ಗುಜರಾತ್ ಚುನಾವಣೆ- ನಾಪತ್ತೆಯಾಗಿದ್ದ ಆಪ್ ಆಭ್ಯರ್ಥಿ ಪತ್ತೆ, ನಾಮಪತ್ರ ವಾಪಸ್
ದೇಶವಿರೋಧಿ ಪಕ್ಷವನ್ನು ಬೆಂಬಲಿಸಲು ಸಾಧ್ಯವಿಲ್ಲ- ಕಾಂಚನ್ ಜರಿವಾಲಾ
![ಗುಜರಾತ್ ಚುನಾವಣೆ- ನಾಪತ್ತೆಯಾಗಿದ್ದ ಆಪ್ ಆಭ್ಯರ್ಥಿ ಪತ್ತೆ, ನಾಮಪತ್ರ ವಾಪಸ್ದೇಶವಿರೋಧಿ ಪಕ್ಷವನ್ನು ಬೆಂಬಲಿಸಲು ಸಾಧ್ಯವಿಲ್ಲ- ಕಾಂಚನ್ ಜರಿವಾಲಾ](https://suddiyaana.com/wp-content/uploads/2022/11/kanchan-jariwala.webp)
ಗಾಂಧಿನಗರ: ಸೂರತ್ ಫೂರ್ವ ವಿಧಾನಸಭಾ ಕ್ಷೇತ್ರದ ಆಪ್ ಅಭ್ಯರ್ಥಿ ಕಾಂಚನ್ ಜರಿವಾಲಾ ಅವರನ್ನು ಬಿಜೆಪಿ ಅಪಹರಿಸಿದೆ. ಅವರು ಮತ್ತು ಅವರ ಕುಟುಂಬ ನಿನ್ನೆಯಿಂದ ನಾಪತ್ತೆಯಾಗಿದೆ ಎಂದು ಮನೀಶ್ ಸಿಸೋಡಿಯಾ ಬಿಜೆಪಿ ವಿರುದ್ಧ ಆರೋಪಿಸಿದ್ದರು. ಇದೀಗ ಕಾಂಚನ್ ಜರಿವಾಲಾ ಅವರು ಪತ್ತೆಯಾಗಿದ್ದಾರೆ. ಅಲ್ಲದೇ ತಮ್ಮ ನಾಮಪತ್ರವನ್ನು ವಾಪಾಸ್ ಪಡೆದಿದ್ದಾರೆ.
ಇದನ್ನೂ ಓದಿ: ಸೂರತ್ ನ ಆಪ್ ಅಭ್ಯರ್ಥಿ ಕಾಂಚನ್ ಜರಿವಾಲಾ ನಾಪತ್ತೆ- ಬಿಜೆಪಿ ವಿರುದ್ದ ಅಪಹರಣ ಆರೋಪ
ಕಾಂಚನ್ ಜರಿವಾಲಾ ಅವರು ಆಪ್ ಅನ್ನು ಟೀಕಿಸುವ ವೀಡಿಯೊವನ್ನು ಬಿಡುಗಡೆ ಮಾಡಿದ್ದು, ನಾನೇ ನಾಮಪತ್ರ ಹಿಂಪಡೆದಿದ್ದೇನೆ, ಯಾರ ಒತ್ತಡವೂ ಇಲ್ಲ. ಪ್ರಚಾರದ ವೇಳೆ ಜನ ನನ್ನನ್ನು ‘ದೇಶವಿರೋಧಿ’ ಪಕ್ಷಕ್ಕೆ ಯಾಕೆ ಸೇರುತ್ತಿದ್ದೀ ಎಂದು ಕೇಳಿದರು. ಬಳಿಕ ಯೋಚಿಸಿ, ಕೊನೆಗೆ ಅಂತಹ ಪಕ್ಷವನ್ನು ಬೆಂಬಲಿಸಲು ಸಾಧ್ಯವಿಲ್ಲವೆಂದು ಈ ನಿರ್ಧಾರಕ್ಕೆ ಬಂದೆ ಎಂದು ಹೇಳಿದ್ದಾರೆ.
ನನ್ನನ್ನು ಅಪಹರಿಸಿಲ್ಲ. ನಾನು ನನ್ನ ಕುಟುಂಬದೊಂದಿಗೆ ಇದ್ದೆ. ನನ್ನ ಸಮುದಾಯದ ಜನರು ನನಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ಭಾರಿ ನೂಕುನುಗ್ಗಾಟದ ಮಧ್ಯೆ ಅವರು ಚುನಾವಣಾ ಕಚೇರಿಗೆ ಬಂದು ನಾಮಪತ್ರವನ್ನು ವಾಪಾಸ್ ಪಡೆಯುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗುತ್ತಿದ್ದು, ಕಾಂಚನ್ ಅವರನ್ನು ಅಪಹರಿಸಿ, ಬೆದರಿಕೆಯೊಡ್ಡಿ ನಾಮಪತ್ರ ವಾಪಾಸ್ ಪಡೆಯುವಂತೆ ಮಾಡಲಾಗಿದೆ ಎಂದು ಆಪ್ ಆರೋಪಿಸಿದೆ.
ಕಾಂಚನ್ ಅವರು ಮತ್ತು ಅವರ ಕುಟುಂಬ ಎರಡು ದಿನಗಳಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ, ಅವರು ಕಾಣೆಯಾಗಿದ್ದಾರೆ. ಅವರನ್ನು ಅಪಹರಿಸಲಾಗಿದೆ ಎಂದು ಶಂಕಿಸಲಾಗಿತ್ತು. ಆದರೆ 500ಕ್ಕೂ ಹೆಚ್ಚು ಪೊಲೀಸರು ಮತ್ತು ಬಿಜೆಪಿ ಗೂಂಡಾಗಳ ಜೊತೆ ಬಂದು ನಾಮಪತ್ರ ವಾಪಾಸ್ ಪಡೆದಿದ್ದಾರೆ. ಬಂದೂಕಿಟ್ಟು ಬೆದರಿಸಿ, ಅವರಿಂದ ಈ ಕೆಲಸ ಮಾಡಿಸಲಾಗಿದೆ. ಬಳಿಕ ಮತ್ತೆ ಅವರು ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದೆ.
ಈ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲಲಿದೆ. ಅಂತಹ ಸೋಲಿನಿಂದ ಹೆದರಿರುವ ಬಿಜೆಪಿ, ಎದುರಾಳಿ ಅಭ್ಯರ್ಥಿಗಳನ್ನುಅಪಹರಣ ಮಾಡುವಷ್ಟು ಹೀನಾಯ ಸ್ಥಿತಿಗೆ ಬಂದಿದೆ ಎಂದು ಆಪ್ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಮನೀಷ್ ಡಿಸೋಡಿಯಾ ಆರೋಪಿಸಿದ್ದಾರೆ.