ಲಂಕಾ ದಹನಕ್ಕೆ RO-KO ರೆಡಿ! – ಸೂರ್ಯನ ಶೈನ್ ​ಗೆ ಪಾಂಡ್ಯ OUT
ಗಿಲ್ ಮುಂದೆ ಡಲ್ ಆದ್ರಾ ರಾಹುಲ್?

ಲಂಕಾ ದಹನಕ್ಕೆ RO-KO ರೆಡಿ! – ಸೂರ್ಯನ ಶೈನ್ ​ಗೆ ಪಾಂಡ್ಯ OUTಗಿಲ್ ಮುಂದೆ ಡಲ್ ಆದ್ರಾ ರಾಹುಲ್?

ಫೈನಲಿ ಶ್ರೀಲಂಕಾ ವಿರುದ್ಧದ ಪ್ರವಾಸಕ್ಕೆ ಟೀಂ ಇಂಡಿಯಾ ಸೆಲೆಕ್ಟ್ ಆಗಿದೆ. ಏಕದಿನ ಸರಣಿ ಹಾಗೇ ಟಿ-20 ಸರಣಿಗೆ ಅಚ್ಚರಿಯ ನಾಯಕರ ಜೊತೆಗೆ ಆಟಗಾರರ ಆಯ್ಕೆಯೂ ಕೂಡ ಕುತೂಹಲ ಮೂಡಿಸಿದೆ. ಅದ್ರಲ್ಲೂ ರೆಸ್ಟ್​ ಕಾರಣದಿಂದ ಸರಣಿ ಆಡಲ್ಲ ಎನ್ನಲಾಗಿದ್ದ ಕಿಂಗ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಗ್ರೇಟ್​ ಕಮ್​ ಬ್ಯಾಕ್ ಮಾಡಿದ್ದಾರೆ. ಹಾಗೇ ಟಿ-20ಐನಲ್ಲಿ ಸೂರ್ಯಕುಮಾರ್ ಯಾದವ್​ಗೆ ನಾಯಕನ ಪಟ್ಟ ಕಟ್ಟಲಾಗಿದೆ. ಏಕದಿನ ಮತ್ತು ಟಿ-20 ಸರಣಿಯ ತಂಡಗಳ ಆಯ್ಕೆ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ರೂ ಕೂಡ ಕನ್ನಡಿಗ ಕೆ.ಎಲ್ ರಾಹುಲ್​ಗೆ ಅನ್ಯಾಯ ಆಗಿದೆ ಎಂದು ಫ್ಯಾನ್ಸ್ ಸಿಟ್ಟಾಗಿದ್ದಾರೆ. ಅಷ್ಟಕ್ಕೂ ಲಂಕಾ ದಹನಕ್ಕೆ ಯಾರೆಲ್ಲಾ ರೆಡಿಯಾಗಿದ್ದಾರೆ? ಟೀಮ್​ನಲ್ಲಿ ಸ್ಥಾನ ಗಿಟ್ಟಿಸಿಕೊಂಡವರು ಯಾರು? ಯಾರೆಲ್ಲಾ ಡ್ರಾಪ್ ಆಗಿದ್ದಾರೆ? ಕೆ.ಎಲ್ ರಾಹುಲ್​ಗೆ ಅನ್ಯಾಯ ಆಯ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:ಕತ್ರಿನಾ ಕೈಫ್ ಫೋಟೋಗೆ ಪೂಜೆ – ಕ್ಯಾಟ್ ಬೇಬಿ ದೇವರಾಗಿದ್ದು ಯಾಕೆ?

