ರಾಹುಲ್ ದ್ರಾವಿಡ್ ಪುತ್ರನಿಗೆ ಮತ್ತೊಂದು ಕಿರೀಟ – ಕರ್ನಾಟಕ ತಂಡಕ್ಕೆ ಅನ್ವಯ್ ದ್ರಾವಿಡ್ ನಾಯಕ

ರಾಹುಲ್ ದ್ರಾವಿಡ್ ಪುತ್ರನಿಗೆ ಮತ್ತೊಂದು ಕಿರೀಟ – ಕರ್ನಾಟಕ ತಂಡಕ್ಕೆ ಅನ್ವಯ್ ದ್ರಾವಿಡ್ ನಾಯಕ

ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಕರ್ನಾಟಕ ಅಂಡರ್-19 ತಂಡದ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಭಾನುವಾರವಷ್ಟೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಅತ್ಯುತ್ತಮ ಕಿರಿಯ ಬ್ಯಾಟರ್ ಪ್ರಶಸ್ತಿ ಪಡೆದಿದ್ದ ಅನ್ವಯ್​ಗೆ ಇದೀಗ ಮತ್ತೊಂದು ಗರಿಮೆ ಸಿಕ್ಕಿದೆ.

ಇದನ್ನೂ ಓದಿ: ಟಿ-20ಐ, ಟೆಸ್ಟ್, ಏಕದಿನ.. ಎಲ್ಲೆಲ್ಲೂ ರಾಣಾ –  ಪ್ರದರ್ಶನಕ್ಕಿಂತ ಬಕೆಟ್ ಮುಖ್ಯನಾ?

ಅಕ್ಟೋಬರ್ 9 ರಿಂದ 17 ರವರೆಗೆ ಡೆಹ್ರಾಡೂನ್‌ನಲ್ಲಿ ನಡೆಯಲಿರುವ ವಿನೂ ಮಂಕಡ್ ಟೂರ್ನಿಗಾಗಿ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದ ನಾಯಕರಾಗಿ ಅನ್ವಯ್ ದ್ರಾವಿಡ್ ಸೆಲೆಕ್ಟ್ ಆಗಿದ್ದಾರೆ. ವಿಶೇಷ ಎಂದರೆ ಅನ್ವಯ್ ದ್ರಾವಿಡ್ ವಿಕೆಟ್ ಕೀಪರ್ ಬ್ಯಾಟರ್. ಹೀಗಾಗಿ ಈ ಟೂರ್ನಿಯಲ್ಲಿ ಅವರು ಕೀಪಿಂಗ್ ಜವಾಬ್ದಾರಿಯೊಂದಿಗೆ ನಾಯಕನಾಗಿಯೂ ಕಾಣಿಸಿಕೊಳ್ಳಲಿದ್ದಾರೆ.

ಅನ್ವಯ್ ದ್ರಾವಿಡ್ ಶಾಂತ ಸ್ವಭಾವದವರು. ವಿಕೆಟ್ ಕೀಪಿಂಗ್‌ನಲ್ಲಿ ಎತ್ತಿದ ಕೈ. ಅಂಡರ್-19 ತಂಡದಲ್ಲಿ ಭರ್ಜರಿ ಪ್ರದರ್ಶನ ನೀಡಿದರೆ ಮಾತ್ರ ಅವರು ರಣಜಿ ತಂಡಕ್ಕೆ ಆಯ್ಕೆಯಾಗಬಹುದು. ಹೀಗಾಗಿ ಮುಂಬರುವ ಅಂಡರ್-19 ಟೂರ್ನಿಗಳು ಅನ್ವಯ್ ದ್ರಾವಿಡ್ ಅವರ ಕೆರಿಯರ್​ನಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ ಎನ್ನಬಹುದು.

ಈ ಬಾರಿಯ ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಕರ್ನಾಟಕ ಅಂಡರ್-16 ತಂಡದ ಪರ ಕಣಕ್ಕಿಳಿದಿದ್ದ ಅನ್ವಯ್ ಎಂಟು ಇನಿಂಗ್ಸ್​ಗಳಿಂದ ಒಟ್ಟು 459 ರನ್ ಕಲೆಹಾಕಿದ್ದರು. ಈ ವೇಳೆ ಅವರ ಬ್ಯಾಟ್​ನಿಂದ ಎರಡು ಭರ್ಜರಿ ಶತಕಗಳು ಮೂಡಿ ಬಂದಿವೆ. ಇದರ ನಡುವೆ 48 ಸಿಕ್ಸ್ ಹಾಗೂ ಫೋರ್​ಗಳನ್ನು ಬಾರಿಸಿದ್ದಾರೆ. ಈ ಮೂಲಕ 91.80 ಸರಾಸರಿಯಲ್ಲಿ ರನ್​ಗಳಿಸಿ ಈ ಬಾರಿಯ ವಿಜಯ ಮರ್ಚೆಂಟ್ ಟೂರ್ನಿಯಲ್ಲಿ ಕರ್ನಾಟಕ ಪರ ಅತ್ಯಧಿಕ ರನ್​ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಭರ್ಜರಿ ಪ್ರದರ್ಶನ ಫಲವಾಗಿ ಕರ್ನಾಟಕದ ಅತ್ಯುತ್ತಮ ಕಿರಿಯ ಬ್ಯಾಟರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.

Sulekha