ವರ್ತೂರು ಸಂತೋಷ್‌ಗೆ 14 ದಿನ ನ್ಯಾಯಾಂಗ ಬಂಧನ – ಲಾಕೆಟ್ ಮಾಡಿಕೊಟ್ಟ ಚಿನ್ನದ ಅಂಗಡಿ ಮಾಲೀಕನಿಗೂ ಸಂಕಷ್ಟ

ವರ್ತೂರು ಸಂತೋಷ್‌ಗೆ 14 ದಿನ ನ್ಯಾಯಾಂಗ ಬಂಧನ – ಲಾಕೆಟ್ ಮಾಡಿಕೊಟ್ಟ ಚಿನ್ನದ ಅಂಗಡಿ ಮಾಲೀಕನಿಗೂ ಸಂಕಷ್ಟ

ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್ ಅವರು ಜೈಲು ಸೇರಿದ್ದಾರೆ. ವರ್ತೂರು ಸಂತೋಷ್‌ಗೆ ತನ್ನ ಕೊರಳಲ್ಲಿ ಧರಿಸಿದ್ದ ಹುಲಿ ಉಗುರೇ ಈಗ ಜೈಲು ಸೇರುವಂತೆ ಮಾಡಿದೆ. ಇದರ ಜೊತೆಗೆ ಲಾಕೆಟ್ ಮಾಡಿಕೊಟ್ಟ ಚಿನ್ನದ ಅಂಗಡಿ ಮಾಲೀಕನಿಗೂ ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ:  ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಬಿಗ್‌ಬಾಸ್ ಸ್ಪರ್ಧಿ ಸಂತೋಷ್ ಬಂಧನ – ಪ್ರಾಣಿ, ಪಕ್ಷಿಗಳ ವಿಚಾರದಲ್ಲಿ ನಾವು ಪಾಲಿಸಬೇಕಾಗಿರುವಂಥಾ ನಿಯಮಗಳೇನು?

ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ಮನೆಯೊಳಗೆ ವರ್ತೂರು ಸಂತೋಷ್ ಹೋಗಿದ್ದರು. ಆದರೆ ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದ ಕಾರಣ, ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ವರ್ತೂರು ಸಂತೋಷ್ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ. ಕೋರಮಂಗಲದ ಜಡ್ಜ್ ನಿವಾಸದಲ್ಲಿ ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ಹಾಜರುಪಡಿಸಿದ್ದರು. ಹೆಚ್ಚಿನ ವಿಚಾರಣೆಯ ಹಿನ್ನೆಲೆಯಲ್ಲಿ ವರ್ತೂರು ಸಂತೋಷ್‌ಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಲಾಗಿದೆ. 14 ದಿನ ನ್ಯಾಯಾಂಗ ಬಂಧನ ವಿಧಿಸಿ 2ನೇ ಎಸಿಜೆಎಂ ನ್ಯಾಯಾಧೀಶರ ಆದೇಶ ನೀಡಿದೆ. ನವೆಂಬರ್ 6ರವರೆಗೂ ಅವರು ನ್ಯಾಯಾಂಗ ಬಂಧನದಲ್ಲಿ ಇರಲಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವರ್ತೂರು ಸಂತೋಷ್ ಪರ ವಕೀಲ ನಟರಾಜ್, ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ದೂರುದಾರರಿಗೆ ಸೂಚಿಸಿದ್ದಾರೆ. ಸರ್ಕಾರದ ಪರ ವಕೀಲರು ಆಕ್ಷೇಪಣಾ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ಇದಕ್ಕೆ ಎಫ್ಐಆರ್ ದಾಖಲು ಮಾಡಲು ಬರುವುದಿಲ್ಲ. ಸುಪ್ರೀಂ ಆದೇಶದಂತೆ ತನಿಖಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕವೇ ಸಂತೋಷ್ ಅವರನ್ನು ಬಂಧಿಸಿದ್ದಾರೆ’ ಎಂದು ಹೇಳಿದ್ದಾರೆ. ಸಂತೋಷ್ ಧರಿಸಿರುವುದು ಹುಲಿ ಉಗುರು ಅಂತಾ ಹೇಳುತ್ತಿದ್ದಾರೆ. ಪರಿಣಿತರು ಈ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಬೇಕಿದೆ. ಆ ಬಳಿಕವೇ ಅದರ ಬಗ್ಗೆ ಗೊತ್ತಾಗಲಿದೆ. ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ, 3-4 ವರ್ಷಗಳ ಹಿಂದೆ ತಮಿಳುನಾಡಿಗೆ ಹೋಗಿದ್ದಾಗ ಹೊಸೂರು-ಧರ್ಮಪುರಿ ಮಧ್ಯೆ ಅದನ್ನು ಅವರು ಖರೀದಿಸಿದ್ದಾರೆ ಎನ್ನಲಾಗಿದೆ. ಅದನ್ನು ಹಾಕಿಕೊಳ್ಳಬೇಕಾ, ಬೇಡ್ವಾ ಎಂಬ ಸಾಮಾನ್ಯ ಜ್ಞಾನ ಅವರಿಗೆ ಗೊತ್ತಿರಲಿಲ್ಲ. ಬಿಲ್ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ..’ ಎಂದು ವರ್ತೂರು ಸಂತೋಷ್ ಪರ ವಕೀಲ ನಟರಾಜ್ ಹೇಳಿದ್ದಾರೆ.