ಅಳೆದು ತೂಗಿ ಸಾಕಷ್ಟು ಟೈಂ ತೆಗೆದುಕೊಂಡು ಲಂಕಾ ಸರಣಿಗೆ ಟೀಂ ಇಂಡಿಯಾ ಫೈನಲ್ ಆಗಿದೆ. ಜುಲೈ ತಿಂಗಳಾಂತ್ಯದಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಬಲಿಷ್ಠ ಟೀಮ್​ ಇಂಡಿಯಾ ಅನೌನ್ಸ್ ಆಗಿದೆ. ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ರನ್ ಮಷಿನ್ ವಿರಾಟ್​ ಕೊಹ್ಲಿ ಕಮ್​ಬ್ಯಾಕ್​ ಮಾಡಿರೋದು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ. ಟೀಮ್​ ಇಂಡಿಯಾ ಟಿ-20 ವಿಶ್ವಕಪ್​ ಗೆದ್ದ ಬೆನ್ನಲ್ಲೇ ವಿರಾಟ್​ ಕೊಹ್ಲಿ ಮತ್ತು ರೋಹಿತ್ ಶರ್ಮಾ ಚುಟುಕು ಫಾರ್ಮೆಟ್​ನ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ರು. ಅಷ್ಟೇ ಅಲ್ಲದೇ ಶ್ರೀಲಂಕಾ ಪ್ರವಾಸದಿಂದ ಕೂಡ ರೆಸ್ಟ್​ ಕೂಡ ಕೇಳಿದ್ದರು. ಬಿಸಿಸಿಐ ಸಹ ಕೊಹ್ಲಿ, ರೋಹಿತ್​​ ಮತ್ತು ಬುಮ್ರಾಗೆ ರೆಸ್ಟ್​ ನೀಡಿತ್ತು. ಆದ್ರೆ ಗಂಭೀರ್​ ಕೋಚ್​ ಆದ ಬಳಿಕ ಇದು ಮೊದಲ ಸರಣಿ ಆಗಿದ್ದು, ಮೂವರು ಸ್ಟಾರ್​ ಆಟಗಾರರು ಶ್ರೀಲಂಕಾ ವಿರುದ್ಧ ಏಕದಿನ ಸೀರೀಸ್​ ಆಡಲೇಬೇಕು ಎಂದು ಮನವಿ ಮಾಡಿಕೊಂಡಿದ್ದರು. ಅದ್ರಂತೆ ಕೋಚ್ ಮನವಿಗೆ ಸಮ್ಮತಿ ನೀಡಿದ್ದು, ವಿರಾಟ್​ ಕೊಹ್ಲಿ ಮತ್ತು ರೋಹಿತ್​ ತಂಡಕ್ಕೆ ವಾಪಸ್ಸಾಗಿದ್ದಾರೆ. ಈ ಸರಣಿಯೊಂದಿಗೆ ಹಲವು ವಿಶ್ವಕಪ್ ವಿಜೇತ ಆಟಗಾರರು ತಂಡಕ್ಕೆ ಮರಳಿದ್ದಾರೆ. ಇನ್ನು ಟಿ20 ವಿಶ್ವಕಪ್​ನಿಂದ ಹಾಗೇ ಜಿಂಬಾಬ್ವೆ ಪ್ರವಾಸದಿಂದ ದೂರ ಉಳಿದಿದ್ದ ಕನ್ನಡಿಗ ಕೆ.ಎಲ್​ ರಾಹುಲ್​ ಮತ್ತು ಶ್ರೇಯಸ್​ ಅಯ್ಯರ್​ ಕೂಡ ಏಕದಿನ ಸರಣಿಗೆ ಆಯ್ಕೆಯಾಗಿದ್ದಾರೆ.

ಇಲ್ಲಿ ಟಿ-20 ಹಾಗೇ ಏಕದಿನ ಸರಣಿಯಲ್ಲಿ ಸಾಕಷ್ಟು ಬದಲಾವಣೆಗಳು ನಡೆದಿವೆ. ಕೆಲವರು ಟಿ-20ಗೆ ಮಾತ್ರ ಸೆಲೆಕ್ಟ್ ಆಗಿದ್ರೆ ಇನ್ನೂ ಕೆಲವ್ರು ಏಕದಿನ ಸರಣಿ ಮಾತ್ರ ಆಡಲಿದ್ದಾರೆ. ಇನ್ನೂ ಕೆಲ ಆಟಗಾರರಿಗೆ ಬಂಪರ್ ಲಾಟರಿ ಎಂಬಂತೆ ಎರಡೂ ಫಾರ್ಮೆಟ್​ನಲ್ಲಿ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಮೊದ್ಲಿಗೆ ಟಿ-20 ಸರಣಿಗೆ ಯಾರೆಲ್ಲಾ ಆಯ್ಕೆಯಾಗಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.

