ಭಾರತದ ನೆಲದಲ್ಲಿ ಪಾಕ್‌ಗೆ ಅಫ್ಘಾನ್ ಸಚಿವನ ವಾರ್ನಿಂಗ್ – ಭಯೋತ್ಪಾದಕರನ್ನು ನಿರ್ನಾಮ ಮಾಡೋಕೆ ಸೂಚನೆ

ಭಾರತದ ನೆಲದಲ್ಲಿ ಪಾಕ್‌ಗೆ ಅಫ್ಘಾನ್ ಸಚಿವನ ವಾರ್ನಿಂಗ್ –  ಭಯೋತ್ಪಾದಕರನ್ನು ನಿರ್ನಾಮ ಮಾಡೋಕೆ ಸೂಚನೆ

ಭಾರತದೊಂದಿಗೆ ಅಫ್ಘಾನಿಸ್ತಾನ  ಸಂಪೂರ್ಣ ರಾಜತಾಂತ್ರಿಕ ಸಂಬಂಧಗಳನ್ನು ಪುನಃಸ್ಥಾಪಿಸುವುದಾಗಿ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ನೀಡಿದ ಅಫ್ಘಾನ್‌ನ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ  , ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್‌ನಂತಹ  ಭಯೋತ್ಪಾದಕ ಗುಂಪುಗಳು ಅಫ್ಘಾನ್ ನೆಲದಿಂದ ಬಹಳ ಹಿಂದಿನಿಂದಲೂ ಕಾರ್ಯನಿರ್ವಹಿಸುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಅಫ್ಘಾನ್ ನೆಲದಿಂದ ಭಯೋತ್ಪಾದಕರ ನಿರ್ನಾಮ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಶಾಂತಿಯ ಮಾರ್ಗ ಅನುಸರಿಸಲು ಭಯೋತ್ಪಾದಕರಿಗೆ ಈ ಸಂದರ್ಭದಲ್ಲಿ ಕರೆ ನೀಡಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಅಫ್ಘಾನ್‌ನಲ್ಲಿ ತಾಲಿಬಾನ್ ಎಲ್ಲ ಭಯೋತ್ಪಾದಕರನ್ನು ನಿರ್ನಾಮ ಮಾಡಲಾಗಿದೆ. ಪಾಕಿಸ್ತಾನ ಕೂಡ ಇದೇ ಶಾಂತಿಯ ಮಾರ್ಗವನ್ನು ಅನುಸರಿಸಲಿ. ಭಯೋತ್ಪಾದಕರಲ್ಲಿ ಒಬ್ಬರೂ ಕೂಡ ಇಂದು ಅಫ್ಘಾನಿಸ್ತಾನದಲ್ಲಿಲ್ಲ. ಅವರ ನಿಯಂತ್ರಣದಲ್ಲಿ ಒಂದು ಇಂಚು ಭೂಮಿಯೂ ಇಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮುಂಬೈ ತಂಡದಿಂದ ಸೂರ್ಯಕುಮಾರ್‌ಗೆ ಗೇಟ್‌ಪಾಸ್ – ರಣಜಿಗೂ ಲಾಯಕ್ ಇಲ್ವಾ ಸೂರ್ಯ?

