8 ವರ್ಷದ ವನವಾಸ ಅಂತ್ಯ! ಮತ್ತೆ ಕರುಣ್ ನಾಯರ್ ಕೈ ಹಿಡಿದ ಕ್ರಿಕೆಟ್
ಕನ್ನಡಿಗನ ಹೊಸ ಅಧ್ಯಾಯ ಶುರು

8 ವರ್ಷದ ವನವಾಸ ಅಂತ್ಯ!  ಮತ್ತೆ ಕರುಣ್ ನಾಯರ್ ಕೈ ಹಿಡಿದ ಕ್ರಿಕೆಟ್ಕನ್ನಡಿಗನ ಹೊಸ ಅಧ್ಯಾಯ ಶುರು

 

ಮಾರ್ಚ್ 28, 2017 ರಂದು ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡಕ್ಕಾಗಿ ಆಡಿದ್ದ ಕರುಣ್ ನಾಯರ್, ಅಜಿಂಕ್ಯ ರಹಾನೆ ಬಂದಿದ್ದರಿಂದ ಸ್ಥಾನ ಕಳೆದುಕೊಂಡಿದ್ದರು. ವಿರೇಂದ್ರ ಸೆಹ್ವಾಗ್ ಬಳಿಕ ಭಾರತ ತಂಡಕ್ಕಾಗಿ ತ್ರಿಶತಕ ಗಳಿಸಿದ ಕರುಣ್ ನಾಯರ್ ಅವರನ್ನು ಬಿಸಿಸಿಐ ಕಡೆಗಣಿಸುತ್ತಲೇ ಬಂದಿತ್ತು. ಕರ್ನಾಟಕ ತಂಡಕ್ಕಾಗಿ ಆಡುತ್ತಿದ್ದ ಅವರು ಫಾರ್ಮ್ ಕಳೆದುಕೊಂಡರು. ಕರ್ನಾಟಕ ಕೂಡ ಅವರನ್ನು ರಣಜಿ ತಂಡದಿಂದ ಕೈಬಿಟ್ಟಿತ್ತು. ತಮ್ಮ ಕ್ರಿಕೆಟ್ ಜೀವನವೇ ಮುಗಿದುಹೋಯಿತು ಎನ್ನುವ ಹಂತದಲ್ಲಿದ್ದ ಕರುಣ್ ನಾಯರ್ 2022 ರಲ್ಲಿ ಹತಾಶೆಯಿಂದ ಕ್ರಿಕೆಟ್ ನನಗೆ ಇನ್ನೊಂದು ಅವಕಾಶ ಕೊಡು ಎಂದು ಟ್ವೀಟ್ ಮಾಡಿದ್ದರು.

ತನ್ನ ಖದರ್ ತೋರಿಸಿದ ಕರುಣ್ ನಾಯರ್

 ಕರ್ನಾಟಕ ಕ್ರಿಕೆಟ್ ತಂಡದಲ್ಲಿ ಅವಕಾಶ ಕಳೆದುಕೊಂಡ ಬಳಿಕ 2023ರಲ್ಲಿ ವಿದರ್ಭ ತಂಡವನ್ನು ಸೇರಿಕೊಂಡರು. ಅವಕಾಶ ಸಿಗಲಿಲ್ಲ ಎಂದು ಕೊರಗುತ್ತಾ ಕೂರಲಿಲ್ಲ, ತಮ್ಮ ಆಟವನ್ನು ಸುಧಾರಿಸಿಕೊಂಡರು, ಎಡಬಿಡದೆ ಅಭ್ಯಾಸ ನಡೆಸಿದರು. ಬಳಿಕ ನಡೆದಿದ್ದು ಇತಿಹಾಸ, ದೇಶೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಬರೆದ ಇವರು, ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಕೂಡ ಆಡಿದರು. ದೇಶೀಯ ಕ್ರಿಕೆಟ್‌ನ ಮೊದಲ ಸೀಸನ್‌ನಲ್ಲೇ ಅವರು ಫಾರ್ಮ್‌ಗೆ ಮರಳಿದರು.