ಟೀಂ ಇಂಡಿಯಾ ಟಿ-20 ಸೇನೆ!

ಸೂರ್ಯಕುಮಾರ್ ಯಾದವ್ (ನಾಯಕ), ಶುಭ್​ ಮನ್‌ ಗಿಲ್ (ಉಪ ನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (ವಿ.ಕೀ), ಸಂಜು ಸ್ಯಾಮ್ಸನ್ (ವಿ.ಕೀ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್. ಇದು ಟಿ-20 ತಂಡಕ್ಕೆ ಆಯ್ಕೆಯಾಗಿರೋ ಆಟಗಾರರು. ಜುಲೈ 27 ರಂದು ಮೊದಲನೇ ಟಿ20 ಪಂದ್ಯ ನಡೆದಿದ್ರೆ ಜುಲೈ 28 ರಂದು ಎರಡನೇ ಟಿ20 ಪಂದ್ಯ ಹಾಗೇ ಜುಲೈ 30 ರಂದು ಮೂರನೇ ಟಿ20 ಪಂದ್ಯ ನಡೆಯಲಿದೆ.

ಏಕದಿನ ಸರಣಿಗೆ ಟೀಂ ಇಂಡಿಯಾ!

ರೋಹಿತ್ ಶರ್ಮಾ (ನಾಯಕ), ಶುಭ್ ಮನ್ ಗಿಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿ.ಕೀ), ರಿಷಭ್‌ ಪಂತ್ (ವಿ.ಕೀ), ಶ್ರೇಯಸ್ ಅಯ್ಯರ್, ಶಿವಂ ದುಬೆ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ರಿಯಾನ್ ಪರಾಗ್, ಅಕ್ಷರ್ ಪಟೇಲ್, ಖಲೀಲ್ ಅಹ್ಮದ್, ಹರ್ಷಿತ್ ರಾಣಾ. ಇದು ಏಕದಿನ ಸರಣಿಗೆ ಸೆಲೆಕ್ಟ್ ಆಗಿರೋ ಟೀಂ ಇಂಡಿಯಾ ಆಟಗಾರರು. ಏಕದಿನ ಸರಣಿಯ ಮೊದಲ ಪಂದ್ಯ ಆಗಸ್ಟ್‌ 2 ರಂದು ನಡೆದ್ರೆ ಎರಡನೇ ಪಂದ್ಯ ಆಗಸ್ಟ್‌ 4 ಹಾಗೇ ಮೂರನೇ ಪಂದ್ಯ ಆಗಸ್ಟ್‌ 7 ರಂದು ನಡೆಯಲಿದೆ. ಮೂರೂ ಪಂದ್ಯಗಳೂ ಕೊಲಂಬೋದಲ್ಲೇ ನಡೆಯಲಿವೆ.