ಅಫ್ಘಾನಿಸ್ತಾನ ಶಾಂತಿಗಾಗಿ ಮಾಡಿದಂತಹ ಭಯೋತ್ಪಾದಕ ಗುಂಪುಗಳ ವಿರುದ್ಧ ಕಾರ್ಯಾಚರಣೆಗಳನ್ನು ಇತರ ದೇಶಗಳು ಸಹ ಮಾಡಬೇಕು ಎಂದ ಅವರು ಭಾರತವು ಅಫ್ಘಾನಿಸ್ತಾನದೊಂದಿಗೆ ಸಂಪೂರ್ಣ ರಾಜತಾಂತ್ರಿಕ ಸಂಬಂಧಗಳನ್ನು ಪುನಃಸ್ಥಾಪಿಸುತ್ತದೆ ಎಂದು ತಿಳಿಸಿದರು.ಭಾರತದ ವಿದೇಶಾಂಗ ಸಚಿವ ಜೈಶಂಕರ್, ನವದೆಹಲಿಯು ಕಾಬೂಲ್‌ನಲ್ಲಿರುವ ತನ್ನ ತಾಂತ್ರಿಕ ಮಿಷನ್ ಅನ್ನು ರಾಯಭಾರ ಕಚೇರಿಯಾಗಿ ಮೇಲ್ದರ್ಜೆಗೇರಿಸಲಿದೆ ಎಂದು ತಿಳಿಸಿರುವುದಾಗಿ ಮುತ್ತಕಿ ಹೇಳಿದರು. ಕಾಬೂಲ್‌ನಲ್ಲಿ ಇತ್ತೀಚೆಗೆ ನಡೆದ ಸ್ಫೋಟದ ಕುರಿತು ಮಾತನಾಡಿದ ಅವರು, ಪಾಕಿಸ್ತಾನವು ಈ ಕೃತ್ಯವನ್ನು ಸಂಘಟಿಸುತ್ತಿದೆ ಎಂದು ಆರೋಪಿಸಿದರು. ಇದು ದೂರದ ಪ್ರದೇಶಗಳಲ್ಲಿ ನಡೆದಿದೆ. ಪಾಕಿಸ್ತಾನದ ಈ ಕೃತ್ಯ ತಪ್ಪು. ಸಮಸ್ಯೆಗಳನ್ನು ಈ ರೀತಿ ಪರಿಹರಿಸಲು ಸಾಧ್ಯವಿಲ್ಲ. ನಾವು ಮಾತುಕತೆಗೆ ಮುಕ್ತರಾಗಿದ್ದೇವೆ. 40 ವರ್ಷಗಳ ಅನಂತರ ಅಫ್ಘಾನಿಸ್ತಾನವು ಶಾಂತಿ ಮತ್ತು ಪ್ರಗತಿಯನ್ನು ಹೊಂದಿದೆ. ಯಾರಿಗೂ ಇದರಿಂದ ಸಮಸ್ಯೆ ಇರಬಾರದು. ಅಫ್ಘಾನಿಸ್ತಾನ ಈಗ ಸ್ವತಂತ್ರ ರಾಷ್ಟ್ರವಾಗಿದೆ ಎಂದು ತಿಳಿಸಿದರು.

ಆಫ್ಘನ್ನರ ಧೈರ್ಯವನ್ನು ಪರೀಕ್ಷಿಸಬಾರದು. ಯಾರಾದರೂ ಇದನ್ನು ಮಾಡಲು ಬಯಸಿದರೆ ಅವರು ಸೋವಿಯತ್ ಒಕ್ಕೂಟ, ಅಮೆರಿಕ ಮತ್ತು ನ್ಯಾಟೋವನ್ನು ಕೇಳಬೇಕು. ಅಫ್ಘಾನಿಸ್ತಾನದೊಂದಿಗೆ ಆಟವಾಡುವುದು ಒಳ್ಳೆಯದಲ್ಲ ಎಂದು ಎಚ್ಚರಿಸಿದರು. ಕಾಬೂಲ್ ಇಸ್ಲಾಮಾಬಾದ್‌ನೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತದೆ. ಆದರೆ ಅದು ಏಕಪಕ್ಷೀಯವಾಗಿರಲು ಸಾಧ್ಯವಿಲ್ಲ ಎಂದ ಅವರು, ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದ ಅನಂತರ ಭಾರತ ನೀಡಿರುವ ಸ್ಪಂದನೆಗೆ ನವದೆಹಲಿಯನ್ನು ಶ್ಲಾಘಿಸಿದರು. ಅಫ್ಘಾನಿಸ್ತಾನ ಭಾರತವನ್ನು ತನ್ನ ಆಪ್ತ ಸ್ನೇಹಿತನಂತೆ ನೋಡುತ್ತದೆ. ಪರಸ್ಪರ ಗೌರವ, ವ್ಯಾಪಾರ ಮತ್ತು ಜನರ ನಡುವಿನ ಸಂಬಂಧಗಳ ಆಧಾರದ ಮೇಲೆ ನಾವು ಭಾರತದೊಂದಿಗೆ ಸಂಬಂಧಗಳನ್ನು ಬಯಸುವುದಾಗಿ ಹೇಳಿದ ಅವರು ಈ ಸಂಬಂಧಗಳನ್ನು ಬಲಪಡಿಸಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದರು. ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಹೆಚ್ಚಿನ ಸಹಕಾರದ ಅಗತ್ಯದ ಕುರಿತು ಮಾತನಾಡಿದ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಸುಂಕಗಳ ಬಗ್ಗೆ ಉಲ್ಲೇಖಿಸಿ ಈ ಕುರಿತು ಅಮೆರಿಕದೊಂದಿಗೆ ನಾವು ಜಂಟಿ ಮಾತುಕತೆ ನಡೆಸಬೇಕು ಎಂದು ತಿಳಿಸಿದರು.

 

Kishor KV