ಕೊಹ್ಲಿ ಜೊತೆಯಿಂದ ಜೈಲಿಗೆ.. ನಿಖಿಲ್ ಸೋಸಲೆ ಎಷ್ಟು ಪವರ್ಫುಲ್? – RCB ಅವಾಂತರದಲ್ಲಿ ತಪ್ಪು ಎಸಗಿದ್ದೇಲ್ಲಿ?

ಆರ್ಸಿಬಿ ಕಪ್ ಗೆದ್ದ ಕುಷಿ ಒಂದೇ ಒಂದು ದಿನ ಕೂಡ ಉಳಿಲಿಲ್ಲ. ಅದ್ದಕ್ಕೆ ಕಾರಣ ಕಾಲ್ತುಳಿತದಲ್ಲಿ 11 ಜನ ಪ್ರಾಣ ಬಿಟ್ಟಿದ್ದು. ಈಗ ಇದ್ದಕ್ಕೆ ಕಾರಣ ಯಾರು ಅನ್ನೋದ್ದು ಒಂದ್ಕಡೆಯಾದ್ರೆ, ಆರ್ಸಿಬಿ ಫ್ರಾಂಚೈಸಿಗೆ ಈ ಘಟನೆ ದೊಡ್ಡ ತಲೆನೋವು ಆಗಿದೆ. ಆರ್ಸಿಬಿ ಫ್ರಾಂಚೈಸಿ ಮತ್ತು ಡಿಎನ್ಎ ಇವೆಂಟ್ ಮ್ಯಾನೇಜ್ಮೆಂಟ್ ಸಿಬ್ಬಂದಿಯನ್ನು ಬಂಧಿಸಲಾಗಿದೆ. ವಿಶೇಷವಾಗಿ, ಆರ್ಸಿಬಿಯ ಮಾರ್ಕೆಟಿಂಗ್ ಮತ್ತು ರೆವೆನ್ಯೂ ಮುಖ್ಯಸ್ಥ ನಿಖಿಲ್ ಸೋಸಲೆಯನ್ನು ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿಗೆ ಆಪ್ತರಾಗಿದ್ದ ನಿಖಿಲ್ ಸೋಸಲೆ, ಆರ್ಸಿಬಿಯ ಪ್ರಮುಖ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದರು. ಆದರೆ, ಈ ಅನಿರೀಕ್ಷಿತ ಘಟನೆಯಿಂದಾಗಿ ಅವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: 11 ವರ್ಷಗಳಲ್ಲಿ 9 ಪ್ರಶಸ್ತಿಗಳನ್ನ ಗೆದ್ದ ಹಾರ್ದಿಕ್ & ಕೃನಾಲ್ – ಐಪಿಎಲ್ ನಲ್ಲಿ ಸಕ್ಸಸ್ ಫುಲ್ ಬ್ರದರ್ಸ್!
ಬೆಂಗಳೂರಿನಲ್ಲಿ ದುರಂತ ಸಂಭವಿಸಿದ ತಕ್ಷಣವೇ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ. ಇದ್ರಲ್ಲಿ ಅಚ್ಚರಿಯ ಸಂಗತಿಯೆಂದರೆ, ಆರ್ಸಿಬಿಯ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದು. ಆರ್ಸಿಬಿಯ ಮಾರ್ಕೆಟಿಂಗ್ ಮತ್ತು ಕಂದಾಯ ಮುಖ್ಯಸ್ಥರಾದ ನಿಖಿಲ್ ಸೋಸಲೆ ಮುಂಬೈಗೆ ಹಾರಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಾಗ ಅರೆಸ್ಟ್ ಮಾಡಲಾಗಿದೆ. ಸರ್ಕಾರದಿಂದ ಯಾವುದೇ ಅನುಮತಿ ಪಡೆಯದೆ, ಆರ್ಸಿಬಿಗಾಗಿ ಅನಧಿಕೃತ ಮಾರ್ಕೆಟಿಂಗ್ ಕಾರ್ಯಕ್ರಮಗಳನ್ನು ಆಯೋಜಿಸಿ, ಅಪಾರ ಸಂಖ್ಯೆಯ ಜನಸಮೂಹವನ್ನು ಒಟ್ಟುಗೂಡಿಸಿದ ಆರೋಪ ಇವರ ಮೇಲಿದೆ. ಬನ್ನಿ ಹಾಗಿದ್ರೆ ಇವರ ಬಗ್ಗೆ ತಿಳಿದುಕೊಳ್ತಾ ಹೋಗೋಣ..