ಟಿ-20ಐಗೆ ಹಾರ್ದಿಕ್ ಬದಲು ಸೂರ್ಯಕುಮಾರ್ ಗೆ ಪಟ್ಟ

ಏಕದಿನ ಸರಣಿಗೆ ರೋಹಿತ್ ಶರ್ಮಾ ನಾಯಕನಾಗಿದ್ರೆ ಟಿ20 ತಂಡಕ್ಕೆ ಸೂರ್ಯಕುಮಾರ್‌ ಯಾದವ್ ಸೆಲೆಕ್ಟ್ ಆಗಿದ್ದಾರೆ. ಒಡಿಐ ತಂಡದ ನಾಯಕನಾಗಿ ರೋಹಿತ್‌ ಶರ್ಮಾ ಮುಂದುವರಿದಿದ್ದು, ಈ ಎರಡೂ ತಂಡಗಳಿಗೆ ಉಪ ನಾಯಕನಾಗಿ ಶುಭಮನ್ ಗಿಲ್‌ ಆಯ್ಕೆಯಾಗಿದ್ದಾರೆ. ಶುಭಮನ್ ಗಿಲ್‌ ನಾಯಕತ್ವದ ಭಾರತ ತಂಡ, ಇತ್ತೀಚೆಗೆ ಜಿಂಬಾಬ್ವೆ ವಿರುದ್ದ ಐದು ಪಂದ್ಯಗಳ ಟಿ20 ಸರಣಿಯನ್ನು 4-1 ಅಂತರದಲ್ಲಿ ಗೆದ್ದು ಬೀಗಿತ್ತು. ಇದೀಗ ಶ್ರೀಲಂಕಾ ಪ್ರವಾಸದ ಟಿ20 ಸರಣಿಯಲ್ಲಿ ನಾಯಕ ಸೂರ್ಯಕುಮಾರ್‌ ಯಾದವ್‌ಗೆ ಶುಭಮನ್ ಗಿಲ್‌ ಅವರನ್ನು ಉಪ ನಾಯಕನನ್ನಾಗಿ ಆರಿಸಲಾಗಿದೆ. ಕಳೆದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡಕ್ಕೆ ಉಪ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ಈ ಸರಣಿಯಲ್ಲಿ ಕ್ಯಾಪ್ಟನ್ ಆಗ್ತಾರೆ ಎನ್ನಲಾಗಿತ್ತು. ಆದ್ರೆ ಪಾಂಡ್ಯ ಈ ಟಿ20 ಸರಣಿಯಲ್ಲಿ ಆಟಗಾರನಾಗಿ ಕಾಣಿಸಿಕೊಳ್ಳಲಿದ್ದು, ಒಡಿಐ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡಿದ್ದಾರೆ.

