ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡದ ಕಮಾಲ್ – ಹ್ಯಾಟ್ರಿಕ್ ಗೆಲುವು

ಪ್ರಸ್ತುತ ನಡೆಯುತ್ತಿರುವ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನವನ್ನು ತೋರುತ್ತಿರುವ ಕರ್ನಾಟಕ ತಂಡ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. ಸೋಮವಾರ ಟೂರ್ನಿಯ ಎ ಗುಂಪಿನ ಮೂರನೇ ಸುತ್ತಿನ ಪಂದ್ಯದಲ್ಲಿ ಕೆ ಶ್ರೀಜಿತ್ ಹಾಗೂ ಶ್ರೇಯಸ್ ಗೋಪಾಲ್ ಅವರ ಅರ್ಧಶತಕಗಳ ಬಲದಿಂದ ಕರ್ನಾಟಕ ತಂಡ 4 ವಿಕೆಟ್ಗಳಿಂದ ಬಲಿಷ್ಠ ತಮಿಳುನಾಡು ತಂಡವನ್ನು ಮಣಿಸಿತು. ಆ ಮೂಲಕ ಎ ಗುಂಪಿನ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.
ಅಹಮದಾಬಾದ್ನ ಗುಜರಾತ್ ಕಾಲೇಜು ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ತಮಿಳುನಾಡು ನೀಡಿದ್ದ 289 ರನ್ಗಳ ಗುರಿಯನ್ನು ಹಿಂಬಾಲಿಸಿದ ಕರ್ನಾಟಕ ತಂಡ, ಮಯಾಂಕ್ ಅಗರ್ವಾಲ್, ಕೆ ಶ್ರೀಜಿತ್ ಹಾಗೂ ಶ್ರೇಯಸ್ ಗೋಪಾಲ್ ಅವರ ಅರ್ಧಶತಕಗಳ ಬಲದಿಂದ 47.1 ಓವರ್ಗಳಿಗೆ 6 ವಿಕೆಟ್ಗಳ ನಷ್ಟಕ್ಕೆ 293 ರನ್ಗಳನ್ನು ಗಳಿಸಿ ಗೆದ್ದು ಬೀಗಿತು. ಇದರೊಂದಿಗೆ 50 ಓವರ್ಗಳ ಟೂರ್ನಿಯಲ್ಲಿ ಕರ್ನಾಟಕ ತಂಡ ಸತತ ಮೂರನೇ ಗೆಲುವನ್ನು ತನ್ನದಾಗಿಸಿಕೊಂಡಿತು.
ಇದನ್ನೂ ಓದಿ: ಬೆಂಗಳೂರು ಪ್ರಯಾಣಿಕರೇ ದಯವಿಟ್ಟು ಗಮನಿಸಿ- ಡಿಸೆಂಬರ್ 31ರ ರಾತ್ರಿಯೆಲ್ಲಾ ಓಡಾಡುತ್ತೆ ನಮ್ಮ ಮೆಟ್ರೋ
ಮಯಾಂಕ್ ಅಗರ್ವಾಲ್ ಅರ್ಧಶತಕ
ಕರ್ನಾಟಕ ತಂಡದ ಚೇಸಿಂಗ್ನಲ್ಲಿ ಮಯಾಂಕ್ ಅಗರ್ವಾಲ್, ಕೆ ಶ್ರೀಜಿತ್ ಹಾಗೂ ಶ್ರೇಯಸ್ ಗೋಪಾಲ್ ತಲಾ ಅರ್ಧಶತಕಗಳನ್ನು ಬಾರಿಸಿ ಬಹು ಮುಖ್ಯ ಪಾತ್ರವನ್ನು ವಹಿಸಿದರು. ಇನಿಂಗ್ಸ್ ಆರಂಭಿಸಿದ ಮಯಾಂಕ್ ಅಗರ್ವಾಲ್ 77 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 58 ರನ್ ಗಳಿಸಿದರು. ಆದರೆ, ದೇವದತ್ ಪಡಿಕ್ಕಲ್ (22) ಹಾಗೂ ಕರುಣ್ ನಾಯರ್ (17) ಅವರು ವಿಫಲರಾದರು. ಇವರ ಜೊತೆಗೆ ಸ್ಮರಣ್ ರವಿಚಂದ್ರನ್ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ಇರಲಿಲ್ಲ. ಆದರೆ, ಒಂದು ಕಡೆ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ್ದ ಮಯಾಂಕ್ ಅಗರ್ವಾಲ್, ಅರ್ಧಶತಕ ಬಾರಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿದರು.