ಯಾರು ಈ ನಿಖಿಲ್ ಸೋಸಲೆ?
ಆಗಸ್ಟ್ 18, 1986ರಂದು ಜನಿಸಿದ ಸೋಸಲೆ ಸುಮಾರು ಎರಡು ವರ್ಷಗಳಿಂದ ಆರ್ಸಿಬಿಯ ಮಾರ್ಕೆಟಿಂಗ್ ಮತ್ತು ರೆವೆನ್ಯೂ ಹೆಡ್ ಆಗಿದ್ದಾರೆ. ನಿಖಿಲ್ ಸೋಸಲೆ ಮೂಲತಃ ಡಯಾಜಿಯೊ ಇಂಡಿಯಾದ ಉದ್ಯೋಗಿಯಾಗಿದ್ದು, ಇದು ಆರ್ಸಿಬಿಯ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಸಂಸ್ಥೆಯನ್ನು ನಿರ್ವಹಿಸುತ್ತದೆ. ನಿಖಿಲ್ ಸೋಸಲೆ ಆರ್ಸಿಬಿ ಬ್ರ್ಯಾಂಡ್ನ ಹಿಂದಿನ ಡಿಸೈನ್ ಮತ್ತು ಕಾರ್ಯತಂತ್ರದ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ. ಐಪಿಎಲ್ನ ಅತ್ಯಂತ ಜನಪ್ರಿಯ ತಂಡಗಳಲ್ಲಿ ಒಂದಾಗಿರುವ ಆರ್ಸಿಬಿಗೆ ಬ್ರಾಂಡ್ ಡಿಸೈನ್ ಹಾಗೂ ಸ್ಟ್ರಾಟಜಿ ಪ್ರಮುಖವಾಗುತ್ತದೆ. ಅವುಗಳನ್ನ ಇವರು ಮಾಡುತ್ತಿದ್ದರು. ಕಾರ್ಯಕ್ರಮ ಆಯೋಜನೆಯನ್ನ ಇವರೇ ಮಾಡುತ್ತಿದ್ದರು, ಈ ಕಾರಣಕ್ಕೆ ನಿಖಿಲ್ ಸೋಸಲೆ ಬಂಧನ ಪ್ರಮುಖವಾಗಿದೆ.
13 ವರ್ಷದಿಂದ ಆರ್ಸಿಬಿ ಜೊತೆ ಇರೋ ಸೋಸಲೆ
ಬೆಂಗಳೂರಿನಲ್ಲಿ ನೆಲೆಸಿರುವ ನಿಖಿಲ್ ಸೋಸಲೆ ಕಳೆದ 13 ವರ್ಷಗಳಿಂದ ಡಯಾಜಿಯೊದಲ್ಲಿದ್ದಾರೆ. ಅಲ್ಲಿಂದಲೇ ಅವರು ಆರ್ಸಿಬಿ ಫ್ರಾಂಚೈಸಿ ಜೊತೆ ನಿಕಟ ಸಂಪರ್ಕದಲ್ಲಿದ್ದು, ಕೆಲಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಅವಧಿಯಲ್ಲಿ ನಿಖಿಲ್ ಸೋಸಲೆ ಆರ್ಸಿಬಿಯಲ್ಲಿ ಬ್ಯುಸಿನೆಸ್ ಪಾರ್ಟನರ್ಶಿಪ್ ಹೆಡ್ ಕೂಡ ಆಗಿದ್ದರು. ನಿಖಿಲ್ ಸೋಸಲೆ ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ನಲ್ಲಿರುವ ಜೇಮ್ಸ್ ಕುಕ್ ವಿಶ್ವವಿದ್ಯಾಲಯದಿಂದ ಡಬಲ್ ಮೇಜರ್ ಆಗಿದ್ದು, ಆರ್ಸಿಬಿಯ ಬ್ರಾಂಡ್ ಮೌಲ್ಯ ಹೆಚ್ಚಿಸಲು, ಫ್ಯಾನ್ಸ್ಗಳ ಜೊತೆ ನಿರಂತರವಾಗಿ ಸಂಪರ್ಕ ಹೊಂದಿರಲು ನಿಖಿಲ್ ಸೋಸಲೆ ಕಾರಣ ಎನ್ನಲಾಗುತ್ತಿದೆ. ಆರ್ಸಿಬಿ ಅನ್ಬಾಕ್ಸ್ ಇವೆಂಟ್ಗಳ ಹಿಂದೆಯೂ ನಿಖಿಲ್ ಸೋಸಲೆ ಇದ್ದಾರೆಂಬ ಮಾಹಿತಿ ಇದೆ. ಆದರೆ, ಈಗ ಅನಿರಿಕ್ಷೀತ ಘಟನೆಯಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ.