ಅಭಿಷೇಕ್ ಶರ್ಮಾ ಮತ್ತು ರುತುರಾಜ್ ಗಾಯಕ್ವಾಡ್ ಗೆ ನಿರಾಸೆ

ಇಲ್ಲಿ ಟೀಂ ಇಂಡಿಯಾ ಸೆಲೆಕ್ಷನ್​ನಲ್ಲಿ ಜಿಂಬಾಬ್ವೆ ಪ್ರವಾಸದಲ್ಲಿ ಅದ್ಬುತ ಪ್ರದರ್ಶನ ತೋರಿದ್ದ ಕೆಲ ಆಟಗಾರರಿಗೆ ಕೊಕ್ ಕೊಡಲಾಗಿದೆ. ಯಾಕಂದ್ರೆ ಟಿ20 ವಿಶ್ವಕಪ್‌ ಆಡಿದ್ದ ಹಿರಿಯ ಆಟಗಾರರು ಚುಟುಕು ಸರಣಿಗೆ ಮರಳಿದ್ದು, ಜಿಂಬಾಬ್ವೆ ಟಿ20 ಸರಣಿಯಲ್ಲಿ ಶತಕ ಸಿಡಿಸಿದ್ದ ಅಭಿಷೇಕ್‌ ಶರ್ಮಾ ಮತ್ತು ಅರ್ಧಶತಕ ಸಿಡಿಸಿದ್ದ ಋತುರಾಜ್‌ ಗಾಯಕ್ವಾಡ್ ಅವರನ್ನು ಕೈ ಬಿಡಲಾಗಿದೆ. ಆದರೆ, ಜಿಂಬಾಬ್ವೆ ಸರಣಿಯಲ್ಲಿ ಆಡಿದ್ದ ರಿಯಾನ್‌ ಪರಾಗ್, ವಾಷಿಂಗ್ಟನ್‌ ಸುಂದರ್‌ ಅವರು ಟಿ20 ಮತ್ತು ಏಕದಿನ ಎರಡೂ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ. ಹಾಗೇ ಶ್ರೀಲಂಕಾ ಪ್ರವಾಸದಿಂದ ಜಸ್‌ಪ್ರೀತ್‌ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ವಿರುದ್ಧ ಕಳೆದ ಒಡಿಐ ಸರಣಿಯಲ್ಲಿ ಶತಕ ಸಿಡಿಸಿದ್ದ ಸಂಜು ಸ್ಯಾಮ್ಸನ್ ಅವರನ್ನು ಏಕದಿನ ತಂಡದಿಂದ ಕೈ ಬಿಡಲಾಗಿದೆ. ಒಡಿಐ ತಂಡದಿಂದ ಎಡಗೈ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ಗೂ ಸ್ಥಾನ ನೀಡಲಾಗಿಲ್ಲ. ಇನ್ನು ರಿಯಾನ್‌ ಪರಾಗ್‌ ಅವರನ್ನು ಎರಡೂ ಸ್ವರೂಪದ ತಂಡಗಳಿಗೆ ಆಯ್ಕೆ ಮಾಡಲಾಗಿದೆ. ಇವರ ಜೊತೆಗೆ ಐದು ವರ್ಷಗಳ ಬಳಿಕ ವೇಗದ ಬೌಲಿಂಗ್‌ ಆಲ್‌ರೌಂಡರ್‌ ಆಗಿ ಶಿವಂ ದುಬೆ ಸ್ಥಾನವನ್ನು ಪಡೆದಿದ್ದಾರೆ. ಒಡಿಐ ತಂಡದಿಂದ ರಿಂಕು ಸಿಂಗ್‌ ಸ್ಥಾನ ಕಳೆದುಕೊಂಡಿದ್ದಾರೆ. ಇನ್ನು ಟಿ20 ತಂಡದ ನಾಯಕನಾಗಿ ನೇಮಕವಾದರೂ ಸೂರ್ಯಕುಮಾರ್‌ ಯಾದವ್‌ ಅವರನ್ನು ಒಡಿಐ ತಂಡದಿಂದ ಕೈ ಬಿಡಲಾಗಿದೆ. ಕಳೆದ ಫೆಬ್ರವರಿಯಲ್ಲಿ ಬಿಸಿಸಿಐ ಗುತ್ತಿಗೆ ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿದ್ದ ಶ್ರೇಯಸ್‌ ಅಯ್ಯರ್‌ ಒಡಿಐ ತಂಡಕ್ಕೆ ಮರಳಿದ್ದಾರೆ.

ಒಡಿಐ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡ ವಾಷಿಂಗ್ಟನ್‌, ಅಕ್ಷರ್‌

ಇನ್ನು ವಾಷಿಂಗ್ಟನ್‌ ಸುಂದರ್‌ ಹಾಗೇ ಅಕ್ಷರ್‌ ಪಟೇಲ್ ಇಬ್ಬರೂ ಭಾರತ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕುಲ್ದೀಪ್‌ ಯಾದವ್‌ ಮೊದಲ ಆಯ್ಕೆಯ ಸ್ಪಿನ್ನರ್‌ ಆಗಿದ್ದಾರೆ. ವೇಗದ ಬೌಲಿಂಗ್ ವಿಭಾಗವನ್ನು ಮೊಹಮ್ಮದ್‌ ಸಿರಾಜ್‌ ಮತ್ತು ಅರ್ಷದೀಪ್‌ ಸಿಂಗ್‌ ಮುನ್ನಡೆಸಲಿದ್ದಾರೆ. ಐದು ವರ್ಷಗಳ ಬಳಿಕ ಖಲೀಲ್‌ ಅಹ್ಮದ್‌ ತಂಡಕ್ಕೆ ಮರಳಿದ್ದಾರೆ. ಭಾರತ ಒಡಿಐ ತಂಡದಲ್ಲಿ ಕೆಕೆಆರ್‌ ವೇಗಿ ಹರ್ಷಿತ್‌ ರಾಣಾ ಚೊಚ್ಚಲ ಅವಕಾಶವನ್ನು ಪಡೆದಿದ್ದಾರೆ.