ಇನ್ನು ವರ್ತೂರು ಸಂತೋಷ್ ಅವರಿಗೆ ಲಾಕೆಟ್ ಮಾಡಿಕೊಟ್ಟ ಚಿನ್ನದ ಅಂಗಡಿ ಮಾಲೀಕನಿಗೂ ಇದೀಗ ಸಂಕಷ್ಟ ಎದುರಾಗಿದೆ. ತನಿಖೆ ವೇಳೆ ಹುಲಿ ಉಗುರು ಖರೀದಿ ಬಗ್ಗೆ ಸಂತೋಷ್ ಮಹತ್ವದ ಅಂಶ ಬಾಯ್ಬಿಟ್ಟಿದ್ದಾರೆ. ಹೀಗಾಗಿ ಹೆಚ್ಚಿನ ಮಾಹಿತಿ ಕಲೆಹಾಕಲು ಹುಲಿ ಉಗುರು ಮೂಲ ಕೆದಕಲು ಅರಣ್ಯ ಇಲಾಖೆ ತಯಾರಿ ನಡೆಸಿದ್ದು, ಸಂತೋಷ್ ಆಪ್ತ ರಂಜಿತ್, ಚಿನ್ನ ಅಂಗಡಿ ಮಾಲೀಕನಿಗೆ ನೊಟೀಸ್ ನೀಡಿದೆ. ಹೀಗಾಗಿ ಲಾಕೇಟ್ ಮಾಡಿಕೊಟ್ಟ ವರ್ತೂರು ಮೂಲದ ಚಿನ್ನದ ಅಂಗಡಿ ಮಾಲೀಕನಿಗೂ ಸಂಕಷ್ಟ ಎದುರಾಗಿದ್ದು, ತನಿಖೆ ವೇಳೆ ಆರೋಪಗಳು ಸಾಬೀತಾದರೆ ಬಂಧನವಾಗು ಸಾಧ್ಯತೆಗಳಿವೆ. ಇನ್ನು ಪೊಲೀಸರು ಹುಲಿ ಉಗುರಿನ ಮೂಲ ಕೆದಕಲು ಮುಂದಾಗಿದ್ದು, ವರ್ತೂರ್ ಸಂತೋಷ್ಗೆ ಈ ಹುಲಿ ಉಗುರು ಕೊಟ್ಟಿದ್ಯಾರು?  ಹುಲಿಯನ್ನು ಬೇಟೆಯಾಡಿ ಉಗುರು ತಂದು ಕೊಟ್ಟಿದ್ದಾರಾ? ಹುಲಿಯನ್ನು ಸಾಯಿಸಿ ಉಗುರು ಕಿತ್ತುಕೊಂಡು ಬಂದಿದ್ದಾರಾ? ಹೀಗೆ  ಹುಲಿ ಉಗುರಿನ ಮೂಲ ಕಂಡು ಹಿಡಿಯಲು ನಾನಾ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

Sulekha