 7 ವರ್ಷ ಅಗ್ನಿ ಪರೀಕ್ಷೆ ಎದುರಿಸಿದ ಕರುಣ್ 

ಟೀಮ್​ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿದ್ದ ಕರುಣ್​ಗೆ ಕರ್ನಾಟಕದ ತಂಡದಲ್ಲೂ ಸ್ಥಾನ ಸಿಗದಂತಾಯ್ತು. ಇದರಿಂದ ವಿದರ್ಭಕ್ಕೆ ವಲಸೆ ಹೋದ ಕರುಣ್, ನಂತರ ರನ್​ಭೂಮಿಯಲ್ಲಿ ಸೃಷ್ಟಿಸಿದ್ದು ರನ್ ಶಿಖರ.. ಒಂದಲ್ಲ.. ಎರಡಲ್ಲ.. ರಣಜಿ ಟೂರ್ನಿ, ವಿಜಯ್​ ಹಜಾರೆ, ಮುಷ್ತಾಕ್​ ಅಲಿ ಟೂರ್ನಿಯಲ್ಲಿ ರನ್ ಹೊಳೆಯನ್ನೇ ಕರುಣ್ ನಾಯರ್ ಹರಿಸಿದ್ದರು. 2023-24ರ ರಣಜಿಯಲ್ಲಿ 10 ಪಂದ್ಯಗಳನ್ನಾಡಿದ ಕರುಣ್, 40.58ರ ಬ್ಯಾಟಿಂಗ್ ಸರಾಸರಿಯಲ್ಲಿ 690 ರನ್ ಸಿಡಿಸಿದ್ದರು. 2 ಶತಕ, 3 ಅರ್ಧಶತಕ ದಾಖಲಿಸಿದ್ದ ಕರುಣ್​​, ವಿದರ್ಭ ಪರ ಟಾಪ್ ಸ್ಕೋರರ್ ಆಗಿ ಮರೆದಾಡಿದ್ದರು. ನಂತರದ 2024-25ರ ರಣಜಿ ಟ್ರೋಫಿಯಲ್ಲೂ ಅದ್ಬುತ ಆಟವಾಡಿದ್ದ ಕರುಣ್, 9 ಪಂದ್ಯಗಳಿಂದ 53.93 ಸರಾಸರಿಯಲ್ಲಿ 863 ರನ್ ಚಚ್ಚಿದ್ದರು. 4 ಶತಕ, 2 ಅರ್ಧಶತಕ ಸಿಡಿಸಿದ್ದ ಕರುಣ್, ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ 8 ಪಂದ್ಯಗಳಿಂದ 389.5ರ ಬ್ಯಾಟಿಂಗ್ ಅವರೇಜ್​ನಲ್ಲಿ 779 ರನ್ ಗಳಿಸಿದರು. ಅಷ್ಟೇ ಅಲ್ಲ.! 5 ಶತಕ, 1 ಅರ್ಧಶತಕ ಸಿಡಿಸಿದ ಮಿಂಚಿದ್ರು. ಕರುಣ್ ರನ್ ಪ್ರವಾಹ ಇಲ್ಲಿಗೆ ನಿಲ್ಲಲಿಲ್ಲ. ಕೌಂಟಿ ಕ್ರಿಕೆಟ್​ ಆಡಲು ಇಂಗ್ಲೆಂಡ್​ಗೆ ತೆರಳಿದ ಕನ್ನಡಿಗ   2023 ಹಾಗೂ 2024ರ ಎರಡೂ ಸೀಸನ್​ಗಳಲ್ಲೂ ರನ್ ಮಳೆ ಹರಿಸಿದರು. ಕರುಣ್ ನಾಯರ್​​ ರ ಈ ಅದ್ಬುತ ಆಟಕ್ಕೀಗ ಪ್ರತಿಫಲ ಸಿಕ್ಕಿದೆ. ಅಂದು ಯಾವ ಇಂಗ್ಲೆಂಡ್ ಎದುರು ಡೆಬ್ಯೂ ಮಾಡಿದ್ರೋ, ಅದೇ ತಂಡದ ಎದುರು ಕ್ರಿಕೆಟ್​​ನ ಪುನರ್ಜನ್ಮ ಸಿಕ್ಕಿದೆ.

