ಕಹಿಯಾದ್ರೂ ಆರೋಗ್ಯಕ್ಕೆ ಸಿಹಿ – ಮಳೆಗಾಲದಲ್ಲಿ ಹಾಗಲಕಾಯಿ ಪ್ರಯೋಜನಗಳು ಏನೆಲ್ಲಾ?

ಹಾಗಲಕಾಯಿಂದ ಸಾಕಷ್ಟು ಉಪಯೋಗಗಳಿವೆ. ಹಾಗಲ ಕಾಯಿ ಯಿಂದ ಪಲ್ಯ, ಗೊಜ್ಜುಗಳಿಂದ ತೊಡಗಿ ಬಾಳಕದವರೆಗೆ ಹಲವು ರೀತಿಯ ಅಡುಗೆಗಳು ತಯಾರಾ ಗುತ್ತವೆ. ಪ್ರತಿರೋಧಕತೆ ಹೆಚ್ಚಿಸಿ, ಜೀರ್ಣಕ್ರಿಯೆ ಚುರುಕು ಮಾಡಿ, ರಕ್ತದಲ್ಲಿನ ಸಕ್ಕರೆ ಯಂಶ ನಿಯಂತ್ರಿಸಿ, ಚರ್ಮದ ಕಾಂತಿ ವೃದ್ಧಿಸಿ, ಯಕೃತ್ನ ಸಾಮರ್ಥ್ಯ ಹೆಚ್ಚಿಸುವಂಥ ಈ ಹಾಗಲ ಕಾಯಿ ರುಚಿಯಲ್ಲಿ ಕಹಿಯೇ ಹೌದಾದರೂ, ಮಳೆಗಾಲದ ಅಡುಗೆಗಳಲ್ಲಿ ಇದಕ್ಕೆ ಜಾಗ ಕೊಡಬೇಕಾದ್ದು ಅಗತ್ಯ. ಏಕೆ ಅನ್ನೋದ್ದನ್ನ ನೋಡೋಣ.
ಪ್ರತಿರೋಧಕತೆ ತೀಕ್ಷ್ಣ
ಮಳೆಗಾಲದಲ್ಲಿ ನಾನಾ ವೈರಸ್ಗಳ ಕಾಟ ಮುಗಿಯುವುದೇ ಇಲ್ಲ. ಹಾಗಾಗಿ ಮಳೆ-ಗುಡುಗುಗಳೆಲ್ಲ ಮೂಗು-ಗಂಟಲಲ್ಲೂ ಮೊಳಗುತ್ತವೆ. ವಿಟಮಿನ್ ಸಿ ಮತ್ತು ಇತರ ಉತ್ಕರ್ಷಣ ನಿರೋಧಕಗಳು ಭರಪೂರ ಇರುವ ಹಾಗಲ ಕಾಯಿಯ ಸೇವನೆಯಿಂದ ಸೋಂಕುಗಳ ವಿರುದ್ಧ ಹೋರಾಡು ವುದಕ್ಕೆ ಹೆಚ್ಚಿನ ಬಲ ದೊರೆಯುತ್ತದೆ. ದೇಹದಲ್ಲಿನ ಬಿಳಿ ರಕ್ತಕಣಗಳನ್ನು ಬಲಪಡಿಸುವ ಮೂಲಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದರಲ್ಲೂ ನೆಗಡಿ, ಕೆಮ್ಮು, ಜ್ವರದಂಥ ಸೋಂಕು ರೋಗಗಳ ವಿರುದ್ಧ ಹೆಚ್ಚಿನ ಅನುಕೂಲ ಕಲ್ಪಿಸುತ್ತದೆ.
ಮಧುಮೇಹ ನಿಯಂತ್ರಣ
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಹಾಗಲ ಕಾಯಿ ಹೆಚ್ಚಿನ ದಕ್ಷತೆಯನ್ನು ಮೆರೆದಿದೆ. ಅದರಲ್ಲೂ ಮಧುಮೇಹ-ಪೂರ್ವ ಸ್ಥಿತಿಯಲ್ಲಿ ಇರುವವರು ಇದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. ಪಾಲಿಪೆಪ್ಟೈಡ್-ಪಿ ಮಾದರಿಯ ಸಂಯುಕ್ತಗಳು ಇದರಲ್ಲಿದ್ದು, ಇವು ರಕ್ತದಲ್ಲಿನ ಸಕ್ಕರೆಯಂಶವನ್ನು ಕಡಿಮೆ ಮಾಡುತ್ತವೆ. ಇನ್ ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುವುದರಿಂದ, ಮಳೆಗಾಲದಲ್ಲಿ ಮಧುಮೇಹ ನಿಯಂತ್ರ ಣಕ್ಕೆ ಇದನ್ನು ತಿನ್ನುವುದು ಪ್ರಯೋಜನವಾಗುತ್ತದೆ.