ಕನ್ನಡಿಗ ಕೆ.ಎಲ್ ರಾಹುಲ್​ ಗೆ ಬಿಸಿಸಿಐ ಮೋಸ?

ಕನ್ನಡಿಗ ಕೆ.ಎಲ್ ರಾಹುಲ್ ಲಂಕಾ ಸರಣಿಗೆ ಆಯ್ಕೆಯಾಗಿದ್ರೂ ಕೂಡ ಬಿಸಿಸಿಐ ಮೋಸ ಮಾಡಿದೆ ಅಂತಾ ಕನ್ನಡಿಗರು ಆಕ್ರೋಶಗೊಂದಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ. ಈ ಹಿಂದೆ ರೋಹಿತ್​ ಶರ್ಮಾ ಏಕದಿನ ಸೀರೀಸ್​ನಿಂದ ರೆಸ್ಟ್​ ತೆಗೆದುಕೊಂಡಿದ್ದಾರೆ. ಹೀಗಾಗಿ ಏಕದಿನ ಮಾದರಿಯಲ್ಲಿ ಭಾರತ ತಂಡವನ್ನು ರಾಹುಲ್​ ಅವರೇ ಮುನ್ನಡೆಸಲಿದ್ದಾರೆ. ಕೋಚ್​​ ಗೌತಮ್​​ ಗಂಭೀರ್​​ ಕೂಡ ಕೆ.ಎಲ್​ ರಾಹುಲ್​ ಭಾರತ ಏಕದಿನ ತಂಡದ ಕ್ಯಾಪ್ಟನ್​ ಆಗಲಿ ಎಂಬ ಅಭಿಪ್ರಾಯ ಕೂಡ ವ್ಯಕ್ತಪಡಿಸಿದ್ದಾರೆ ಎನ್ನಲಾಗಿತ್ತು. ಬಟ್ ಈಗ ರೋಹಿತ್​ಶರ್ಮಾ ವಾಪಸ್ ಆಗಿದ್ದು ಅವ್ರೇ ತಂಡವನ್ನ ಲೀಡ್ ಮಾಡಲಿದ್ದಾರೆ.. ರೋಹಿತ್ ಮರಳಿರೋದು ಎಲ್ಲಾ ಅಭಿಮಾನಿಗಳಿಗೆ ಖುಷಿಯ ವಿಚಾರವೇ. ಹಿಟ್​ಮ್ಯಾನ್ ನಾಯಕನಾಗಿರೋದೂ ಕೂಡ ಸಂತಸದ ಸುದ್ದಿಯೇ. ಬಟ್ ಇರೋ ಪ್ರಶ್ನೆ ಅಂದ್ರೆ ಅದು ಉಪನಾಯಕನ ಪಟ್ಟ. ಯಾಕಂದ್ರೆ ಏಕದಿನ ಮತ್ತು ಟಿ-20 ಎರಡೂ ಫಾರ್ಮೆಟ್​ನಲ್ಲೂ ಶುಭ್ಮನ್​ ಗಿಲ್​​ ಉಪನಾಯಕನ ಪಟ್ಟ ಕಟ್ಟಲಾಗಿದೆ. ಈ ಮೂಲಕ ಟೀಮ್​ ಇಂಡಿಯಾ ಮುಂದಿನ ಕ್ಯಾಪ್ಟನ್​ ಆಗಬೇಕಿದ್ದ ಕೆ.ಎಲ್​ ರಾಹುಲ್​ಗೆ ಬಿಗ್​ ಶಾಕ್​ ನೀಡಲಾಗಿದೆ. ಕಳೆದ ವರ್ಷ ಟೀಮ್​ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಕನ್ನಡಿಗ ಕೆಎಲ್ ರಾಹುಲ್ ಸೌತ್​ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು 2-1 ರಿಂದ ಗೆದ್ದು ಸಂಭ್ರಮಿಸಿದ್ರು. ಈ ಮೂಲಕ ಬರೋಬ್ಬರಿ 21 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ಬಳಿಕ ಹರಿಣಿಗಳ ನಾಡಿನಲ್ಲಿ ಸೌತ್​ ಆಫ್ರಿಕಾ ತಂಡವನ್ನು ಮಣಿಸಿದ 2ನೇ ಟೀಮ್ ಇಂಡಿಯಾ ನಾಯಕ ಎಂಬ ದಾಖಲೆ ನಿರ್ಮಿಸಿದ್ರು. ಹೀಗಿದ್ರೂ ವೈಸ್ ಕ್ಯಾಪ್ಟನ್ ಪಟ್ಟ ತಪ್ಪಿಸಿರೋದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಕೋಚ್ ಗೌತಮ್ ಗಂಭೀರ್ ಗೆ ಮೊದಲ ಪ್ರವಾಸ

