ಉಡುಪಿಗೆ ನಾಳೆ ಮೋದಿ ಎಂಟ್ರಿ – ಹೇಗಿದೆ ಗೊತ್ತಾ ಸೆಕ್ಯೂರಿಟಿ ?

ಉಡುಪಿಗೆ ನಾಳೆ ಮೋದಿ ಎಂಟ್ರಿ – ಹೇಗಿದೆ ಗೊತ್ತಾ ಸೆಕ್ಯೂರಿಟಿ ?

ನಾಳೆ ಉಡುಪಿಗೆ  ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಉಡುಪಿ ಶ್ರೀ ಕೃಷ್ಣ ಮಠದಲ್ಲಿ ದೇವರ ದರ್ಶನ ಹಾಗೂ ರೋಡ್‌ ಶೋ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಬಿಗಿ ಭದ್ರತೆ ಹಾಕಲಾಗಿದ್ದು, ಈ ಸಮಯದಲ್ಲಿ ಸಾರ್ವಜನಿಕರಿಗೆ ಮಠದಲ್ಲಿ ದೇವರ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ ಭದ್ರತೆಯನ್ನು ನಿಯೋಜನೆ ಮಾಡಲಾಗಿದೆ.

ನಾಳೆ ಬೆಳಿಗ್ಗೆ 11:05 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ತಕ್ಷಣವೇ 11.10ಕ್ಕೆ ಹೆಲಿಕಾಪ್ಟರ್ ಮೂಲಕ ಉಡುಪಿಗೆ ತೆರಳಲಿದ್ದಾರೆ. ಅವರು ಬೆಳಿಗ್ಗೆ 11.35ಕ್ಕೆ ಉಡುಪಿಯ ಹೆಲಿಪ್ಯಾಡ್ ತಲುಪಲಿದ್ದಾರೆ. ಶ್ರೀಕೃಷ್ಣನ ದರ್ಶನ ಪಡೆದು ಲಕ್ಷಕಂಠ ಗೀತ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಮೋದಿ, ಭಗವದ್ಗೀತೆಯ 10 ಶ್ಲೋಕಗಳನ್ನು ಪಠಿಸಲಿದ್ದಾರೆ. ಕಾರ್ಯಕ್ರಮ ಮುಗಿಸಿಕೊಂಡು ಮತ್ತೆ ಮಂಗಳೂರಿಗೆ ವಾಪಸಾಗಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಏರ್‌ಪೋರ್ಟಿಗೆ ವಾಪಸ್ ಆಗಲಿದ್ದಾರೆ. ಹೀಗಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಲಾಗಿದೆ. ಏರ್ಪೋರ್ಟ್‌ನಲ್ಲಿಯೇ SPG ಮತ್ತು ಐಬಿ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ.

ಉಡುಪಿಯಲ್ಲಿ ಸಂಚಾರ ಬದಲಾವಣೆ

ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಿರುವುದರಿಂದ ದಿನಾಂಕ 28/11/2025 ರ ಬೆಳಿಗ್ಗೆ 11:00 ಗಂಟೆಯಿಂದ ಕಾರ್ಯಕ್ರಮದ ಅಂತ್ಯದವರೆಗೆ ಸಂಚಾರ ಮಾರ್ಗ ಈ ಕೆಳಗಿನಂತೆ ಬದಲಾವಣೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.

ಸನ್ಮಾನ್ಯ ಪ್ರಧಾನ ಮಂತ್ರಿಗಳ ರೋಡ್ ಶೋ ಹಾಗೂ ಕಾರ್ಯಕ್ರಮದ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.

ಮಂಗಳೂರಿನಿಂದ ಕುಂದಾಪುರದ ಕಡೆಗೆ ಚಲಿಸುವ ಲಘು ವಾಹನಗಳು ಉದ್ಯಾವರ – ಮಲ್ಪೆ – ಕೊಡವೂರು -ಆಶೀರ್ವಾದ್‌ ಜಂಕ್ಷನ್ ಮಾರ್ಗ ವಾಗಿ ಸಂಚರಿಸುವುದು

ಕುಂದಾಪುರದಿಂದ ಮಂಗಳೂರಿನ ಕಡೆಗೆ ಚಲಿಸುವ ಲಘು ವಾಹನಗಳು ಅಂಬಾಗಿಲು – ಪೆರಂಪಳ್ಳಿ – ಮಣಿಪಾಲ-ರಾಂಪುರ – ಅಲೆವೂರು – ಕಟಪಾಡಿ ಮಾರ್ಗವಾಗಿ ಸಂಚರಿಸುವುದು.

ಮಲ್ಪೆಯಿಂದ ಮಂಗಳೂರಿನ ಕಡೆಗೆ ಚಲಿಸುವ ಲಘು ವಾಹನಗಳು ಮಲ್ಪೆ – ಕಲ್ಮಾಡಿ – ಕಿದಿಯೂರು – ಕಡೆಕಾರ್ -ಉದ್ಯಾವರ – ಕಟಪಾಡಿ ಮಾರ್ಗವಾಗಿ ಸಂಚರಿಸುವುದು. ಅಥವಾ ಮಲ್ಪೆ – ಪಡುಕೆರೆ -ಮಟ್ಟು- ಕಾಪು ಮಾರ್ಗವಾಗಿ ಸಂಚರಿಸುವುದು.

ಮಲ್ಪೆಯಿಂದ ಕುಂದಾಪುರದ ಕಡೆಗೆ ಚಲಿಸುವ ಲಘು ವಾಹನಗಳು ಮಲ್ಪೆ- ಕೊಡವೂರು – ಆಶೀರ್ವಾದ ಜಂಕ್ಷನ್–ರೋಬೊಸಾಫ್ಟ್. ಮಾರ್ಗವಾಗಿ ಅಥವಾ ನೇಜಾರು – ಸಂತೆಕಟ್ಟೆ ಮಾರ್ಗವಾಗಿ ಸಂಚರಿಸುವುದು.

Kishor KV