ಹೆಚ್ಚುತ್ತಿದೆ ಬೀದಿ ನಾಯಿಗಳ ಹಾವಳಿ – ಒಂದೇ ದಿನದಲ್ಲಿ 40ಕ್ಕೂ ಅಧಿಕ ಮಂದಿಗೆ ಕಚ್ಚಿದ ಶ್ವಾನಗಳು!
![ಹೆಚ್ಚುತ್ತಿದೆ ಬೀದಿ ನಾಯಿಗಳ ಹಾವಳಿ – ಒಂದೇ ದಿನದಲ್ಲಿ 40ಕ್ಕೂ ಅಧಿಕ ಮಂದಿಗೆ ಕಚ್ಚಿದ ಶ್ವಾನಗಳು!](https://suddiyaana.com/wp-content/uploads/2024/01/9-11.jpg)
ದಿನೇ ದಿನೆ ಬೀದಿ ನಾಯಿಗಳು ಹಾವಳಿ ಜಾಸ್ತಿಯಾಗುತ್ತಿದೆ. ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸುತ್ತಿವೆ. ನಾಯಿ ದಾಳಿಯಿಂದಾಗಿ ಲೆಕ್ಕವಿಲ್ಲದಷ್ಟು ಮಂದಿ ಗಾಯಗೊಂಡಿದ್ದಾರೆ. ಹಲವರು ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್ನಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಆತಂಕಾರಿ ಬೆಳವಣಿಗೆಯೊಂದು ನಡೆದಿದೆ. ಒಂದೇ ದಿನದಲ್ಲಿ 40ಕ್ಕೂ ಅಧಿಕ ಮಂದಿ ಮೇಲೆ ಬೀದಿನಾಯಿ ದಾಳಿ ನಡೆಸಿವೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಐಪಿಎಲ್ ಟೂರ್ನಿ ಮೇಲೆ ಲೋಕಸಭಾ ಚುನಾವಣೆ ಎಫೆಕ್ಟ್ – ಭಾರತದಲ್ಲಿ ನಡೆಯುತ್ತಾ IPL ಟೂರ್ನಿ?
ಹೌದು ಭೋಪಾಲ್ನಲ್ಲಿ ಮಂಗಳವಾರ ಒಂದೇ ದಿನ ಬೀದಿನಾಯಿಗಳಿಂದ ಕಚ್ಚಿಸಿಕೊಂಡ 40ಕ್ಕೂ ಹೆಚ್ಚು ವ್ಯಕ್ತಿಗಳು ರೇಬಿಸ್ ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆಗೆ ಬಂದಿದ್ದರು. ಜನವರಿ ಮೊದಲ ವಾರವೊಂದರಲ್ಲೇ ನಗರದ ವಿವಿಧೆಡೆ ನಾಯಿ ಕಡಿತದ ಹತ್ತಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ.
ಜನವರಿ 10 ರಂದು ಭೋಪಾಲ್ನಲ್ಲಿ ಏಳು ತಿಂಗಳ ಮಗುವನ್ನು ಬೀದಿ ನಾಯಿಗಳು ಕೊಂದು ಹಾಕಿದ್ದವು. ಅಂದಿನಿಂದ ಮುನ್ಸಿಪಲ್ ಕಾರ್ಪೊರೇಷನ್ ಬೀದಿ ನಾಯಿಗಳನ್ನು ಹಿಡಿಯುವ ಅಭಿಯಾನವನ್ನು ಪ್ರಾರಂಭಿಸಿದೆ. ಮಂಗಳವಾರ ಸಂಜೆ, ಮೇಯರ್ ಮಾಲ್ತಿ ರೈ ಅವರು ಪಾಲಿಕೆ ಅಧಿಕಾರಿಗಳ ಸಭೆಯನ್ನು ಕರೆದರು, ಪಾಲಿಕೆ ಆಯುಕ್ತ ನೋಬಲ್ ಫ್ರಾಂಕ್ ಸಹ ಹಾಜರಿದ್ದರು.
ಆದಷ್ಟು ಬೇಗ ಬೀದಿ ನಾಯಿಗಳನ್ನು ಹಿಡಿಯುವಂತೆ ಅಧಿಕಾರಿಗಳಿಗೆ ಮೇಯರ್ ಸೂಚಿಸಿದರು. ಸಾಕುಪ್ರಾಣಿಗಳ ಮಾಲೀಕರು ತಮ್ಮ ಸಾಕುಪ್ರಾಣಿಗಳನ್ನು ಮನೆಯಲ್ಲಿ ಅಥವಾ ಗೂಡಿನಲ್ಲಿ ಬಂಧಿಸುವಂತೆ ಅವರು ಒತ್ತಾಯಿಸಿದ್ದಾರೆ. ಮಹಾನಗರ ಪಾಲಿಕೆಯ ಕಾಮಗಾರಿಗೆ ಅಡ್ಡಿಪಡಿಸಿದರೆ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಎಂದಿದ್ದಾರೆ.