ಭಾರತೀಯ ಚಿತ್ರರಂಗದ ಒಂದು ಯುಗ ಅಂತ್ಯವಾಗಿದೆ – ನಟ ಧರ್ಮೇಂದ್ರ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ಬಾಲಿವುಡ್ನ ಹಿರಿಯ ನಟ, ಎವರ್ಗ್ರೀನ್ ಸ್ಟಾರ್, ಆಕ್ಷನ್ ಕಿಂಗ್ ಧರ್ಮೇಂದ್ರ ಅವರು 89ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಕಳೆದ ಕೆಲವು ತಿಂಗಳಿನಿಂದಲೂ ದೀರ್ಘ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಂದು (ನ.34) ತಮ್ಮ ಮುಂಬೈ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಧರ್ಮೇಂದ್ರ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಧರ್ಮೇಂದ್ರ ಅವರ ನಿಧನದಿಂದ ಭಾರತೀಯ ಚಿತ್ರರಂಗದ ಒಂದು ಯುಗ ಅಂತ್ಯವಾಗಿದೆ. ಧರ್ಮೇಂದ್ರ ಅವರದ್ದು ಅಪ್ರತಿಮವಾದ ಚಲನಚಿತ್ರ ವ್ಯಕ್ತಿತ್ವ. ಯಾವುದೇ ಪಾತ್ರವಿದ್ದರೂ ಕೂಡ ಆ ಪಾತ್ರದ ಆಳಕ್ಕಿಳಿದು ನಟನೆ ಮಾಡಿ, ಎಲ್ಲರನ್ನು ಮೋಡಿ ಮಾಡುತ್ತಿದ್ದರು. ತಮ್ಮ ವಿಭಿನ್ನ ಪಾತ್ರಗಳ ಮೂಲಕವೇ ಜನರನ್ನು ತಮ್ಮೆಡೆಗೆ ಸೆಳೆದುಕೊಂಡಿದ್ದರು. ಜೊತೆಗೆ ಅವರ ಸರಳತೆ, ನಮ್ರತೆ ಮತ್ತು ಆತ್ಮೀಯ ಮನೋಭಾವ ಎಲ್ಲರಿಗೂ ಇಷ್ಟವಾಗುವಂತದ್ದು. ಈ ಸಂದರ್ಭದಲ್ಲಿ ಧರ್ಮೇಂದ್ರ ಅವರ ಕುಟುಂಬಸ್ಥರಿಗೆ, ಸ್ನೇಹಿತರಿಗೆ ಹಾಗೂ ಅಭಿಮಾನಿ ವರ್ಗಕ್ಕೆ ನೋವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲೆಂದು ದೇವರಲ್ಲಿ ಪಾರ್ಥಿಸುತ್ತೇನೆ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯ ಕೂಡ ಧರ್ಮೇಂದ್ರ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ದಿಗ್ಗಜ ನಟ ಧರ್ಮೇಂದ್ರ ಅವರ ನಿಧನದಿಂದ ನಾನು ಆಳವಾದ ದುಃಖ ಅನುಭವಿಸುತ್ತಿದ್ದೇನೆ. ಅವರು ಭಾರತೀಯ ಚಿತ್ರರಂಗದ ಅತ್ಯಂತ ಪ್ರೀತಿಸಲ್ಪಟ್ಟ ಐಕಾನಿಕ್ ವ್ಯಕ್ತಿತ್ವಗಳಲ್ಲಿ ಒಬ್ಬರು. ಅವರ ಮರೆಯಲಾಗದ ಅಭಿನಯ ಮತ್ತು ದಶಕಗಳ ಕಾಲ ಸಿನಿಮಾ ಸಂಸ್ಕೃತಿಗೆ ನೀಡಿದ ಕೊಡುಗೆ ಅನೇಕ ತಲೆಮಾರುಗಳ ಮೇಲೆ ಅಚ್ಚಳಿಯದ ಛಾಪು ಬಿತ್ತಿವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಪರಂಪರೆ ಮುಂದಿನ ತಲೆಮಾರುಗಳನ್ನು ಪ್ರೇರೇಪಿಸುತ್ತಿರಲಿ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ನೋಡಿರಿ