 ಐಪಿಎಲ್‌ನಲ್ಲೂ ಕರುಣ್‌ಗೆ ಅವಕಾಶ  

2022ರಲ್ಲಿ ರಾಜಸ್ಥಾನ್​ ತಂಡದಲ್ಲಿದ್ದಾಗ ಕೊನೆಯದಾಗಿ ಕೆಕೆಆರ್ ವಿರುದ್ಧ ಐಪಿಎಲ್‌ನಲ್ಲಿ ಕರುಣ್ ಬ್ಯಾಟ್​ ಬೀಸಿದ್ದರು. ಆಮೇಲೆ ಎರಡು ವರ್ಷ ಚಾನ್ಸ್‌ ಸಿಕ್ಕಿರಲಿಲ್ಲ. ಈ ಸಲ 2025ರ ಡೆಲ್ಲಿ ಪರವಾಗಿ ಮುಂಬೈ ವಿರುದ್ಧ ಕಣಕ್ಕೆ ಇಳಿದಿದ್ದಾರೆ. ದೇಶಿಯ ಪಂದ್ಯಗಳಲ್ಲಿ ಅಬ್ಬರಿಸಿದ್ದರಿಂದ ಅವರನ್ನು ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್​ ತಂಡಕ್ಕೆ ಫ್ರಾಂಚೈಸಿ ಸೇರಿಸಿಕೊಂಡಿತ್ತು. ಅದು ಕೂಡಾ ಕೇವಲ 50 ಲಕ್ಷ ರೂಪಾಯಿಗಳಿಗೆ ಕರುಣ್​ ನಾಯರ್ ಡಿಸಿ ತೆಕ್ಕೆ ಸೇರಿದ್ದರು. ಡೆಲ್ಲಿ ಕ್ಯಾಪಿಟಲ್ಸ್​​ ತಂಡದಲ್ಲಿ ಇದ್ದರೂ ಕರುಣ್​ ನಾಯರ್​ ಮೊದಲ 4 ಪಂದ್ಯಗಳಲ್ಲಿ ಬೆಂಚ್ ಕಾಯ್ತಿದ್ರು. ಆದರೆ ಮುಂಬೈ ವಿರುದ್ಧದ ಪಂದ್ಯದಲ್ಲಿ ​ ಇಂಪ್ಯಾಕ್ಟ್ ಪ್ಲೇಯರ್​ ಆಗಿ ಮುಖೇಶ್ ಕುಮಾರ್​ ಬದಲಿಗೆ ಸ್ಥಾನ ಪಡೆದಿದ್ದರು. ಕೊಟ್ಟ ಅವಕಾಶವನ್ನು ಬಳಸಿಕೊಂಡು ಕರುಣ್ ನಾಯರ್ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ತೋರಿಸಿದರು. ಅರ್ಧಶತಕದ ನಂತರವೂ ಭರ್ಜರಿ ಬ್ಯಾಟಿಂಗ್ ಮಾಡಿದ ಕರುಣ್ ನಾಯರ್ 40 ಎಸೆತದಲ್ಲಿ 12 ಫೋರ್, 5 ಸಿಕ್ಸರ್​ನಿಂದ 89 ರನ್​ಗಳಿಸಿದ್ದರು. ಡೆಲ್ಲಿ ಪರ 8 ಪಂದ್ಯ ಆಡಿರೋ ಕರುಣ್ 198 ರನ್ ಗಳಿಸಿದ್ದಾರೆ. ಈ ಸಲ ಐಪಿಎಲ್‌ನಲ್ಲೂ ಕೂಡ ಕನ್ನಡಿಗ ಕರುಣ್ ನಾಯರ್ ಮಿಂಚು ಹರಿಸಿದ್ದಾರೆ.

ದಿನಕ್ಕೆ 600 ಎಸೆತಗಳನ್ನು ಎದುರಿಸಿ ಕಠಿಣ ಅಭ್ಯಾಸ

ಇನ್ನು ಕರುಣ್ ನಾಯ‌ರ್ ಭಾರತೀಯ ಟೆಸ್ಟ್ ತಂಡಕ್ಕೆ ಮರಳಿದ್ದಾರೆ ಎಂದರೆ ಅದು ಸುಲಭದ ಮಾತಲ್ಲ.  ಭಾರತ ಟೆಸ್ಟ್ ತಂಡಕ್ಕೆ ವಾಪಸಾಗಿರುವ ಬಗ್ಗೆ ಹಳೆಯ ಕೋಚ್ ವಿಜಯ್‌ಕುಮಾರ್ ಮದ್ಯಾಲ್ಕರ್ ಮಾತನಾಡಿದ್ದಾರೆ. ಕರುಣ್, ಪ್ರತಿ ದಿನ ಮೂರು ಗಂಟೆ ಪ್ರಯಾಣಿಸಿ, ದಿನಕ್ಕೆ 600 ಎಸೆತಗಳನ್ನು ಎದುರಿಸಿ ಕಠಿಣ ಅಭ್ಯಾಸ ನಡೆಸಿದ್ದೇ ಈ ವಾಪಸಾತಿಯ ಹಿಂದಿನ ಗುಟ್ಟು ಎಂದು ವಿಜಯ್‌ಕುಮಾ‌ರ್ ಹೇಳಿಕೊಂಡಿದ್ದಾರೆ.  ಕರ್ನಾಟಕ ತಂಡದಲ್ಲೂ ಅವಕಾಶ ಸಿಗದಾಗ ಕರುಣ್ ಭಾವುಕರಾಗಿದ್ದರು. “ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ’ ಎಂದು ನನ್ನಲ್ಲಿ ಹೇಳಿದರು. ಬಳಿಕ ನಾನು, “ಚಿಂತಿಸಬೇಡ, ಕೌಶಲ್ಯಗಳತ್ತ ಗಮನ ಕೊಡೋಣ’ ಎಂದೆ. ಬಳಿಕ ಕರುಣ್ ಪ್ರತಿ ದಿನ 3 ಗಂಟೆ ಪ್ರಯಾಣಿಸಿ ಜಸ್ಟ್ ಕ್ರಿಕೆಟ್ ಅಕಾಡೆಮಿಗೆ ಬರಲಾರಂಭಿಸಿದರು. ದೀರ್ಘ ಅಭ್ಯಾಸ ನಡೆಸಿದರು ಎಂದಿದ್ದಾರೆ.