ನಾರಿನಂಶ ಹೆಚ್ಚು
ಮಳೆ-ಚಳಿ ಇದ್ದಾಗ ಹೆಚ್ಚು ನೀರು ಕುಡಿಯುವುದಕ್ಕೆ ನೆನಪೇ ಆಗುವುದಿಲ್ಲ. ಆದರೆ ದೇಹಕ್ಕೆ ನೀರು ಬೇಕಾಗುತ್ತದೆಂಬುದು ಸುಳ್ಳಲ್ಲವಲ್ಲ. ಬಾಯಾರಿಕೆ ಆಗುವುದು ತಿಳಿಯು ವುದಿಲ್ಲ ಎಂಬ ನೆವದಿಂದ ನೀರು ಕುಡಿಯದಿದ್ದರೆ, ಮಳೆಗಾಲದಲ್ಲೇ ಮಲಬದ್ಧತೆಯಂಥ ತೊಂದರೆ ಗಳು ಗಂಟಾಗುತ್ತವೆ. ಹಾಗಲ ಕಾಯಿಯಲ್ಲಿ ನಾರಿನಂಶ ವಿಫುಲವಾಗಿದೆ. ಮಳೆಗಾಲ ದಲ್ಲಿ ಇದನ್ನು ಸೇವಿಸುವುದರಿಂದ ಮಲಬದ್ಧತೆಯ ನಿವಾರಣೆಗೆ ನೆರವು ದೊರೆಯುತ್ತದೆ. ಜೊತೆಗೆ, ಹಾಗಲ ಕಾಯಿಯು ಬೈಲ್ ರಸದ ಉತ್ಪಾದನೆಗೂ ಪ್ರೋತ್ಸಾಹ ನೀಡುವುದರಿಂದ ಜೀರ್ಣಾಂಗಗಳು ಚುರುಕಾಗುತ್ತವೆ.
ಚರ್ಮಕ್ಕೆ ಹೊಳಪು
ವಾತಾವರಣದಲ್ಲಿ ತೇವ ಹೆಚ್ಚುತ್ತಿದ್ದಂತೆ, ತ್ವಚೆಯಲ್ಲಿ ಎಣ್ಣೆಯಂಶವೂ ಹೆಚ್ಚುತ್ತದೆ. ಇದರಿಂದ ಫಂಗಸ್ ಸೋಂಕು, ಮೊಡವೆಯಂಥ ತೊಂದರೆಗಳು ಕಾಣಬಹುದು. ಹಾಗಲದಲ್ಲಿರುವ ಉರಿಯೂತ ಶಾಮಕ ಮತ್ತು ಸೂಕ್ಷ್ಮಾಣು ವಿರೋಧಿ ಗುಣಗಳು ಚರ್ಮದ ಸಮಸ್ಯೆ ಪರಿಹಾರಕ್ಕೆ ಸಹಾಯ ಮಾಡುತ್ತವೆ. ಹಾಗಲ ಕಾಯಿಯನ್ನು ಆಗೀಗ ತಿನ್ನುವುದರಿಂದ ಅಥವಾ ಅದರ ರಸ ಕುಡಿಯುವುದರಿಂದ ಫಳಫಳ ಹೊಳೆಯುವ ತ್ವಚೆಯನ್ನು ಹೊಂದಬಹುದು.
ಯಕೃತ್ನ ಆರೋಗ್ಯ ಸುಧಾರಿಸುವ ಹಾಗಲ ಕಾಯಿಯ ಸಾಮರ್ಥ್ಯದಿಂದ, ಇದನ್ನು ಡಿಟಾಕ್ಸ್ ಪೇಯವಾಗಿ ಬಳಸಲಾಗುತ್ತದೆ. ಮಳೆಗಾಲದಲ್ಲಿ ಬದಲಾಗುವ ವಾತಾವರಣ ಮತ್ತು ಆಹಾರ ಪದ್ಧತಿಯಿಂದಾಗಿ ಯಕೃತ್ ಹೆಚ್ಚು ಕೆಲಸ ಮಾಡಬೇಕಾಗಬಹುದು. ಆದರೆ ಆಗೀಗ ಹಾಗಲ ಕಾಯಿಯ ರಸ ಕುಡಿಯುವುದರಿಂದ ಪಿತ್ತಜನಕಾಂಗವನ್ನು ಡಿಟಾಕ್ಸ್ ಮಾಡುವುದು ಸಾಧ್ಯ ವಾಗುತ್ತದೆ. ಆದರೆ ಮದ್ದಿನ ಬದಲು ಮದ್ದಿನ ಮರವನ್ನೇ ತಿಂದರೆ ಸಮಸ್ಯೆಗಳು ಬರಬಹುದು. ಹಾಗಲಕಾಯಿಯನ್ನು ಅತಿಯಾಗಿ ತಿಂದರೂ ಉಷ್ಣದಿಂದಾಗಿ ತೊಂದರೆ ಉಂಟಾಗಬಹುದು. ಹಾಗಾಗಿ ಅತಿಯಾಗಿ ತಿನ್ನದೆ, ಹಿತವಾಗಿ ತಿನ್ನಿ, ಮಿತವಾಗಿ ತಿನ್ನಿ. ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಿ.

ನೋಡಿರಿ

