ಅವಧಿಪೂರ್ವ ಮುಂಗಾರು ಮಳೆ – ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಜೂನ್‌ನಲ್ಲೇ KRS ಡ್ಯಾಂ ಭರ್ತಿ

ಅವಧಿಪೂರ್ವ ಮುಂಗಾರು ಮಳೆ – ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಜೂನ್‌ನಲ್ಲೇ KRS ಡ್ಯಾಂ ಭರ್ತಿ

ಕೆಆರ್​ಎಸ್ ಡ್ಯಾಂ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಭರ್ತಿಯಾಗಿ ದಾಖಲೆ ಬರೆದಿದೆ. ಇದರೊಂದಿಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರಿಗೂ ಯಾರಿಗೂ ಸಿಗದ ಅವಕಾಶ ಸಿಕ್ಕಿದೆ.  ಮುಂದಿನ 3 ದಿನಗಳ ಒಳಗಾಗಿ ಬಾಗಿನ ಅರ್ಪಿಸಿದರೆ, ಜೂನ್ ತಿಂಗಳಲ್ಲಿಯೇ ಕಾವೇರಿ ಮಾತೆಗೆ ಬಾಗಿನ ಅರ್ಪಿಸಿದ ಸಿಎಂ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರರಾಗಲಿದ್ದಾರೆ. ಜೂನ್​ನಲ್ಲೇ ಕೆಆರ್‌ಎಸ್‌ಗೆ ಬಾಗಿನ ಅರ್ಪಿಸುವ ಅವಕಾಶ ಈವರೆಗೆ ಯಾವ ಮುಖ್ಯಮಂತ್ರಿಗೂ ದೊರೆತಿಲ್ಲ.

1979 ರಿಂದ ಕಾವೇರಿಗೆ ಬಾಗಿನ ಅರ್ಪಿಸುವ ಪದ್ದತಿ ಆರಂಭವಾಗಿದೆ. ಮೊದಲ ಬಾರಿಗೆ ಡಿ. ದೇವರಾಜ ಅರಸ್ ಬಾಗಿನ ಅರ್ಪಿಸುವ ಮೂಲಕ ಆ ಪದ್ದಗೆ ನಾಂದಿ ಹಾಡಿದ್ದರು. ಅಲ್ಲಿಂದ ಇಲ್ಲಿಯವರೆಗೂ ಯಾವೊಬ್ಬ ಮುಖ್ಯಮಂತ್ರಿಗೂ ಜೂನ್​ನಲ್ಲಿ ಬಾಗಿನ ಅರ್ಪಿಸುವ ಅವಕಾಶ ಸಿಕ್ಕಿಲ್ಲ. ಸಾಮಾನ್ಯವಾಗಿ ಕೆಆರ್​ಎಸ್ ಡ್ಯಾಂ ಜುಲೈ ಅಥವಾ ಆಗಸ್ಟ್ ತಿಂಗಳಲ್ಲಿ ಭರ್ತಿಯಾಗುತ್ತದೆ. ಆ ನಂತರ ಮುಖ್ಯಮಂತ್ರಿಗಳಿಂದ ಬಾಗಿನ ಅರ್ಪಿಸಲಾಗುತ್ತದೆ. ಆದರೆ, ಈ ವರ್ಷ ಜೂನ್ ಕೊನೆಯ ವಾರದಲ್ಲೇ ಡ್ಯಾಂ ಭರ್ತಿಯಾಗಿದೆ.

ಈ ವರ್ಷ ಅವಧಿಪೂರ್ವ ಮುಂಗಾರು ಮಳೆಯ ಕಾರಣ, ಜೂನ್ ಆರಂಭದಲ್ಲೇ ಡ್ಯಾಂ ನೀರಿನ ಮಟ್ಟ 100 ಅಡಿ ದಾಟುವ ಮೂಲಕ ದಾಖಲೆ ಬರೆದಿತ್ತು. 124.80 ಅಡಿ ಗರಿಷ್ಠ ಸಾಮರ್ಥ್ಯವಿರುವ ಈ ಜಲಾಶಯದ ನೀರಿನ ಮಟ್ಟ ಮೇ ಕೊನೆಯ ವಾರದಲ್ಲೇ 98 ಅಡಿ ತಲುಪಿತ್ತು. ಆ ಸಂದರ್ಭದಲ್ಲೇ ಕೆಆರ್​ಎಸ್​ ಜಲಾಶಯಕ್ಕೆ 22 ಸಾವಿರ ಕ್ಯೂಸೆಕ್ ನೀರು ಒಳಹರಿವು ಇತ್ತು. ಹಾಗಾಗಿ ಡ್ಯಾಂನಿಂದ 630 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿತ್ತು. ಸಾಮಾನ್ಯವಾಗಿ ಕೆಆರ್​ಎಸ್​ ಜಲಾಶಯದಲ್ಲಿ ಜೂನ್ ಅಂತ್ಯ ಅಥವಾ ಜುಲೈನಲ್ಲಿ ಮಾತ್ರ ನೀರಿನ ಮಟ್ಟ 100 ಅಡಿ ದಾಟುತ್ತದೆ. ಈ ವರ್ಷ ಜೂನ್ 15 ರಂದೇ ಡ್ಯಾಂ ನೀರಿನ ಮಟ್ಟ 115.78 ಅಡಿ ತಲುಪಿತ್ತು. ಅದಾದ ಹತ್ತು ದಿನಗಳಲ್ಲಿ ಇದೀಗ ಗರಿಷ್ಠ ಮಟ್ಟ ತಲುಪಿದೆ. ವಿಶೇಷವೆಂದರೆ, ಈ ಬಾರಿ ಜೂನ್ ಕೊನೆಯ ವಾರವೇ ಡ್ಯಾಂ ಭರ್ತಿಯಾಗಿದೆ.

 

Kishor KV