ಇನ್ನು ಬಿಸಿಸಿಐ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಅವ್ರಿಗೆ ಇದು ಮೊದಲ ಸರಣಿ. ಮುಖ್ಯ ಕೋಚ್ ಆದ ಬಳಿಕ ಟೀಂ ಇಂಡಿಯಾದ ಮೊದಲ ಪ್ರವಾಸ ಇದಾಗಿದೆ. ಹೀಗಾಗಿ ಮೊದಲ ಸರಣಿಗಾಗಿ ವಿಭಿನ್ನ ತಂಡದೊಂದಿಗೆ ಗಂಭೀರ್ ಲಂಕಾ ನಾಡಿಗೆ ಕಾಲಿಡಲಿದ್ದಾರೆ. ಅಚ್ಚರಿಯೆಂದರೆ 2023 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನಾಡಿದ್ದ ಶ್ರೇಯಸ್ ಅಯ್ಯರ್ ಏಕದಿನ ತಂಡಕ್ಕೆ ಮರಳಿದ್ದಾರೆ. ಅವರೊಂದಿಗೆ ಕನ್ನಡಿಗ ಕೆಎಲ್ ರಾಹುಲ್​ಗೂ ಏಕದಿನ ತಂಡದಲ್ಲಿ ಸ್ಥಾನ ನೀಡಲಾಗಿದೆ. ಟಿ20 ಜೊತೆಗೆ ಏಕದಿನ ತಂಡದಲ್ಲೂ ವಿಕೆಟ್​ ಕೀಪರ್ ಬ್ಯಾಟ್ಸ್​ಮನ್ ರಿಷಬ್ ಪಂತ್​ಗೆ ಅವಕಾಶ ನೀಡಲಾಗಿದೆ. ಭವಿಷ್ಯದ ತಂಡ ಕಟ್ಟುವ ಸಲುವಾಗಿ ಈ ಪ್ರವಾಸಕ್ಕೆ ಹಲವು ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಇದರಲ್ಲಿ  ಶಿವಂ ದುಬೆಗೆ ಎರಡೂ ತಂಡಗಳಲ್ಲಿ ಅವಕಾಶ ನೀಡಲಾಗಿದೆ. ಹಾಗೆಯೇ ಕೆಕೆಆರ್​ ತಂಡದ ಸ್ಟಾರ್ ಬೌಲರ್ ಹರ್ಷಿತ್ ರಾಣಾ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮೊಹಮ್ಮದ್ ಸಿರಾಜ್ ಕೂಡ ಉಭಯ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ. ಸಂಜು ಸ್ಯಾಮ್ಸನ್ ಮತ್ತು ಹಾರ್ದಿಕ್ ಪಾಂಡ್ಯ ಟಿ20 ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಒಟ್ಟಾರೆ ಲಂಕಾ ದಹನಕ್ಕೆ ಟೀಂ ಇಂಡಿಯಾ ಸ್ಕ್ಬಾಡ್​ ರೆಡಿಯಾಗಿದೆ. ಇನ್ನೇನಿದ್ರೂ ಲಂಕನ್ನರನ್ನ ಬೇಟೆಯಾಡೋದಷ್ಟೇ ಬಾಕಿ.

Shwetha M

Leave a Reply

Your email address will not be published. Required fields are marked *