ಕಾಲ್ತುಳಿತಕ್ಕೂ ನಿಖಿಲ್ಗೂ ಏನ್ ಸಂಬಂಧ?
ಚಿನ್ನಸ್ವಾಮಿ ಸ್ಟೇಡಿಯಂ ಬಳಿಯ ಕಾಲ್ತುಳಿತಕ್ಕೂ ನಿಖಿಲ್ ಸೋಸಲೆಗೂ ಏನ್ ಸಂಬಂಧ ಎನ್ನುವುದನ್ನು ನೋಡಿದರೆ, ಹಲವಾರು ವರ್ಷಗಳಿಂದ ಆರ್ಸಿಬಿಯ ಮಾರ್ಕೆಟಿಂಗ್ ಮತ್ತು ಬ್ಯುಸಿನೆಸ್ ಸ್ಟ್ರಾಟಜಿಯಲ್ಲಿ ತೊಡಗಿಸಿಕೊಂಡಿದ್ದ ನಿಖಿಲ್ ಸೋಸಲೆ, ಆರ್ಸಿಬಿ ಫ್ರಾಂಚೈಸಿ ತನ್ನ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದನ್ನು ಆಚರಿಸಲು ಬೆಂಗಳೂರಿನಲ್ಲಿ ವಿಕ್ಟರಿ ಪರೇಡ್ ಹಾಗೂ ವಿಜಯೋತ್ಸವ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರು ವಿಜಯೋತ್ಸವ ಬೇಡ ಎಂದರು ಬಿಡದೇ ವಿಕ್ಟರಿ ಪರೇಡ್ ಮಾಡುವಲ್ಲಿ ಇವರ ಪಾತ್ರ ಇದೆ ಅನ್ನೋದು ಗೊತ್ತಾಗಿದೆ. ಆಟಗಾರರು ಮತ್ತು ಫ್ರಾಂಚೈಸಿ ಅಧಿಕಾರಿಗಳ ನಡುವಿನ ಸಂವಹನದಲ್ಲಿಯೂ ಅವರ ಪಾತ್ರ ಇತ್ತು ಎನ್ನಲಾಗಿದೆ. ಕಾಲ್ತುಳಿತದ ಬಗ್ಗೆ ಆಟಗಾರರಿಗೆ ಮಾಹಿತಿ ನೀಡಿಲ್ಲ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಕಾಲ್ತುಳಿತ ಸಂಭವಿಸಿದರು ಚಿನ್ನಸ್ವಾಮಿ ಕ್ರೀಡಾಂಗಣದ ಒಳಗೆ ಆರ್ಸಿಬಿ ವಿಜಯೋತ್ಸವ ಆಚರಿಸಿದೆ. ಈ ಅಚಾತುರ್ಯದಲ್ಲಿ ನಿಖಿಲ್ ಸೋಸಲೆ ಪಾತ್ರ ಇದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೇ ಫ್ರೀ ಎಂಟ್ರಿ ಅಂತ ಪೋಸ್ಟ್ ಮಾಡಿದ್ದು ಇವರ ಅಡಿಯಲ್ಲೇ ಬರುತ್ತೆ. ಆ ಪೋಸ್ಟ್ನಿಂದಲೇ ಇಷ್ಟು ಜನ ಸೇರಿದ್ದಾರೆ. ಅದ್ರಿಂದಲೇ ಈ ಘಟನೆ ನಡೆದಿದೆ ಎನ್ನಲಾಗಿದೆ.
ವಿರಾಟ್ ಕೊಹ್ಲಿಗೂ ನಿಖಿಲ್ಗೂ ಏನ್ ಸಂಬಂಧ?
ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಆರ್ಸಿಬಿಯ ಖಾಸಗಿ ಪೆಟ್ಟಿಗೆಯಲ್ಲಿ ನಿಖಿಲ್ ಸೋಸಲೆ ಅನೇಕ ಬಾರಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ವಿರಾಟ್ ಕೊಹ್ಲಿ ಇವರನ್ನು ಇನ್ಸ್ಟಾಗ್ರಾಮ್ನಲ್ಲಿಯೂ ಫಾಲೋ ಮಾಡುತ್ತಾರೆ. ಕಳೆದ 13 ವರ್ಷಗಳಿಂದ ಆರ್ಸಿಬಿ ವ್ಯವಹಾರಗಳನ್ನು ನಿಖಿಲ್ ಸೋಸಲೆ ನೋಡಿಕೊಳ್ಳುತ್ತಿರುವುದರಿಂದ ಸ್ವಾಭಾವಿಕವಾಗಿಯೇ ನಿಖಿಲ್ ಸೋಸಲೆ ಜೊತೆ ವಿರಾಟ್ ಕೊಹ್ಲಿ ಒಳ್ಳೆ ಬಾಂಡಿಗ್ ಇದೆ.. ಆಗಾಗ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರ ಜೊತೆ ಆರ್ಸಿಬಿಯ ವಿಐಪಿ ಬಾಕ್ಸ್ನಲ್ಲಿ ನಿಖಿಲ್ ಸೋಸಲೆ ಕಾಣಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ, ನಿಖಿಲ್ ಸೋಸಲೆ ಹಾಗೂ ಅವರ ಪತ್ನಿ ಉತ್ತಮ ಸ್ನೇಹಿತರು ಎಂದು ತಿಳಿದುಬಂದಿದೆ, ಇನ್ಸ್ಟಾಗ್ರಾಂನಲ್ಲಿ 274 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿರುವ ವಿರಾಟ್ ಕೊಹ್ಲಿ ಫಾಲೋ ಮಾಡುತ್ತಿರುವ 279 ಅಕೌಂಟ್ಗಳಲ್ಲಿ ನಿಖಿಲ್ ಸೋಸಲೆ ಅಕೌಂಟ್ ಕೂಡ ಇದೆ. ಇದು ವಿರಾಟ್ ಕೊಹ್ಲಿ ಹಾಗೂ ನಿಖಿಲ್ ಸೋಸಲೆ ನಡುವೆ ಹೇಗೆ ಬಾಂಡಿಗ್ ಇದೆ ಅನ್ನೋದ್ದನ್ನ ತೋರಿಸುತ್ತೆ.
ಅನುಷ್ಕಾಗೆ ಅಂಟಿಕೊಂಡೇ ಇದ್ರೂ ನಿಖಿಲ್ ಹೆಂಡತಿ
ನೀವು ನೋಡಿದ ಹಾಗೇ ಆರ್ ಸಿಬಿ ಆಡುವ ಎಲ್ಲಾ ಪಂದ್ಯಗಳಲ್ಲಿ ಈ ಬಾರಿ ಅನುಷ್ಕಾ ಶರ್ಮಾ ಓರ್ವ ಗೆಳತಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದರು. ಬಿಳಿ ಶರ್ಟ್ ನಲ್ಲಿ ಕೆಂಪು ಲಿಪ್ ಸ್ಟಿಕ್ ಹಾಕಿಕೊಂಡು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಿದ್ದ ಈ ಮಹಿಳೆ ಯಾರು ಅನ್ನೋ ಪ್ರಶ್ನೆ ಸಾಕಷ್ಟು ಜನಕ್ಕೆ ಕಾಣ್ತಾ ಇತ್ತು. ಈಕೆ ಬೇರೆ ಯಾರೂ ಅಲ್ಲ. ಈಗ ಅರೆಸ್ಟ್ ಆಗಿರುವ ನಿಖಿಲ್ ಸೋಸಲೆ ಪತ್ನಿ ಮಾಳವಿಕಾ ನಾಯಕ್. ಈಕೆ ರಿಷಭ್ ಪಂತ್ ಶತಕ ಸಿಡಿಸಿದ ಬಳಿಕ ಪಲ್ಟಿ ಹೊಡೆದು ಸಂಭ್ರಮಾಚರಣೆ ಮಾಡಿದ್ದನ್ನು ವ್ಯಂಗ್ಯ ಮಾಡಿ ಸುದ್ದಿಯಾಗಿದ್ದರು. ಪಂತ್ ಸೆಂಚುರಿ ಹೊಡೆದಾದ ಸ್ಟುಪಿಡ್ ಅಂತ ಹೇಳಿದ್ದು ಈಕೆಯೇ.. ಈ ಮಾಳವಿಕಾ ನಾಯಕ್ ಕೂಡ ಅನುಷ್ಕಾ ಶರ್ಮಾ ಮತ್ತು ಕೊಹ್ಲಿ ಜೊತೆ ಒಳ್ಳೆ ಸ್ನೇಹಿವನ್ನೇ ಹೊಂದಿದ್ದಾರೆ.
