ಮೈಸೂರಿನಲ್ಲಿಂದು ಮಹಿಷ ದಸರಾ – ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ

ಮೈಸೂರಿನಲ್ಲಿಂದು ಮಹಿಷ ದಸರಾ – ಚಾಮುಂಡಿ ಬೆಟ್ಟದಲ್ಲಿ ನಿಷೇಧಾಜ್ಞೆ ಜಾರಿ

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ  ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು ಈಗಾಗಲೇ ಯುವ ದಸರಾ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ.  ಈ ನಡುವೆ ಇಂದು ನಗರದಲ್ಲಿ ಕೆಲವು ಸಂಘಟನೆಗಳು ಮಹಿಷಾದಸರಾ ಆಚರಣೆ ನಡೆಸಲಿವೆ. ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ  ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಚಾಮುಂಡಿ ಬೆಟ್ಟದಲ್ಲಿನ ಮಹಿಷಾಸುರ ಪ್ರತಿಮೆ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಮಾಡಿ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ. ತಡರಾತ್ರಿ 12 ಗಂಟೆಯಿಂದಲೇ ಸೆ.25ರ ಬೆಳಗ್ಗೆ 6 ಗಂಟೆಯವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇಲ್ಲಿ ಯಾವುದೇ ಸಭೆ, ಸಮಾರಂಭ, ಮೆರವಣಿಗೆ ನಡೆಸುವಂತಿಲ್ಲ ಎಂದು ಆದೇಶಿಸಲಾಗಿದೆ.

ಕೆಲವು ಪ್ರಗತಿಪರ, ಕಮ್ಯುನಿಸ್ಟ್ ಸಂಘಟನೆಗಳು ಕಳೆದ ಒಂದೆರಡು ವರ್ಷಗಳಿಂದ ಮಹಿಷ ದಸರಾ ನಡೆಸುತ್ತಿವೆ. ಈ ವರ್ಷ ಬಾನು ಮುಷ್ತಾಕ್‌ ಅವರಿಂದ ಉದ್ಘಾಟನೆಯ ಹಿನ್ನೆಲೆಯಲ್ಲಿ ಈ ಮಹಿಷ ದಸರಾ ನಡೆಯಲಿಕ್ಕಿಲ್ಲ ಎಂದು ಭಾವಿಸಲಾಗಿತ್ತು. ಆದರೆ ಮೂರನೇ ದಿನ ಈ ಸಂಘಟನೆಗಳು ಮಹಿಷ ದಸರಾ ಆಚರಣೆಗೆ ಮುಂದಾಗಿವೆ. ಈ ಆಚರಣೆಯು ಮಹಿಷಾಸುರನ ಪಾರಮ್ಯವನ್ನು ಎತ್ತಿ ಹಿಡಿಯುತ್ತದೆ. ನಿನ್ನೆ ಯುವ ದಸರಾ 2025ಕ್ಕೆ ಚಾಲನೆ ಸಿಕ್ಕಿದ್ದು, 5 ದಿನಗಳ ಕಾಲ ಯುವದಸರಾ ಸಂಭ್ರಮಾಚರಣೆ ಇರಲಿದೆ. ನಿನ್ನೆ ಮೈಸೂರು ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ ಯುವ ದಸರಾ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದರು. ಮೊದಲ ದಿನವಾದ ನಿನ್ನೆ ಅರ್ಜುನ್ ಜನ್ಯ ಮ್ಯೂಸಿಕ್ ಕಲರವ ಜೋರಾಗಿತ್ತು. ಬೆಂಗಳೂರು ಮೂಲದ ಲಗೋರಿ ಬ್ಯಾಂಡ್‌ಗೆ ಯುವಕರು ಕುಣಿದು ಕುಪ್ಪಳಿಸಿದರು.

Kishor KV