ನವರಾತ್ರಿ 5ನೇ ದಿನ ಸ್ಕಂದಮಾತೆಗೆ ಪೂಜೆ – ದೇವಿಯ ಈ ಅವತಾರದ ಹಿನ್ನೆಲೆಯೇನು?, ಯಾವ ಮಂತ್ರ ಪಠಿಸಬೇಕು?

ನವರಾತ್ರಿಯ ಐದನೇ ದಿನದಂದು ದುರ್ಗಾ ದೇವಿಯ ಐದನೇ ರೂಪವಾದ ಸ್ಕಂದಮಾತಾ ದೇವಿಯನ್ನು ಪೂಜಿಸಲಾಗುತ್ತದೆ. ಸ್ಕಂದಮಾತಾಳು ಸ್ಕಂದ ಅಂದರೆ ಕಾರ್ತಿಕೇಯನ ತಾಯಿಯಾಗಿದ್ದಾಳೆ. ಆದ್ದರಿಂದ ದುರ್ಗಾ ದೇವಿಯ ಐದನೇ ರೂಪವನ್ನು ಸ್ಕಂದಮಾತಾ ದೇವಿಯೆಂದು ಕರೆಯಲಾಗುತ್ತದೆ. ಹಾಗಾಗಿ, ನವರಾತ್ರಿ ಹಬ್ಬದ 5ನೇ ದಿನವು ಹೆಚ್ಚು ಮಹತ್ವವನ್ನು ಪಡೆದುಕೊಂಡಿರುವ ದಿನವಾಗಿದೆ. ನವರಾತ್ರಿ ಹಬ್ಬದ ಐದನೇ ದಿನದಂದು ಸ್ಕಂದಮಾತಾಳನ್ನು ಪೂಜಿಸುವುದರಿಂದ ವ್ಯಕ್ತಿಯು ಆಧ್ಯಾತ್ಮಿಕ ಬೆಳವಣಿಗೆಯನ್ನು ಹೊಂದುತ್ತಾನೆ ಎನ್ನುವ ನಂಬಿಕೆಯಿದೆ.
ಇದನ್ನೂ ಓದಿ: ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡಾ ದೇವಿ ಆರಾಧನೆ – ಬ್ರಹ್ಮಾಂಡವನ್ನು ರಚಿಸಿದ ಆದಿಶಕ್ತಿಯ ವಿಶೇಷತೆಯೇನು?
ಸ್ಕಂದಮಾತಾ ದೇವಿ ಕಥೆ
ಪೌರಾಣಿಕ ನಂಬಿಕೆಯ ಪ್ರಕಾರ, ತಾರಕಾಸುರನೆಂಬ ರಾಕ್ಷಸನು ತೀವ್ರ ತಪಸ್ಸನ್ನು ಮಾಡುವ ಮೂಲಕ ಬ್ರಹ್ಮ ದೇವನ ಆಶೀರ್ವಾದವನ್ನು ಪಡೆದುಕೊಳ್ಳುತ್ತಾನೆ. ಹಾಗೂ ಬ್ರಹ್ಮ ದೇವನು ಪ್ರತ್ಯಕ್ಷನಾದಾಗ ಆತನಿಂದ ಅಮರತ್ವದ ವರವನ್ನು ಪಡೆದುಕೊಳ್ಳುತ್ತಾನೆ. ಆದರೂ ಬ್ರಹ್ಮ ದೇವರು ತಾರಕಾಸುರನನ್ನು ಕುರಿತು ಬ್ರಹ್ಮಾಂಡದಲ್ಲಿ ಸೃಷ್ಟಿಯಾದ ಪ್ರತಿಯೊಂದು ವಸ್ತು, ಜೀವಿಗಳು ಒಂದಲ್ಲ ಒಂದು ನಾಶವಾಗಲೇಬೇಕೆನ್ನುವ ಕಹಿ ಸತ್ಯವನ್ನು ಹೇಳುತ್ತಾನೆ. ಆಗ ತಾರಕಾಸುರನು ಬ್ರಹ್ಮನ ಬಳಿ ನಾನು ಸಾಯುವುದೇ ಆದರೆ ನನಗೆ ಶಿವನ ಮಗನ ಕೈಯಿಂದ ಸಾಯುವ ವರವನ್ನು ನೀಡೆಂದು ಬೇಡಿಕೊಳ್ಳುತ್ತಾನೆ. ಏಕೆಂದರೆ ಶಿವನು ಎಂದಿಗೂ ಮದುವೆಯಾಗುವುದಿಲ್ಲ ಎಂದು ಅವನು ಅಂದುಕೊಂಡಿದ್ದನು ಮತ್ತು ಅವನು ಮದುವೆಯಾದರೂ ಅವನಿಗೆ ಮಗು ಜನಿಸುವುದಿಲ್ಲ ಎಂದು ಭಾವಿಸಿದ್ದನು.