ಮಯಾಂಕ್ ವಿಕೆಟ್ ಒಪ್ಪಿಸಿದ ಬಳಿಕ ಜವಾಬ್ದಾರಿಯುತವಾಗಿ ಬ್ಯಾಟ್ ಮಾಡಿದ ಕೃಷ್ಣನ್ ಶ್ರೀಜಿತ್ ಹಾಗೂ ಶ್ರೇಯಸ್ ಗೋಪಾಲ್ ಐದನೇ ವಿಕೆಟ್ಗೆ 116 ರನ್ಗಳ ನಿರ್ಣಾಯಕ ಜೊತೆಯಾಟವನ್ನು ಆಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಯುವ ಬ್ಯಾಟ್ಸ್ಮನ್ ಶ್ರೀಜಿತ್, 78 ಎಸೆತಗಳಲ್ಲಿ ಎರಡು ಹಾಗೂ 7 ಬೌಂಡರಿಗಳೊಂದಿಗೆ 77 ರನ್ ಗಳಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಉತ್ತಮವಾಗಿ ಬ್ಯಾಟ್ ಮಾಡಿದ ಶ್ರೇಯಸ್ ಗೋಪಾಲ್, 47 ಎಸೆತಗಳಲ್ಲಿ 55 ರನ್ ಗಳಿಸಿ ಕೊನೆಯಲ್ಲಿ ಔಟ್ ಆದರು. ಅಭಿನವ್ ಮನೋಹರ್ (20*) ಹಾಗೂ ವಿದ್ಯಾದರ್ ಪಾಟೀಲ್ (17*) ಅವರು ತಂಡವನ್ನು ಗೆಲುವಿನ ದಡ ಸೇರಿಸಿದ್ದರು.
288 ರನ್ ಕಲೆ ಹಾಕಿದ್ದ ತಮಿಳುನಾಡು
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ್ದ ತಮಿಳುನಾಡು ತಂಡ, ಅಭಿಲಾಷ್ ಶೆಟ್ಟಿ ಮಾರಕ ಬೌಲಿಂಗ್ ಹೊರತಾಗಿಯೂ ಎನ್ ಜಗದೀಶನ್ (65 ರನ್) ಹಾಗೂ ಪ್ರದೋಶ್ ಪಾಲ್ (57 ರನ್) ಅವರ ಅರ್ಧಶತಕಗಳ ಬಲದಿಂದ 49.5 ಓವರ್ಗಳಿಗೆ 288 ರನ್ಗಳಿಗೆ ಆಲೌಟ್ ಆಗಿತ್ತು. ಆ ಮೂಲಕ ಎದುರಾಳಿ ಕರ್ನಾಟಕ ತಂಡಕ್ಕೆ 289 ರನ್ಗಳ ಗುರಿಯನ್ನು ನೀಡಿತ್ತು. ಬಾಬಾ ಇಂದ್ರಜಿತ್ 28 ರನ್, ಮೊಹಮ್ಮದ್ ಅಲಿ 31 ರನ್ ಹಾಗೂ ಸಾಯಿ ಕಿಶೋರ್ 38 ರನ್ಗಳನ್ನು ಗಳಿಸಿದ್ದರು. ಕರ್ನಾಟಕ ಪರ ಅಭಿಲಾಷ್ ಶೆಟ್ಟಿ 4 ವಿಕೆಟ್ ಕಿತ್ತಿದ್ದರೆ, ವಿದ್ಯಾದರ್ ಪಾಟೀಲ್ ಮತ್ತು ಶ್ರೀಶಾ ಆಚಾರ್ ತಲಾ ಎರಡೆರಡು ವಿಕೆಟ್ಗಳನ್ನು ಪಡೆದಿದ್ದರು.

ನೋಡಿರಿ

