ಸರ್ಕಾರ ಸುಮ್ಮನಿದ್ರೆ ರೈತರ ಕಿಚ್ಚು ಇಡೀ ರಾಜ್ಯ ವ್ಯಾಪಿಸುತ್ತೆ – ಬಿವೈ ವಿಜಯೇಂದ್ರ

ಸರ್ಕಾರ ಸುಮ್ಮನಿದ್ರೆ ರೈತರ ಕಿಚ್ಚು ಇಡೀ ರಾಜ್ಯ ವ್ಯಾಪಿಸುತ್ತೆ – ಬಿವೈ ವಿಜಯೇಂದ್ರ

ರೈತರು ಬೀದಿಗಿಳಿದು ಮಾಡುತ್ತಿರುವ ಹೋರಾಟದ ಕಿಚ್ಚನ್ನು ಇಲ್ಲೇ ಆರಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡಬೇಕು. ಇಲ್ಲವಾದರೆ ಈ ಕಿಚ್ಚು ಇಡೀ ರಾಜ್ಯ ವ್ಯಾಪಿಸಲಿದೆ. ಇದಕ್ಕೆ ಅವಕಾಶ ಮಾಡಿಕೊಡದೆ ತಕ್ಷಣ ರಾಜ್ಯ ಸರಕಾರ ಕಬ್ಬಿಗೆ ಯೋಗ್ಯ ದರ ಘೋಷಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹಿಸಿದರು.

ಕಬ್ಬಿನ ದರ ನಿಗದಿಗಾಗಿ ರೈತರು ನಡೆಸುತ್ತಿರುವ ಹೋರಾಟಕ್ಕೆ ರಾಜ್ಯ ಸರಕಾರ ತಕ್ಷಣ ಸ್ಪಂದಿಸಬೇಕು. ಇಲ್ಲವಾದರೆ ನ್ಯಾಯ ಸಿಗುವವರೆಗೂ ರೈತರ ಹೋರಾಟದಲ್ಲಿ ನಾನು ಭಾಗಿಯಾಗುತ್ತೇನೆ. ನಾನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಅಥವಾ ಶಿಕಾರಿಪುರದ ಶಾಸಕನಾಗಿ ಇಲ್ಲಿಗೆ ಬಂದಿಲ್ಲ. ರೈತರ ಜತೆಗೆ ನಿರಂತರವಾಗಿ ಹೋರಾಟ ಮಾಡಿದ ಯಡಿಯೂರಪ್ಪ ಅವರ ಮಗನಾಗಿ ಬಂದಿದ್ದೇನೆ. ಆದರೆ, ಆರು ದಿನಗಳಿಂದ ರೈತರು ಮಾಡುತ್ತಿರುವ ಹೋರಾಟದ ಸ್ಥಳಕ್ಕೆ ಜನಪ್ರತಿನಿಧಿಗಳು ಬಂದಿಲ್ಲ. ಇದು ಲಜ್ಜೆಗೆಟ್ಟ ಸರಕಾರ  ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಶವ ಹೂತಿಟ್ಟ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌! – ಎಸ್‍ಐಟಿ ಮುಖ್ಯಸ್ಥರಿಗೆ ಮತ್ತೊಂದು ಪತ್ರ!

 ಎಫ್‌ಆರ್‌ಪಿ ದೇಶಾದ್ಯಂತ ಇದೆ. ಮಹಾರಾಷ್ಟ್ರದಲ್ಲಿ ಟನ್‌ ಕಬ್ಬಿಗೆ 3400 ರೂ. ನೀಡುತ್ತಿದ್ದಾರೆ ಎಂದರೆ ರಾಜ್ಯದಲ್ಲಿ ಏಕೆ ಕೊಡುತ್ತಿಲ್ಲ. ರೈತರ ಮೇಲೆ ಕಾಳಜಿ ಇರುವಂತ ಸರಕಾರ ರಾಜ್ಯದಲ್ಲಿ ಇದ್ದಿದ್ದರೆ ಕಾರ್ಖಾನೆಗಳು ಪ್ರಾರಂಭವಾಗುವುದಕ್ಕಿಂತಲೂ ಮೊದಲೇ ರೈತ ಮುಖಂಡರ ಹಾಗೂ ಕಾರ್ಖಾನೆ ಮಾಲೀಕರ ಸಭೆ ನಡೆಸಿ ದರ ನಿಗದಿ ಮಾಡಬೇಕಿತ್ತು,” ಎಂದು ಬಿ.ವೈ. ವಿಜಯೇಂದ್ರ ಅಭಿಪ್ರಾಯಪಟ್ಟರು.

ರೈತರ ಬೃಹತ್‌ ಪ್ರತಿಭಟನಾ ಸಭೆಯಲ್ಲಿ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಮಾಜಿ ಶಾಸಕ ಪಿ. ರಾಜು, ವಿಶ್ವನಾಥ್‌ ಪಾಟೀಲ್‌, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಸ್‌ ಪಾಟೀಲ್‌, ಮಾಜಿ ಜಿಪಂ ಸದಸ್ಯ ಗೋವಿಂದ ಕೊಪ್ಪದ, ಅಡಿಗನಾಳದ ಮುತೇಶ್ವರ ಸ್ವಾಮೀಜಿ ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.

Kishor KV