ವರವನ್ನು ಪಡೆದ ಮೇಲೆ, ತಾರಕಾಸುರನು ಜನರನ್ನು ಹಿಂಸಿಸಲು ಪ್ರಾರಂಭಿಸಿದನು ಮತ್ತು ಜನರು ಶಿವನ ಬಳಿಗೆ ಹೋಗಿ ತಾರಕಾಸುರನನ್ನು ಸಂಹಾರ ಮಾಡುವಂತೆ ಪ್ರಾರ್ಥಿಸಿದರು. ನಂತರ ಶಿವ ಪಾರ್ವತಿಯನ್ನು ವಿವಾಹವಾಗುವ ಮೂಲಕ ಕಾರ್ತಿಕೇಯ ಎನ್ನುವ ಗಂಡು ಮಗುವಿಗೆ ತಂದೆಯಾಗುತ್ತಾನೆ. ಕಾರ್ತಿಕೇಯ ಬೆಳೆದಾಗ, ಅವನು ರಾಕ್ಷಸ ತಾರಕಾಸುರನನ್ನು ಕೊಂದನು. ಈಕೆ ಸ್ಕಂದನ ತಾಯಿಯಾದ್ದರಿಂದ ಕಾರ್ತಿಕೇಯ, ಅವಳನ್ನು ಸ್ಕಂದಮಾತೆ ಎಂದು ಕರೆದನು. ಅಂದಿನಿಂದ ಪ್ರತೀ ನವರಾತ್ರಿಯಲ್ಲೂ ದುರ್ಗಾ ದೇವಿಯ ಸ್ಕಂದಮಾತಾ ರೂಪವನ್ನು ಪೂಜಿಸಲಾಗುತ್ತದೆ.
ಸ್ಕಂದಮಾತಾ ಪೂಜೆ ಮಂತ್ರ
ನವರಾತ್ರಿ ಹಬ್ಬದ 5ನೇ ದಿನದಂದು ಸ್ಕಂದಮಾತಾ ದೇವಿಯನ್ನು ಪೂಜಿಸುವುದರೊಂದಿಗೆ ಆಕೆಗೆ ಸಂಬಂಧಿಸಿದ ಮಂತ್ರಗಳನ್ನು ಕೂಡ ಪಠಿಸಲಾಗುತ್ತದೆ.
ಸಿಂಹಾಸನ ಗತ ನಿತ್ಯಂ ಪದ್ಮಾಶ್ರೀ ತಕರದ್ವಯಾ
ಶುಭದಾಸ್ತು ಸದಾ ದೇವಿ ಸ್ಕಂದಮಾತಾ ಯಶಸ್ವಿನಿ
ಯಾ ದೇವಿ ಸರ್ವಭೂತೇಷು ಮಾಂ ಸ್ಕಂದಮಾತಾ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
ಓಂ ದೇವಿ ಸ್ಕಂದಮಾತಾಯೈ ನಮಃ
ಓಂ ಸ್ಕಂದಮಾತ್ರಾಯೈ ನಮಃ
ಪಂಚಮಿ ತಿಥಿಯ ಅಧಿದೇವತೆ ಸ್ಕಂದ ಮಾತೆ. ಮಕ್ಕಳಾಗಬೇಕೆಂಬ ಆಸೆ ಇರುವವರು ಮಾತೃದೇವತೆಯ ಪೂಜೆಯನ್ನು ಮಾಡಬೇಕು ಮತ್ತು ಮಂತ್ರಗಳನ್ನು ಪಠಿಸಬೇಕು. ಇದರಿಂದ ಸಂತಾನ ಭಾಗ್ಯ ಕರುಣಿಸುತ್ತಾಳೆ ಮತ್ತು ಧನ ಲಾಭವನ್ನು ಸೃಷ್ಟಿಸುತ್ತಾಳೆ.
ನವರಾತ್ರಿ 5ನೇ ದಿನದ ಬಣ್ಣ ಮತ್ತು ನೈವೇದ್ಯ
ದುರ್ಗಾ ದೇವಿಗೆ ಬಾಳೆಹಣ್ಣನ್ನು ಅರ್ಪಿಸಬೇಕು ಮತ್ತು ಈ ಪ್ರಸಾದವನ್ನು ಬ್ರಾಹ್ಮಣನಿಗೆ ನೀಡಬೇಕು. ಆರತಿಯ ನಂತರ 5 ಹೆಣ್ಣು ಮಕ್ಕಳಿಗೆ ಬಾಳೆಹಣ್ಣಿನ ಪ್ರಸಾದವನ್ನು ವಿತರಿಸಬೇಕು. ಇದರಿಂದ ಸ್ಕಂದಮಾತಾ ದೇವಿಗೆ ತುಂಬಾ ಸಂತೋಷವಾಗುತ್ತದೆ ಮತ್ತು ಮಕ್ಕಳಿಗೆ ಬರಬಹುದಾದ ಎಲ್ಲಾ ತೊಂದರೆಗಳನ್ನು ನಾಶಪಡಿಸುತ್ತಾಳೆ ಎನ್ನುವ ನಂಬಿಕೆಯಿದೆ.

ನೋಡಿರಿ

