಬಹುದು. ಆದರೆ ಏನೂ ಪ್ರಯೋಜನ ಇಲ್ಲ. ಜನ ಚುನಾವಣೆಯಲ್ಲಿ ಮಾಡಿದ ತಪ್ಪಿನಿಂದ ಅಧಿಕಾರಕ್ಕೆ ಬಂದಿದ್ದಾರೆ. ಇನ್ನು ಎರಡೂವರೆ ವರ್ಷದ ಆಡಳಿತ ಸಹಿಸಿಕೊಳ್ಳಬೇಕು. ಸರ್ಕಾರವೇನೂ ಬೀಳಲ್ಲ. ಆದರೆ ಕುರ್ಚಿಯಲ್ಲಿ ಕೂರುವವರು ಬದಲಾಗಬಹುದು ಎಂದು ಪ್ರತಾಪ್ ಸಿಂಹ ಹೇಳಿಕೆ ನೀಡಿದರು.

ನೋಡಿರಿ