ನನ್ನ ಗಂಡ ತಪ್ಪು ಮಾಡಿಲ್ಲವೆಂದ ಮಾಳವಿಕಾ
ನಿಖಿಲ್ ಸೋಸಲೆ ಪತ್ನಿ ಮಾಳವಿಕಾ ನಾಯ್ಕ್ ಸರ್ಕಾರದ ವಿರುದ್ಧವೇ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಆಧಾರವಾಗಿಸಿ ಮಾಳವಿಕಾ ನಾಯ್ಕ್ ರಿಟ್ ಅರ್ಜಿ ಸಲ್ಲಿಸಿ ಸರ್ಕಾರದ ವೈಫಲ್ಯದಿಂದ ಕಾಲ್ತುಳಿತ ಸಂಭವಿಸಿದೆ. ನನ್ನ ಪತಿ ಯಾವುದೇ ತಪ್ಪು ಮಾಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಾರ್ಯಕ್ರಮಕ್ಕೆ ಬರುವವರಿಗೆ ಆನ್ಲೈನ್ ಮೂಲಕ ಉಚಿತ ಪಾಸ್ ವ್ಯವಸ್ಥೆ ಮಾಡಲಾಗಿತ್ತು. ಪಾಸ್ ಇದ್ದವರಿಗಷ್ಟೇ ಚಿನ್ನಸ್ವಾಮಿ ಸ್ಟೇಡಿಯಂ ಒಳಗೆ ಅವಕಾಶ ಕಲ್ಪಿಸಲಾಗಿತ್ತು. ಖುದ್ದು ಡಿಸಿಎಂ ಆಟಗಾರರನ್ನು ವಿಮಾನನಿಲ್ದಾಣಕ್ಕೆ ತೆರಳಿ ಸ್ವಾಗತಿಸಿದ್ದರು. ವಿಧಾನಸೌಧದಲ್ಲಿ ಸರ್ಕಾರವೇ ಆರ್ಸಿಬಿ ಆಟಗಾರರನ್ನು ಸನ್ಮಾನಿಸಿದೆ. ನಂತರ ಚಿನ್ನಸ್ವಾಮಿ ಸ್ಟೇಡಿಯಂನ ಸಂಭ್ರಮಾಚರಣೆಯಲ್ಲಿ ಡಿಸಿಎಂ ಭಾಗಿಯಾಗಿದ್ದರು. ದುರ್ಘಟನೆಯ ಮಾಹಿತಿ ಪ್ರಕಟವಾದ ತಕ್ಷಣ ಆರ್ಸಿಬಿಯಿಂದ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿದೆ. ನನ್ನ ಪತಿ ಯಾವುದೇ ಲೋಪ ಎಸಗಿಲ್ಲ. ಹೀಗಾಗಿ ಅವರ ಬಂಧನವನ್ನು ಕಾನೂನುಬಾಹಿರವೆಂದು ಘೋಷಿಸಬೇಕು ಮತ್ತು ಕೂಡಲೇ ಅವರನ್ನು ಬಂಧನದಿಂದ ಬಿಡುಗಡೆ ಮಾಡುವಂತೆ ಆದೇಶ ನೀಡಬೇಕೆಂದು ಅರ್ಜಿಯಲ್ಲಿ ಕೋರಿದ್ದಾರೆ. ಒಟ್ನಲ್ಲಿ ಇಲ್ಲಿ ಯಾರದ್ದೋ ತಪ್ಪಿಗೆ ಯಾರೋ ಜೀವ ಬಿಟ್ಟಿದ್ದಾರೆ. ಹಾಗೇ ಯಾರದ್ದೋ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸಬೇಕಾಗಿದೆ. ಇಲ್ಲಿ ಅವ್ನ್ ತಪ್ಪ ಮಾಡ್ದ ಇವ್ನ್ ತಪ್ಪು ಮಾಡ್ದ ಅನ್ನೋಕ್ಕಿಂತ ಎಲ್ಲಾ ಸೇರಿ ತಪ್ಪು ಮಾಡಿದ್ದಾರೆ.

ನೋಡಿರಿ

