ಅನಿಲ್‌ ಅಂಬಾನಿಗೆ ಮತ್ತೆ ಕಂಟಕ – 2,929 ಕೋಟಿ ರೂ. ವಂಚನೆ, ಹೊಸ ಕೇಸ್ ದಾಖಲು

ಅನಿಲ್‌ ಅಂಬಾನಿಗೆ ಮತ್ತೆ ಕಂಟಕ –  2,929 ಕೋಟಿ ರೂ. ವಂಚನೆ,  ಹೊಸ ಕೇಸ್ ದಾಖಲು

ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರಿಗೆ  ಮತ್ತಷ್ಟು ಸಂಕಷ್ಟ ಎದುರಾಗಿದೆ. ಜಾರಿ ನಿರ್ದೇಶನಾಲಯವು ಅವರ ವಿರುದ್ಧ, ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ಇತರರ ವಿರುದ್ಧ 2,929 ಕೋಟಿ ರೂಪಾಯಿಗಳ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ. ಕಳೆದ ತಿಂಗಳು ಸಿಬಿಐ ಸಲ್ಲಿಸಿದ ಪ್ರಥಮ ಮಾಹಿತಿ ವರದಿಯನ್ನು ಆಧರಿಸಿ ಇಡಿ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ   ಗೆ ನಷ್ಟ ಉಂಟುಮಾಡಿದ್ದಾರೆ ಎಂದು ಸಿಬಿಐ ಅಂಬಾನಿ ಮತ್ತು ರಿಲಯನ್ಸ್ ಕಮ್ಯುನಿಕೇಷನ್ಸ್  ಮೇಲೆ ಆರೋಪ ಹೊರಿಸಿತ್ತು ಮತ್ತು ರಿಲಯನ್ಸ್ ಗ್ರೂಪ್ ಅಧ್ಯಕ್ಷರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸಿತ್ತು.

ಆರ್‌ಕಾಮ್ ಮತ್ತು ಮುಂಬೈನಲ್ಲಿರುವ ಉದ್ಯಮಿಗೆ ಸಂಬಂಧಿಸಿದ ಆರು ಸ್ಥಳಗಳಲ್ಲಿ ಶೋಧ ನಡೆಸಲಾಯಿತು ಮತ್ತು ಬ್ಯಾಂಕ್ ಹಣವನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗಿದೆ ಮತ್ತು ಸಾಲಗಳನ್ನು ಬೇರೆಡೆಗೆ ತಿರುಗಿಸಲಾಗಿದೆಯೇ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 13 ರಂದು ಎಸ್‌ಬಿಐ ಆರ್‌ಕಾಮ್ ಮತ್ತು ಅಂಬಾನಿಯನ್ನು “ವಂಚನೆ” ಎಂದು ವರ್ಗೀಕರಿಸಿ ಜೂನ್ 24 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಗೆ ವರದಿಯನ್ನು ಕಳುಹಿಸಿತ್ತು.

ನಮ್ಮ ಶೋಕಾಸ್ ನೋಟಿಸ್‌ಗೆ ಬಂದ ಪ್ರತಿಕ್ರಿಯೆಗಳನ್ನು ನಾವು ಗಮನದಲ್ಲಿಟ್ಟುಕೊಂಡಿದ್ದೇವೆ ಮತ್ತು ಅದನ್ನು ಸರಿಯಾಗಿ ಪರಿಶೀಲಿಸಿದ ನಂತರ, ಸಾಲದ ದಾಖಲೆಗಳ ಒಪ್ಪಿದ ನಿಯಮಗಳು ಮತ್ತು ಷರತ್ತುಗಳನ್ನು ಪಾಲಿಸದಿರುವಿಕೆ ಅಥವಾ ಆರ್‌ಸಿಎಲ್   ಖಾತೆಯ ನಡವಳಿಕೆಯಲ್ಲಿ ಕಂಡುಬಂದ ಅಕ್ರಮಗಳನ್ನು ಬ್ಯಾಂಕಿನ ತೃಪ್ತಿಗೆ ವಿವರಿಸಲು ಪ್ರತಿವಾದಿಯು ಸಾಕಷ್ಟು ಕಾರಣಗಳನ್ನು ಒದಗಿಸಿಲ್ಲ ಎಂದು ತೀರ್ಮಾನಿಸಲಾಗಿದೆ” ಎಂದು ಎಸ್‌ಬಿಐ ಆರ್‌ಕಾಮ್‌ಗೆ ಬರೆದ ಪತ್ರದಲ್ಲಿ ತಿಳಿಸಿದೆ.

2017 ಮತ್ತು 2019 ರ ನಡುವೆ ಯೆಸ್ ಬ್ಯಾಂಕ್ ರಿಲಯನ್ಸ್ ಗ್ರೂಪ್ ಕಂಪನಿಗಳಿಗೆ ನೀಡಿದ ಸುಮಾರು 3,000 ಕೋಟಿ ರೂ. ಸಾಲವನ್ನು ಬೇರೆಡೆಗೆ ತಿರುಗಿಸಿದ ಆರೋಪದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ಅಷ್ಟೇ ಅಲ್ಲದೇ ಯೆಸ್​ ಬ್ಯಾಂಕ್​ನಿಂದ 2017ರಿಂದ 2019ರವರೆಗೆ ಅಕ್ರಮವಾಗಿ ಸಾಲ ಪಡೆದಿವುದು ಬಹಿರಂಗವಾಗಿದೆ. ಹಣಕಾಸು ಅಕ್ರಮಗಳು ಮತ್ತು ಅಕ್ರಮ ಹಣ ವರ್ಗಾವಣೆ ತಡೆ  ಕಾಯ್ದೆಯಡಿ ಆರ್ಥಿಕ ನಿಯಮಗಳು ಉಲ್ಲಂಘನೆಯಾಗಿರುವ ಅನಾಮಾನದ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ. ಅನಿಲ್​ ಅಂಬಾನಿಗೆ ಸೇರಿದ ಅನೇಕ ಆಸ್ತಿ ಮತ್ತು ಘಟಕಗಳಲ್ಲಿನ ಪಾತ್ರದ ಕುರಿತು ಕೂಡ ಇ.ಡಿ. ಪರಿಶೀಲನೆ ನಡೆಸುತ್ತಿದೆ.

Kishor KV