ಮಹಿಳೆಯರು ಕೊಟ್ಟ ಸಿಂಧೂರ ಸಸಿ ನೆಟ್ಟ ನರೇಂದ್ರ ಮೋದಿ – ಸಿಂಧೂರ ಗಿಡದ ವಿಶೇಷ ಏನು ಗೊತ್ತಾ?

ವಿಶ್ವ ಪರಿಸರ ದಿನಾಚರಣೆಯಾದ ಇಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ನಿವಾಸದಲ್ಲಿ ಸಿಂಧೂರ ಸಸಿ ನೆಟ್ಟಿದ್ದಾರೆ. 1971ರ ಯುದ್ಧದ ಭಾಗವಾಗಿದ್ದ ಮಹಿಳೆಯರ ಗುಂಪು ಈ ಗಿಡವನ್ನು ಮೋದಿ ಅವರಿಗೆ ಉಡುಗೊರೆಯಾಗಿ ನೀಡಿತ್ತು ಎಂಬುದು ವಿಶೇಷ. ಈ ಬಗ್ಗೆ ಪ್ರಧಾನಿ ಮೋದಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, ‘1971ರ ಯುದ್ಧದಲ್ಲಿ ಧೈರ್ಯ ಮತ್ತು ಶೌರ್ಯದ ಅದ್ಭುತ ಉದಾಹರಣೆಯನ್ನು ನೀಡಿದ ಕಚ್ನ ಧೈರ್ಯಶಾಲಿ ತಾಯಂದಿರು ಮತ್ತು ಸಹೋದರಿಯರು ಇತ್ತೀಚೆಗೆ ಗುಜರಾತ್ಗೆ ಭೇಟಿ ನೀಡಿದಾಗ ನನಗೆ ಸಿಂಧೂರದ ಗಿಡವನ್ನು ಉಡುಗೊರೆಯಾಗಿ ನೀಡಿದರು. ವಿಶ್ವ ಪರಿಸರ ದಿನವಾದ ಇಂದು ನವದೆಹಲಿಯಲ್ಲಿರುವ ಪ್ರಧಾನ ಮಂತ್ರಿ ನಿವಾಸದಲ್ಲಿ ಆ ಗಿಡವನ್ನು ನೆಡುವ ಸೌಭಾಗ್ಯ ನನಗೆ ಸಿಕ್ಕಿದೆ. ಈ ಗಿಡ ನಮ್ಮ ದೇಶದ ಮಹಿಳಾ ಶಕ್ತಿಯ ಶೌರ್ಯ ಮತ್ತು ಸ್ಫೂರ್ತಿಯ ಬಲವಾದ ಸಂಕೇತವಾಗಿ ಉಳಿಯುತ್ತದೆ’ ಎಂದಿದ್ದಾರೆ.
ಈ ಬಾರಿ ಪಾಕಿಸ್ತಾನದ ವಿರುದ್ಧದ ದಾಳಿಗೆ ಪ್ರಧಾನಿ ಮೋದಿ ಆಪರೇಷನ್ ಸಿಂಧೂರ ಎಂಬ ಹೆಸರನ್ನೇ ಸೂಚಿಸಿದ್ದರು. ಇದೀಗ ಇಂದು ಸಿಂಧೂರ ಗಿಡವನ್ನು ತಮ್ಮ ನಿವಾಸದಲ್ಲಿ ನೆಟ್ಟಿದ್ದಾರೆ. ಅನ್ನಾಟೊ ಅಥವಾ ಬಿಕ್ಸಾ ಒರೆಲ್ಲಾನಾ ಎಂದೂ ಕರೆಯಲ್ಪಡುವ ಸಿಂಧೂರ ಸಸ್ಯ ಭಾರತದಲ್ಲಿ ಸಾಂಸ್ಕೃತಿಕ, ಧಾರ್ಮಿಕ ಮತ್ತು ಔಷಧೀಯ ಮಹತ್ವವನ್ನು ಹೊಂದಿದೆ. ಈ ಗಿಡದ ರೋಮಾಂಚಕ ಕೆಂಪು-ಕಿತ್ತಳೆ ಬಣ್ಣವನ್ನು ಸಿಂಧೂರವನ್ನು ತಯಾರಿಸಲು ಬಳಸಲಾಗುತ್ತದೆ. ಈ ಸಿಂಧೂರವನ್ನು ವಿವಾಹಿತ ಹಿಂದೂ ಮಹಿಳೆಯರು ತಮ್ಮ ಕೂದಲಿನ ಬೈತಲೆಯ ಉದ್ದಕ್ಕೂ ಹಚ್ಚಿಕೊಳ್ಳುತ್ತಾರೆ. ಈ ಬಣ್ಣವನ್ನು ಸಿಂಧೂರ ಸಸ್ಯದ ಬೀಜಗಳಿಂದ ಪಡೆಯಲಾಗುತ್ತದೆ. ಇದನ್ನು ಸೌಂದರ್ಯವರ್ಧಕಗಳು ಮತ್ತು ಆಹಾರದಲ್ಲಿ ನೈಸರ್ಗಿಕ ಬಣ್ಣವಾಗಿಯೂ ಬಳಸಲಾಗುತ್ತದೆ. ಆಯುರ್ವೇದದಲ್ಲಿ ಈ ಸಸ್ಯವು ಅದರ ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ಚರ್ಮದ ಸ್ಥಿತಿಗಳಿಗೆ ಚಿಕಿತ್ಸೆ ನೀಡುವ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ.

ನೋಡಿರಿ

