ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಅಗ್ನಿ ಅವಘಡ – 13 ಕ್ಕೂ ಹೆಚ್ಚು ಮಂದಿಗೆ ಗಾಯ

ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಅಗ್ನಿ ಅವಘಡ – 13 ಕ್ಕೂ ಹೆಚ್ಚು ಮಂದಿಗೆ ಗಾಯ

ದೇಶಾದ್ಯಂತ ಸಡಗರ-ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಸಂಭ್ರಮದ ನಡುವೆ ಅವಘಡವೊಂದು ನಡೆದುಹೋಗಿದೆ. ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ.

ಹೋಳಿ ಹಬ್ಬದ ಅಂಗವಾಗಿ ದೇವಾಲಯದ ಗರ್ಭಗುಡಿಯಲ್ಲಿ ಸೋಮವಾರ ಭಸ್ಮ ಆರತಿ ವೇಳೆ ಮಹಾಕಾಲ್‌ಗೆ ಗುಲಾಲ್‌ ಅರ್ಪಿಸುವ ವೇಳೆ ಇದ್ದಕ್ಕಿದ್ದಂತೆ ಗರ್ಭಗುಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಐವರು ಅರ್ಚಕರು ಸೇರಿದಂತೆ 13 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅರ್ಚಕರಿಗೆ ಹಾಗೂ ಭಕ್ತರಿಗೆ ಸುಟ್ಟ ಗಾಯಗಳಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಬಿಜೆಪಿ-ಕೆಆರ್‌ಪಿಪಿ ವಿಲೀನ – ಶಾಸಕ ಜನಾರ್ದನ ರೆಡ್ಡಿ ಮತ್ತೆ ಬಿಜೆಪಿ ಸೇರ್ಪಡೆ!

ಗರ್ಭಗೃಹದಲ್ಲಿ ಭಸ್ಮ ಆರತಿ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ 13 ಮಂದಿ ಗಾಯಗೊಂಡಿದ್ದಾರೆ. ದೇವಸ್ಥಾನದಲ್ಲಿ ಭಸ್ಮೃತಿಯ ಪ್ರಧಾನ ಅರ್ಚಕ ಸಂಜಯ್ ಗುರು, ವಿಕಾಸ್ ಪೂಜಾರಿ, ಮನೋಜ್ ಪೂಜಾರಿ, ಅಂಶ್ ಪುರೋಹಿತ್, ಸೇವಕ ಮಹೇಶ್ ಶರ್ಮಾ ಮತ್ತು ಚಿಂತಾಮನ್ ಗೆಹ್ಲೋಟ್ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಅವರ ವೈದ್ಯಕೀಯ ಚಿಕಿತ್ಸೆ ನಡೆಯುತ್ತಿದೆ ಎಂದು ಜಿಲ್ಲಾ ಅಧಿಕಾರಿ ನೀರಜ್ ಕುಮಾರ್ ಸಿಂಗ್ ಹೇಳಿದ್ದಾರೆ.

ವಿಶೇಷ ಪೂಜೆ ವೇಳೆ ಸಿಎಂ ಮೋಹನ್ ಯಾದವ್ ಅವರ ಪುತ್ರ ಹಾಗೂ ಪುತ್ರಿ ಕೂಡ ದೇವಸ್ಥಾನದಲ್ಲಿ ಹಾಜರಿದ್ದರು. ಇಬ್ಬರೂ ಭಸ್ಮೃತಿಯನ್ನು ನೋಡಲು ಹೋಗಿದ್ದರು. ಇಬ್ಬರೂ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಜಿಲ್ಲಾಧಿಕಾರಿ ನೀರಜ್ ಸಿಂಗ್ ಮತ್ತು ಎಸ್ಪಿ ಪ್ರದೀಪ್ ಶರ್ಮಾ ಆಸ್ಪತ್ರೆಗೆ ಆಗಮಿಸಿದರು. ವಿಶ್ವವಿಖ್ಯಾತ ಜ್ಯೋತಿರ್ಲಿಂಗ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಅಂದು ಸಾವಿರಾರು ಭಕ್ತರು ಸೇರಿದ್ದರು. ಬೆಂಕಿ ಹೊತ್ತಿಕೊಂಡ ನಂತರ ಕೆಲವರು ಅಗ್ನಿಶಾಮಕ ಯಂತ್ರಗಳ ಮೂಲಕ ಬೆಂಕಿಯನ್ನು ನಿಯಂತ್ರಿಸಿದರು.

Shwetha M