ಅಣ್ಣನ ಹುಟ್ಟುಹಬ್ಬದಂದು ನಡೆದೇ ಹೋಯ್ತು ದುರಂತ – ಶ್ವಾಸನಾಳದಲ್ಲಿ ಕೇಕ್ ಸಿಲುಕಿ ಬಾಲಕ ಸಾವು!
![ಅಣ್ಣನ ಹುಟ್ಟುಹಬ್ಬದಂದು ನಡೆದೇ ಹೋಯ್ತು ದುರಂತ – ಶ್ವಾಸನಾಳದಲ್ಲಿ ಕೇಕ್ ಸಿಲುಕಿ ಬಾಲಕ ಸಾವು!](https://suddiyaana.com/wp-content/uploads/2023/08/6-11.jpg)
ಆ ಮನೆಯಲ್ಲಿ ಸಂಭ್ರಮ ಮನೆಮಾಡಿತ್ತು. ಮನೆ ಮಗನ ಹುಟ್ಟುಹಬ್ಬ ಎಂದು ಎಲ್ಲರೂ ಖುಷಿಯಿಂದ ಓಡಾಡುತ್ತಿದ್ದರು. ಸಂಬಂಧಿಕರು, ಸ್ನೇಹಿತರೆಲ್ಲರೂ ಮನೆಗೆ ಆಗಮಿಸಿ ಬರ್ತ್ಡೇ ಬಾಯ್ಗೆ ವಿಶ್ ಮಾಡುತ್ತಿದ್ದರು. ಕೇಕ್ ಕಟ್ ಮಾಡಿ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಿರುವಾಗಲೇ ಅಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಅಣ್ಣನ ಬರ್ತ್ಡೇಯಂದೇ ತಮ್ಮ ಕೊನೆಯುಸಿರೆಳೆದಿದ್ದಾನೆ!
ಹೌದು, ಅಣ್ಣನ ಹುಟ್ಟುಹಬ್ಬದಂದು ತರಾತುರಿಯಲ್ಲಿ ಕೇಕ್ ತಿಂದು ಎಂಟು ವರ್ಷದ ಬಾಲಕ ಪ್ರಾಂಜಲ್ ಶ್ರೀವಾಸ್ತವ್ ಸಾವನ್ನಪ್ಪಿದ್ದಾನೆ. ಹುಟ್ಟುಹಬ್ಬದ ಆಚರಣೆಯ ಸಂಭ್ರಮದಲ್ಲಿದ್ದ ಇಡೀ ಕುಟುಂಬವು ಈಗ ದುಃಖದಲ್ಲಿ ಮುಳುಗಿದೆ.
ಇದನ್ನೂ ಓದಿ: ಅತ್ಯಾಚಾರಕ್ಕೆ ಮುಂದಾದ ಫೇಸ್ಬುಕ್ ಸ್ನೇಹಿತ – ಪ್ರತಿಭಟಿಸಿದ ಯುವತಿಯ ತಲೆಬುರುಡೆಯನ್ನೇ ಒಡೆದ ಕಿರಾತಕ ಅರೆಸ್ಟ್
ಜನ್ಸಾ ಪೊಲೀಸ್ ಠಾಣೆ ವ್ಯಾಪ್ತಿಯ, ಸಜೋಯಿ ಗ್ರಾಮದ ಶಿಕ್ಷಕ ಧೀರಜ್ ಶ್ರೀವಾಸ್ತವ ಅವರ ಹಿರಿಯ ಪುತ್ರ ಪ್ರಖರ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಗಿತ್ತು. ಸೋಮವಾರ ತಡರಾತ್ರಿ ಕೇಕ್ ಕತ್ತರಿಸಿದ ಬಳಿಕ ಕಿರಿಯ ಸಹೋದರ ಪ್ರಾಂಜಲ್ ಕೇಕ್ ತಿಂದಿದ್ದಾನೆ. ಈ ವೇಳೆ ಆತನ ಆರೋಗ್ಯ ಹದಗೆಡತೊಡಗಿತು. ಸಂಬಂಧಿಕರು ರಾತ್ರಿ ಒಂದು ಗಂಟೆಗೆ ಸಾಯಿ ನರ್ಸಿಂಗ್ ಹೋಮ್ಗೆ ಕರೆದೊಯ್ದರು. ಆ ನಂತರ ಚೈಲ್ಡ್ ಕೇರ್ ಆಸ್ಪತ್ರೆ, ಕೊನೆಗೆ ಹೆರಿಟೇಜ್ ಆಸ್ಪತ್ರೆಗೆ ಕರೆದೊಯ್ದರು. ಕೊನೆಯಲ್ಲಿ ಜನಪ್ರಿಯ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಆದರೆ ಬಾಲಕನನ್ನು ರಕ್ಷಿಸಲು ನಡೆಸಿದ ಪ್ರಯತ್ನಗಳು ವ್ಯರ್ಥವಾಗಿದೆ. ಶ್ವಾಸನಾಳದಲ್ಲಿ ಕೇಕ್ ಸಿಲುಕಿಕೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿದ್ದಾನೆ.
“ನನ್ನ ಮಗನ ಶ್ವಾಸನಾಳಕ್ಕೆ ಕೇಕ್ ತಗುಲಿ ಉಸಿರಾಟದ ತೊಂದರೆಯಾಗಿ ಸಾವನ್ನಪ್ಪಿದ್ದಾನೆ” ಎಂದು ತಂದೆ ಧೀರಜ್ ತಿಳಿಸಿದ್ದಾರೆ. ಇಬ್ಬರು ಸಹೋದರರಲ್ಲಿ ಕಿರಿಯವನಾದ ಪ್ರಾಂಜಲ್ ಜ್ಞಾನದಾಯಿನಿ ಮಕ್ಕಳ ಶಾಲೆಯಲ್ಲಿ ಓದುತ್ತಿದ್ದನು. ಪ್ರಾಂಜಲ್ ತಾಯಿ ಮತ್ತು ಇತರ ಸಂಬಂಧಿಕರ ಅಳಲು ಮುಗಿಲು ಮುಟ್ಟಿದೆ.