ಕರುಣ್ ನಾಯರ್ ಅವರ ಆಯ್ಕೆ ಬಗ್ಗೆ ಮಾತನಾಡಿದ ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ “ಕರುಣ್ ನಾಯರ್ ಸಾಕಷ್ಟು ರನ್ ಗಳಿಸಿದ್ದಾರೆ, ಕೌಂಟಿ ಕ್ರಿಕೆಟ್ ಆಡಿದ್ದಾರೆ. ವಿರಾಟ್ ಕೊಹ್ಲಿ ಅವರು ಇಲ್ಲದೆ ಇರುವುದರಿಂದ, ಅನುಭವಿಗಳ ಕೊರತೆಯಿದ್ದು, ಅವರ ಅನುಭವ ಸಹಾಯಕ್ಕೆ ಬರುತ್ತದೆ ಎಂದು ಭಾವಿಸಿದ್ದೇವೆ” ಎಂದಿದ್ದಾರೆ.

 ಕೊನೆಗೂ ಮೌನ ಮುರಿದ ಕರುಣ್‌ ನಾಯರ್

ಎಂಟು ವರ್ಷಗಳ ನಂತರ ಭಾರತ ತಂಡಕ್ಕೆ ಮರಳಿರುವ ಬಗ್ಗೆ ಕನ್ನಡಿಗ ಕರುಣ್ ನಾಯರ್ ಸಂತಸ ವ್ಯಕ್ತಪಡಿಸಿದ್ದಾರೆ. ‘2024-25ರ ದೇಶೀಯ ಸೀಸನ್‌ನಲ್ಲಿ ಉತ್ತಮ ರನ್ ಗಳಿಸಿದ್ದರಿಂದ ತನಗೆ ಈ ಅವಕಾಶ ಸಿಕ್ಕಿದೆʼ ಎಂದು ಹೇಳಿದ್ದಾರೆ.  ‘ತಂಡಕ್ಕೆ ಮರಳಿರುವುದು ಕೃತಜ್ಞತೆ, ಸಂತೋಷ ಮತ್ತು ಹೆಮ್ಮೆ ತಂದಿದೆ. ನಿಮ್ಮೆಲ್ಲರಿಗೂ ಹೇಗೆ ತಿಳಿಯಿತೋ ಹಾಗೆಯೇ ನನಗೂ ತಿಳಿಯಿತು. ನಾನು ಈ ಕರೆಗಾಗಿ ಕಾತರದಿಂದ ಕಾಯುತ್ತಿದ್ದೆ. ಆಪ್ತರಿಂದ ಸಾಕಷ್ಟು ಸಂದೇಶಗಳು ಬಂದವು‌ʼ ಎಂದು ತಿಳಿಸಿದ್ದಾರೆ.

ಕರುಣ್ ನಾಯರ್ ಅವರು ಕಳೆದೊಂದೂವರೆ ವರ್ಷದಿಂದ ದೇಶೀಯ ಕ್ರಿಕೆಟ್‌ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದರಿಂದಾಗಿ ಆಯ್ಕೆಗಾರರು ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳುವಂತೆ ಮಾಡಿದೆ. ಒಟ್ನಲ್ಲಿ ಕರುಣ್ ನಾಯಕರ್ ಕರುಣ್ ಅವರ ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ.  ಸೀನಿಯರ್ ತಂಡದಲ್ಲೂ ಸ್ಥಾನ ಪಡೆದಿದ್ದು, ಆಡಲು ಸಿದ್ಧರಾಗಿದ್ದಾರೆ.  ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಹೇಳಿರುವುದು ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಉತ್ತಮ ಅವಕಾಶವಾಗಿದೆ. ಹೀಗಾಗಿ ನಮ್ಮ ಕನ್ನಡಿ ಕರುಣ್ ನಾಯರ್ ಕೂಡ ಟೆಸ್ಟ್‌ನಲ್ಲಿ ಮಿಂಚಿ ಸಿಕ್ಕ ಅವಕಾಶವನ್ನ ಸರಿಯಾಗಿ ಬಳಸಿಕೊಳ್ಳಲಿ ಅಂತ ಹಾರೈಸೋಣ..

Kishor KV

Leave a Reply

Your email address will not be published. Required fields are marked *