ಕಾಂಗ್ರೆಸ್‌ ʼಗ್ಯಾರಂಟಿʼ ಕುತಂತ್ರ – ಹೇಗಿದೆ ಕುಮಾರಸ್ವಾಮಿ ಒತ್ತಡ ತಂತ್ರ?

ಕಾಂಗ್ರೆಸ್‌ ʼಗ್ಯಾರಂಟಿʼ ಕುತಂತ್ರ – ಹೇಗಿದೆ ಕುಮಾರಸ್ವಾಮಿ ಒತ್ತಡ ತಂತ್ರ?

ಬೆಂಗಳೂರು: ಕಾಂಗ್ರೆಸ್‌ ಚುನಾವಣೆಯಲ್ಲಿ ಗೆಲ್ಲಲು ಘೋಷಿಸಿದ್ದ ಐದು ಗ್ಯಾರಂಟಿಗಳ ವಿರುದ್ದ ವಿರೋಧ ಪಕ್ಷದ ನಾಯಕರು ಆರಂಭದಿಂದಲೂ ಟೀಕೆ ಮಾಡುತ್ತಲೇ ಬಂದಿದ್ದಾರೆ. ಇದೀಗ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು ‘ಚುನಾವಣೆ ಗೆಲ್ಲಲು ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಹೆಸರಿನಲ್ಲಿ ಕುತಂತ್ರ ರಾಜಕಾರಣ ಮಾಡಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೂತನ ಸಚಿವರ ಪಟ್ಟಿ ಸಿದ್ದ! – ಸೋನಿಯಾ, ರಾಹುಲ್ ಗಾಂಧಿ ಭೇಟಿ ಮಾಡಿದ್ಯಾಕೆ ಸಿದ್ದು? 

ಬೆಂಗಳೂರಿನ ಜೆಡಿಎಸ್​ ಕಚೇರಿಯಲ್ಲಿ ಮಾತನಾಡಿದ ಹೆಚ್​ಡಿ ಕುಮಾರಸ್ವಾಮಿ, ʼಕಾಂಗ್ರೆಸ್‌ ಪಕ್ಷ ಮತದಾನಕ್ಕೂ ಮುನ್ನ ಸುಮಾರು 42 ವಿಧಾನಸಭಾ ಕ್ಷೇತ್ರಗಳಲ್ಲಿ 60 ಸಾವಿರ ಕುಟುಂಬಗಳಿಗೆ ಕೂಪನ್​​​​​ ಕಾರ್ಡ್ ಹಂಚಿದೆ. ಈ ಕಾರ್ಡ್‌ ಹಿಂದೆ ಬಾರ್‌ಕೋಡ್ ನಂಬರ್ ಇದ್ದು, ಶಾಪ್‌ನಲ್ಲಿ ನೀವು ಸ್ವೈಪ್ ಮಾಡಿ 3,500 ರಿಂದ 5 ಸಾವಿರ ಬೆಲೆಯ ವಸ್ತು ಖರೀದಿ ಮಾಡಬಹುದು ಎಂದು ಆಮಿಷ ಒಡ್ಡಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡುವುದರಿಂದ ಯಾವುದೇ ಉಪಯೋಗವಿಲ್ಲ. ಬಿಜೆಪಿ ಸರ್ಕಾರದ್ದು 40% ಹೇಳಿದ್ರಲ್ಲ, ಈಗ ಏನು ಹೇಳ್ತೀರಿ, 5 ಸಾವಿರ 60 ಸಾವಿರ ಕಾರ್ಡ್ ಅಂದ್ರೆ 30 ಕೋಟಿಯಾಯ್ತು. ನೀವಿಗಾ 30 ಕೋಟಿ ಗಿಫ್ಟ್ ಕೊಡಬೇಕುʼ ಎಂದು ಕಿಡಿಕಾರಿದ್ದಾರೆ.

ಎಲೆಕ್ಷನ್‌ಗೂ ಮುನ್ನ ನಿನಗೂ ಫ್ರೀ, ನನಗೂ ಫ್ರೀ ಎಂದು ಇದೇ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಮೊದಲ ಸಂಪುಟದಲ್ಲೇ ಎಲ್ಲಾ ಗ್ಯಾರಂಟಿ ಜಾರಿ ಮಾಡ್ತೀವಿ ಎಂದು ಹೇಳಿದ್ದರು. 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಹೇಳಿದ್ದಾರೆ. ರಾಜ್ಯದ ಜನರು ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ. ಮಹಿಳೆಯರಿಗೆ ಸರ್ಕಾರಿ ಬಸ್​ಗಳಲ್ಲಿ ಉಚಿತ ಪ್ರಯಾಣ ಅಂದ್ರು, ಈಗ ಈ ಗ್ಯಾರಂಟಿಗಳಿಗೆ ಕಂಡೀಷನ್​ ಇದೆ ಎಂದು ಹೇಳುತ್ತಿದ್ದಾರೆ. ಗ್ಯಾರಂಟಿ ಘೋಷಣೆ ಮುನ್ನವೇ ಯಾಕೆ ಷರತ್ತುಗಳ ಬಗ್ಗೆ ಹೇಳಿಲ್ಲ. ನಿಮ್ಮ ಕುತಂತ್ರದ ರಾಜಕೀಯಕ್ಕೆ ಜನರು ಮುಂದಿನ ದಿನಗಳಲ್ಲಿ ಪಾಠ ಕಲಿಸುತ್ತಾರೆ ಎಂದು ಕಾಂಗ್ರೆಸ್​ ಗ್ಯಾರಂಟಿ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್‌ ನಾಯಕರು ಬಿಜೆಪಿಯವರ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದಾರೆ. ನೀವು 5 ಸಾವಿರ ರೂ. ಗಿಫ್ಟ್ ಕೊಡ್ತೀವಿ ಎಂದು ಜನರಿಗೆ ವಂಚನೆ ಮಾಡಿ, ಇದಕ್ಕೆ ನೀವು ಎಷ್ಟು ಪರ್ಸೆಂಟ್ ಕಮಿಷನ್ ಹೊಡೆಯುತ್ತೀರಾ ಹೇಳಿ. ಆರ್​ಆರ್​ ನಗರದಲ್ಲಿ ಕುಸುಮಾ, ಕುಣಿಗಲ್ ಕ್ಷೇತ್ರದಲ್ಲಿ ರಂಗನಾಥ್​​, ರಾಮನಗರದಲ್ಲಿ ಇಕ್ಬಾಲ್​, ಮಾಗಡಿಯಲ್ಲಿ ಬಾಲಕೃಷ್ಣರಿಂದ ಕೂಪನ್ ಹಂಚಿಕೆ ಮಾಡಲಾಗಿದೆ. ಇಂತಹ ಅಕ್ರಮ ಕೂಪನ್​ಗಳಿಂದ ನಮ್ಮ ಪಕ್ಷ ಹಲವೆಡೆ ಸೋತಿದೆ. ನಿಮ್ಮ ಯೋಗ್ಯತೆಗೆ ಈ ರೀತಿ ಚುನಾವಣೆ ನಡೆಸಿ, ನಮ್ಮ ಪಕ್ಷಕ್ಕೆ ವಿಸರ್ಜನೆ ಮಾಡಿ ಅಂತ ಹೇಳ್ತಿರಾ! ಕಾಂಗ್ರೆಸ್​ನ ಅಕ್ರಮ ಕೂಪನ್​ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತನಿಖೆ ನಡೆಸಲಿ ಎಂದು ಹೆಚ್‌ ಡಿಕೆ ಆಗ್ರಹಿಸಿದ್ದಾರೆ.

suddiyaana