ಮಹಾಮಳೆಯ ರೌದ್ರ ನರ್ತನ – ಆಟಿಕೆಗಳಂತೆ ಕೊಚ್ಚಿ ಹೋಗುತ್ತಿರುವ ವಾಹನಗಳು!

ಮಹಾಮಳೆಯ ರೌದ್ರ ನರ್ತನ – ಆಟಿಕೆಗಳಂತೆ ಕೊಚ್ಚಿ ಹೋಗುತ್ತಿರುವ ವಾಹನಗಳು!

ಎತ್ತ ನೋಡಿದರೂ, ಎಲ್ಲಿ ಕಣ್ಣು ಹಾಯಿಸಿದರೂ ನೀರು ನೀರು… ಆಟಿಕೆಗಳಂತೆ ಕೊಚ್ಚಿಹೋಗುತ್ತಿರುವ ವಾಹನಗಳು.. ಊಟ, ನಿದ್ದೆ ಕಂಗಾಲಾದ ಜನರು.. ಯಾರಾದರೂ ಬಂದು ಕಾಪಾಡಲಿ ಎಂದು ದೇವರ ಮೊರೆ ಹೋಗುತ್ತಿರುವ ಬಡಪಾಯಿ ಜೀವಗಳು.. ಇದು ಉತ್ತರಭಾರತದಲ್ಲಿ ರಣಚಂಡಿ ಮಳೆ ಸೃಷ್ಟಿಸುತ್ತಿರುವ ಅವಾಂತರ..

ಕಳೆದ ಕೆಲವು ದಿನಗಳಿಂದ ಹಿಮಾಚಲ ಪ್ರದೇಶ ಸೇರಿ ಉತ್ತರ ಭಾರತದಾದ್ಯಂತ ಭಾರಿ ಮಳೆಯಾಗುತ್ತಿದೆ. ಅಲ್ಲಲ್ಲಿ ಭೂಕುಸಿತ, ಪ್ರವಾಹ ಉಂಟಾಗಿದೆ. ನೂರಾರು ಮನೆಗಳು ಜಖಂಗೊಂಡಿವೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿರುವ ಬಿಯಾಸ್ ನದಿ ಅಕ್ಷರಶಃ ಚಂಡಿ ಅವತಾರ ತಾಳಿದೆ. ಇದರಿಂದಾಗಿ ಆಟ್-ಬಂಜಾರ್‌ ನ ಸಂಪರ್ಕ ಸೇತುವೆ ಸೇತುವೆ ಸಂಪೂರ್ಣ ಕೊಚ್ಚಿಹೋಗಿದೆ. ವಾಹನಗಳು, ಸೇತುವೆಗಳು ಕೊಚ್ಚಿ ಹೋಗುತ್ತಿರುವ ದೃಶ್ಯಗಳು ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನಾರಂಭ – ಯಾತ್ರಾರ್ಥಿಗಳಿಗೆ ಹೆಲಿಕಾಪ್ಟರ್ ಸೌಲಭ್ಯ

ಬಿಯಾಸ್‌ ನದಿಯ ರೌದ್ರ ನರ್ತನಕ್ಕೆ ಮಂಡಿ ಜಿಲ್ಲೆಯ ಪಾಂಡೋಹ್​ ಎಂಬ ಹಳ್ಳಿಗೆ ನೀರು ನುಗ್ಗಿದ್ದು, ಹಳ್ಳಿಗರೆಲ್ಲ ಪರದಾಡುವಂಥ ಪರಿಸ್ಥಿತಿ ಉಂಟಾಗಿದೆ. ಮನೆಗಳಿಗೆ ನೀರು ನುಗ್ಗಿದೆ. ನೂರಾರು ಮರಗಳು, ವಿದ್ಯುತ್‌ ಕಂಬಗಳು ಧರೆಗುರುಳಿವೆ. ಇದರಿಂದಾಗಿ ಹಳ್ಳಿಯ ಜನ ಕತ್ತಲಲ್ಲಿ ದಿನ ದೂಡುವಂತಾಗಿದೆ.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು, ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಬೀಳುವ ಸಂಭವವಿದ್ದು, ನದಿಗಳ ಬಳಿ ಹೋಗದಂತೆ ನಾಗರಿಕರಲ್ಲಿ ಮನವಿ ಮಾಡಿಕೊಂಡಿದ್ಧಾರೆ. ಅಲ್ಲದೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಮಂಡಿ ಮತ್ತು ಕುಲು ಜಿಲ್ಲೆಗಳಲ್ಲಿ ಎಡೆಬಿಡದೆ ಸುರಿದ ಮಳೆಯ ಪರಿಣಾಮ ಬಿಯಾಸ್​ನ ನೀರಿನ ಮಟ್ಟ ಹೆಚ್ಚಾಗಿದೆ. ಅಷ್ಟೇ ಅಲ್ಲದೇ ಕುಲು-ಮನಾಲಿ ರಸ್ತೆಯಲ್ಲಿ ಕಲ್ಲುಬಂಡೆಗಳು ಉರುಳಿ ಬಿದ್ದಿರುವುದರಿಂದ ಕುಲು ಮತ್ತು ಮನಾಲಿ ನಡುವಿನ ಸಂಚಾರವನ್ನು ನಿಷೇಧಿಸಲಾಗಿದೆ.  ಶಿಮ್ಲಾ-ಕಲ್ಕಾ ಹೆರಿಟೇಜ್ ರೈಲು ಹಳಿಯು ಜಲಾವೃತಗೊಂಡ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದ ಸಂಚಾರಿ, ಪ್ರವಾಸಿ ಮತ್ತು ರೈಲ್ವೇ ಪೊಲೀಸರು ರೈಲುಗಳನ್ನು ರದ್ದುಗೊಳಿಸಿದ್ದಾರೆ. ಕಲ್ಕಾ-ಶಿಮ್ಲಾ ರೈಲ್ವೆ ಮಾರ್ಗದಲ್ಲಿ ಭಾರೀ ಮಳೆಯಿಂದಾಗಿ ಕೋಟಿ ಮತ್ತು ಸನ್ವಾರ ರೈಲು ನಿಲ್ದಾಣಗಳ ನಡುವಿನ ರೈಲ್ವೆಮಾರ್ಗವನ್ನು ಬಂದ್ ಮಾಡಲಾಗಿದೆ.  ಒಟ್ಟಿನಲ್ಲಿ ಈ ಮಹಾಮಳೆ ರಣಚಂಡಿ ಅವತಾರ ಎತ್ತಿದೆ. ಉತ್ತರಭಾರತದಾದ್ಯಂತ ಲೆಕ್ಕವಿಲ್ಲದಷ್ಟು ಅವಾಂತರಗಳನ್ನು ಸೃಷ್ಟಿಸಿದೆ.

suddiyaana