ಕೋಟಿ ಕೋಟಿ ಸಾಲ ವಂಚನೆ ಅನಿಲ್ ಅಂಬಾನಿಗೆ ನೋಟಿಸ್ – ಆಗಸ್ಟ್ 5ಕ್ಕೆ ವಿಚಾರಣೆ ಹಾಜರಾಗಲು ಸೂಚನೆ

ಸುಮಾರು 3,000 ಕೋಟಿ ರೂ. ಮೌಲ್ಯದ ಸಾಲ ವಂಚನೆ , ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ರಿಲಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಅನಿಲ್ ಅಂಬಾನಿ ಸಂಬಂಧ ಹೊಂದಿದ್ದ ಹಲವು ಕಂಪೆನಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ವಶ ಪಡಿಸಿಕೊಂಡಿರುವ ಜಾರಿ ನಿರ್ದೇಶನಾಲಯ ಇದೀಗ ಅವರನ್ನು ಆಗಸ್ಟ್ 5 ರಂದು ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದೆ.
ಕೆಲವು ಕಂಪನಿಗಳಿಂದ ಕೋಟ್ಯಂತರ ರೂಪಾಯಿ ಹಣ ಅಕ್ರಮ ವರ್ಗಾವಣೆ, ಬ್ಯಾಂಕ್ ಸಾಲ ವಂಚನೆ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ಜುಲೈ 24ರಂದು ಅನಿಲ್ ಅಂಬಾನಿ ಸಂಬಂಧ ಹೊಂದಿದ್ದ ಹಲವು ಕಂಪೆನಿಗಳ ಮೇಲೆ ದಾಳಿ ನಡೆಸಿದೆ. ಹಲವಾರು ಸ್ಥಳಗಳಿಂದ ದಾಖಲೆಗಳು ಮತ್ತು ಕಂಪ್ಯೂಟರ್ ಪೆರಿಫೆರಲ್ಗಳನ್ನು ವಶಪಡಿಸಿಕೊಂಡಿದೆ. ಇದಾದ ಬಳಿಕ ಇದೀಗ ಇಡಿ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿ ಸಮನ್ಸ್ ಜಾರಿಗೊಳಿಸಿದ್ದು, ಅಂಬಾನಿ ವಿಚಾರಣಗೆ ಹಾಜರಾಗಲಿದ್ದಾರೆ.
ಇದನ್ನೂ ಓದಿ: ಟ್ರಂಪ್ನಿಂದ ಭಾರತದ ಮೇಲೆ ಸುಂಕ ಸಮರ- ಆಗಸ್ಟ್ 7ರಿಂದ ಭಾರತ ವಸ್ತು ಮೇಲೆ ಶೇ.25ರಷ್ಟು ತೆರಿಗೆ
ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ದೆಹಲಿ ಮತ್ತು ಮುಂಬೈನಲ್ಲಿರುವ ಸುಮಾರು 50 ಕಂಪೆನಿಗಳಲ್ಲಿ ಕೇವಲ ಮೂರು ದಿನಗಳ ಕಾಲ ಶೋಧನೆ ನಡೆಸಿದ ಇಡಿ ಅನಿಲ್ ಅಂಬಾನಿ ಗ್ರೂಪ್ ಕಂಪೆನಿಗಳ ಹಲವಾರು ಕಾರ್ಯನಿರ್ವಾಹಕರು ಸೇರಿದಂತೆ 25ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿದೆ. ಈ ಬಳಿಕ ಎರಡು ಎಫ್ ಐಆರ್ ದಾಖಲಿಸಿರುವ ಕೇಂದ್ರ ತನಿಖಾ ದಳವು ಅನಂತರ ಈ ದಾಳಿಗಳನ್ನು ನಡೆಸಿದೆ. 2017- 2019 ರ ನಡುವೆ ಅಂಬಾನಿಯವರಿಗೆ ಸೇರಿದ ಕಂಪೆನಿಗಳಿಗೆ ಯೆಸ್ ಬ್ಯಾಂಕ್ ನೀಡಿದ ಸುಮಾರು 3,000 ಕೋಟಿ ರೂ. ಗಳ ಅಕ್ರಮ ಸಾಲ ವರ್ಗಾವಣೆ ಆರೋಪಗಳಿಗೆ ಸಂಬಂಧಿಸಿ ಈ ದಾಳಿ ನಡೆಸಲಾಗಿದೆ. ಈ ದಾಳಿಯಿಂದ ರಿಲಯನ್ಸ್ ಪವರ್ ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ನ ವ್ಯವಹಾರ ಕಾರ್ಯಾಚರಣೆಗಳು, ಆರ್ಥಿಕ ಕಾರ್ಯಕ್ಷಮತೆ, ಷೇರುದಾರರು, ಉದ್ಯೋಗಿಗಳು ಅಥವಾ ಯಾವುದೇ ಇತರ ಪಾಲುದಾರರ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಸ್ಟಾಕ್ ಎಕ್ಸ್ ಚೇಂಜ್ ತಿಳಿಸಿದೆ.
ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ ನಲ್ಲಿ ನಡೆದಿರುವ ವಿವಿಧ ರೀತಿಯ ಅಕ್ರಮಗಳಿಗೆ ಸಂಬಂಧಿಸಿ EDಜೊತೆಗೆ ನ್ಯಾಷನಲ್ ಹೌಸಿಂಗ್ ಬ್ಯಾಂಕ್ , ಸೆಕ್ಯುರಿಟೀಸ್ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾ, ನ್ಯಾಷನಲ್ ಫೈನಾನ್ಶಿಯಲ್ ರಿಪೋರ್ಟಿಂಗ್ ಅಥಾರಿಟಿ ಮತ್ತು ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಹಲವಾರು ಹಣಕಾಸು ಸಂಸ್ಥೆಗಳು ತಮ್ಮದೇ ಆದ ಸಂಶೋಧನಾ ವರದಿಗಳನ್ನು ಹಂಚಿಕೊಂಡಿವೆ. ಇದರಲ್ಲಿ ಸೆಬಿ ಗ್ರೂಪ್ ಕಂಪನಿಯಾದ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ ನಲ್ಲಿ ನಡೆದಿರುವ ಬಹುದೊಡ್ಡ ಅಕ್ರಮಗಳನ್ನು ಎತ್ತಿ ತೋರಿಸಲಾಗಿದೆ.

ನೋಡಿರಿ

