ರವೀಂದ್ರ ಜಡೇಜಾ ಹೆಂಡತಿ ರಿವಾಬಾ ಜಡೇಜಾಗೆ ಗುಜರಾತ್ ಸಚಿವ ಸ್ಥಾನ

ರವೀಂದ್ರ ಜಡೇಜಾ ಹೆಂಡತಿ  ರಿವಾಬಾ ಜಡೇಜಾಗೆ ಗುಜರಾತ್ ಸಚಿವ ಸ್ಥಾನ

ಗುಜರಾತ್ ರಾಜಕೀಯದಲ್ಲಿ ನಡೆದ ಮಹತ್ವದ ಬೆಳವಣಿಗೆಯೊಂದರಲ್ಲಿ, ಭೂಪೇಂದ್ರ ಪಟೇಲ್ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟವನ್ನು ಸಂಪೂರ್ಣವಾಗಿ ಪುನಾರಚಿಸಲಾಗಿದೆ. ಶುಕ್ರವಾರ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಹರ್ಷ್ ಸಾಂಘ್ವಿ ಅವರು ರಾಜ್ಯದ ನೂತನ ಉಪಮುಖ್ಯಮಂತ್ರಿಯಾಗಿ ಮತ್ತು 25 ಶಾಸಕರು ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಈ ಮೂಲಕ, ಸುಮಾರು ನಾಲ್ಕು ವರ್ಷಗಳ ನಂತರ ರಾಜ್ಯದಲ್ಲಿ ಉಪಮುಖ್ಯಮಂತ್ರಿ ಹುದ್ದೆಯನ್ನು ಮತ್ತೆ ಸೃಷ್ಟಿಸಲಾಗಿದೆ.

ಇದನ್ನೂ ಓದಿ: RSS ಮಾತ್ರವಲ್ಲ, ಎಲ್ಲ ಖಾಸಗಿ ಸಂಸ್ಥೆಗಳಿಗೂ ಸರ್ಕಾರ ಜಾಗಕ್ಕೆ ನಿರ್ಬಂಧ – ಸಿಎಂ ಸಿದ್ದರಾಮಯ್ಯ

ಈ ಸಂಪುಟ ಪುನಾರಚನೆಯಲ್ಲಿ ಹಲವು ಹೊಸ ಮುಖಗಳಿಗೆ ಮಣೆ ಹಾಕಲಾಗಿದ್ದು, ಜಾಮ್‌ನಗರ ಉತ್ತರ ಕ್ಷೇತ್ರದ ಶಾಸಕಿ ಮತ್ತು ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಮೊದಲ ಬಾರಿಗೆ ಸಚಿವರಾಗಿರುವುದು ಪ್ರಮುಖ ಆಕರ್ಷಣೆಯಾಗಿದೆ. ಇವರೊಂದಿಗೆ ಸ್ವರೂಪ್‌ಜಿ ಠಾಕೂರ್, ಪ್ರವೀಣ್‌ ಕುಮಾರ್ ಮಾಲಿ, ಋಷಿಕೇಶ್ ಪಟೇಲ್, ದರ್ಶನಾ ವಾಘೇಲಾ, ಕುವರ್ಜಿ ಬಾವಲಿಯಾ, ಅರ್ಜುನ್ ಮೋಧ್ವಾಡಿಯಾ, ಪರುಷೋತ್ತಮ್ ಸೋಲಂಕಿ, ಜಿತೇಂದ್ರ ವಘಾನಿ ಮತ್ತು ಪ್ರಫುಲ್ ಪನ್‌ಶೇರಿಯಾ ಸೇರಿದಂತೆ ಒಟ್ಟು 26 ಮಂದಿ ನೂತನ ಸಚಿವರ ಪಟ್ಟಿಯಲ್ಲಿದ್ದಾರೆ.

ಸಂಪುಟ ವಿಸ್ತರಣೆಗೂ ಒಂದು ದಿನ ಮೊದಲು, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರನ್ನು ಹೊರತುಪಡಿಸಿ, ಈ ಹಿಂದಿನ ಸಂಪುಟದಲ್ಲಿದ್ದ ಎಲ್ಲಾ 16 ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆಯನ್ನು ಸಲ್ಲಿಸಿದ್ದರು. ಹಿಂದಿನ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿ ಒಟ್ಟು 17 ಮಂದಿ ಇದ್ದರು. ಇದೀಗ ಸಂಪುಟದ ಗಾತ್ರ 27ಕ್ಕೆ ಏರಿಕೆಯಾಗಿದೆ. ಈ ಪುನಾರಚನೆಯು ಆಡಳಿತಕ್ಕೆ ಹೊಸ ಚೈತನ್ಯ ನೀಡುವುದಲ್ಲದೆ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ 2027ರ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ‘ಕಾರ್ಯತಂತ್ರದ ಮರುಹೊಂದಾಣಿಕೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಪ್ರಮಾಣ ವಚನ ಸಮಾರಂಭಕ್ಕೂ ಮುನ್ನ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರನ್ನು ಭೇಟಿಯಾಗಿ, ನೂತನ ಸಚಿವರ ಪಟ್ಟಿಯನ್ನು ಸಲ್ಲಿಸಿ, ಸಮಾರಂಭಕ್ಕೆ ಅನುಮೋದನೆ ಪಡೆದಿದ್ದರು.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ ಸಂವಿಧಾನದ ಪ್ರಕಾರ ಗರಿಷ್ಠ 27 ಸಚಿವರಿಗೆ ಅವಕಾಶವಿದೆ. ನೂತನ ಸಂಪುಟದಲ್ಲಿ 7 ಪಾಟೀದಾರರು, 8 ಒಬಿಸಿ, 3 ಪರಿಶಿಷ್ಟ ಜಾತಿ, 4 ಪರಿಶಿಷ್ಟ ಪಂಗಡ ಮತ್ತು 3 ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಮೂಲಕ ಸಾಮಾಜಿಕ ಸಮತೋಲನವನ್ನೂ ಕಾಯ್ದುಕೊಳ್ಳಲಾಗಿದೆ. ಇತ್ತೀಚೆಗೆ ಕೇಂದ್ರ ಸಚಿವ ಸಿ.ಆರ್. ಪಾಟೀಲ್ ಅವರ ಬದಲಿಗೆ ರಾಜ್ಯ ಬಿಜೆಪಿ ಘಟಕದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದ ಜಗದೀಶ್ ವಿಶ್ವಕರ್ಮ ಅವರನ್ನು, ಪಕ್ಷದ ‘ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ’ ನೀತಿಯ ಅನ್ವಯ ನೂತನ ಸಂಪುಟದಿಂದ ಹೊರಗಿಡಲಾಗಿದೆ

Kishor KV