ಸಂಸತ್ತಿನಲ್ಲಿ ಧನ್ಯವಾದಗಳು, ಜೈ ಹಿಂದ್, ಮತ್ತು ವಂದೇ ಮಾತರಂ ಪದ ಬಳಕೆ ಮಾಡುವಂತಿಲ್ಲ

ಸಂಸತ್ತಿನಲ್ಲಿ ಧನ್ಯವಾದಗಳು, ಜೈ ಹಿಂದ್, ಮತ್ತು ವಂದೇ ಮಾತರಂ ಪದ ಬಳಕೆ ಮಾಡುವಂತಿಲ್ಲ

ಸಂಸತ್ತಿನ ಚಳಿಗಾಲದ ಅಧಿವೇಶನ  ಡಿಸೆಂಬರ್ 1ರಂದು ಪ್ರಾರಂಭವಾಗಲಿದೆ. ರಾಜ್ಯಸಭೆಯ ಬುಲೆಟಿನ್‌ನಲ್ಲಿ ಸಂಸದರು ತಮ್ಮ ಕಲಾಪಗಳ ಸಮಯದಲ್ಲಿ ಕೆಲವು ಪದಗಳನ್ನು ಬಳಸುವುದನ್ನು ತಪ್ಪಿಸುವಂತೆ ಸಲಹೆ ನೀಡಲಾಗಿದೆ. ರಾಜ್ಯಸಭೆಯು ಸೋಮವಾರ ಹೊರಡಿಸಿದ ಬುಲೆಟಿನ್‌ನಲ್ಲಿ ಸಂಸತ್ತಿನ ಸದಸ್ಯರು ತಮ್ಮ ಭಾಷಣಗಳನ್ನು ಧನ್ಯವಾದಗಳು, ಜೈ ಹಿಂದ್, ಮತ್ತು ವಂದೇ ಮಾತರಂ ಮುಂತಾದ ನುಡಿಗಟ್ಟುಗಳೊಂದಿಗೆ ಮುಕ್ತಾಯಗೊಳಿಸಬಾರದು ಎಂದು ಸ್ಪಷ್ಟವಾಗಿ ಹೇಳಿದೆ.

ದೇಶವು ಪ್ರಸ್ತುತ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಕುರಿತು ವಿವಾದದಲ್ಲಿ ಸಿಲುಕಿರುವಾಗ, ರಾಜ್ಯಸಭೆಯ ಬುಲೆಟಿನ್ ಕೂಡ ವಿವಾದವನ್ನು ಹುಟ್ಟುಹಾಕಿದೆ. ಹಲವಾರು ನಾಯಕರು ಬುಲೆಟಿನ್ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಸ್ಪೀಕರ್ ನೀಡುವ ತೀರ್ಪುಗಳನ್ನು ಸದನದ ಒಳಗೆ ಅಥವಾ ಹೊರಗೆ ನೇರವಾಗಿ ಅಥವಾ ಪರೋಕ್ಷವಾಗಿ ಟೀಕಿಸಬಾರದು ಎಂದು ಅದು ಹೇಳಿದೆ.

ಇದನ್ನೂ ಓದಿ: ಉಡುಪಿಗೆ ನಾಳೆ ಮೋದಿ ಎಂಟ್ರಿ – ಹೇಗಿದೆ ಗೊತ್ತಾ ಸೆಕ್ಯೂರಿಟಿ ?

ಒಬ್ಬ ಸದಸ್ಯರು ಮತ್ತೊಬ್ಬ ಸದಸ್ಯರನ್ನು ಟೀಕಿಸಿ, ನಂತರ ಅವರು ಉತ್ತರಿಸುವಾಗ ಗೈರುಹಾಜರಾದರೆ ಅದನ್ನು ವಿಶ್ವಾಸದ್ರೋಹವೆಂದು ಪರಿಗಣಿಸಲಾಗುತ್ತದೆ ಎಂದು ಬುಲೆಟಿನ್ ಹೇಳಿದೆ. ಯಾವುದೇ ಸದಸ್ಯರು ಮತ್ತೊಬ್ಬ ಸದಸ್ಯರು ಅಥವಾ ಸಚಿವರ ಬಗ್ಗೆ ಟೀಕೆ ಮಾಡಿದಾಗ, ಆ ವಿಮರ್ಶಕ ತನ್ನ ಉತ್ತರವನ್ನು ಕೇಳಲು ಸದನದಲ್ಲಿ ಹಾಜರಿರಬೇಕು ಎಂದು ನಿರೀಕ್ಷಿಸುವ ಹಕ್ಕನ್ನು ಹೊಂದಿರುತ್ತಾರೆ. ಅವರು ಉತ್ತರಿಸುವಾಗ ಗೈರುಹಾಜರಾಗುವುದು ಸಂಸದೀಯ ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದು ಅದು ಹೇಳಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನ ಡಿಸೆಂಬರ್ 1 ರಂದು ಪ್ರಾರಂಭವಾಗಿ ಡಿಸೆಂಬರ್ 19 ರವರೆಗೆ ನಡೆಯಲಿದೆ. ಸಂಸತ್ತಿನ ಒಳಗೆ ಜೈ ಹಿಂದ್‌ ಮತ್ತು ವಂದೇ ಮಾತರಂ ಎಂದು ಹೇಳುವುದನ್ನು ನಿಷೇಧಿಸಲಾಗಿದೆ ಎಂಬ ಬಗ್ಗೆ ಕೆಲ ಮಾಧ್ಯಮಗಳ ವರದಿ ನೋಡಿದೆ. ಇದು ಕಳವಳಕಾರಿ. ರಾಜ್ಯದ ಅಸ್ಮಿತೆಯನ್ನು ಕುಂದಿಸುವ ಕ್ರಮವೇ ಇದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದರು.

ವಂದೇ ಮಾತರಂ ನಮ್ಮ ರಾಷ್ಟ್ರೀಯ ಗೀತೆ ಎಂಬುದನ್ನು ನಾವು ಮರೆಯಬಾರದು. ಇದನ್ನು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಸ್ವತಂತ್ರ ಹೋರಾಟದಲ್ಲಿ ಬಳಸುತ್ತಿದ್ದರು. ಇದನ್ನು ಮರೆಯುವುದು ಹೇಗೆ, ಬಂಗಾಳದ ಅಸ್ಮಿತೆಯನ್ನು ಹಾಳು ಮಾಡಲು ಹೋರಟಿದ್ದಾರೆಯೇ? ಎಂದರು. ನಾವು ಅದನ್ನು ಏಕೆ ಹೇಳಬಾರದು? ನಾವು ಬಂಗಾಳಿಯಲ್ಲಿ ಜೈ ಬಾಂಗ್ಲಾ ಎಂದು ಹೇಳುತ್ತೇವೆ. ನಾವು ವಂದೇ ಮಾತರಂ ಎಂದು ಹೇಳುತ್ತೇವೆ. ಇದು ನಮ್ಮ ಸ್ವಾತಂತ್ರ್ಯ ಘೋಷಣೆ. ಇದು ರಾಷ್ಟ್ರಗೀತೆ. ಜೈ ಹಿಂದ್ ನೇತಾಜಿ (ಸುಭಾಷ್ ಚಂದ್ರ ಬೋಸ್) ಅವರ ಘೋಷಣೆ. ನಾವು ಈ ಘೋಷಣೆಗಾಗಿ ಹೋರಾಡಿದೆವು. ಇದು ನಮ್ಮ ದೇಶದ ಘೋಷಣೆ ಎಂದರು.

Kishor KV