7 ಚಿರತೆ ಮರಿಗಳ ಸಾವಿನ ಬೆನ್ನಲ್ಲೇ 13 ಜಿಂಕೆಗಳು ಬಲಿ – ಸರಣಿ ಸಾವಿನ ಹಿನ್ನೆಲೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆತಂಕ

7 ಚಿರತೆ ಮರಿಗಳ ಸಾವಿನ ಬೆನ್ನಲ್ಲೇ 13 ಜಿಂಕೆಗಳು ಬಲಿ – ಸರಣಿ ಸಾವಿನ ಹಿನ್ನೆಲೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆತಂಕ

ಬೆಂಗಳೂರಿಗರ ವೀಕೆಂಡ್ ಹಾಟ್ ಸ್ಪಾಟ್ ಆಗಿರುವ ಬನ್ನೇರುಘಟ್ಟಕ್ಕೆ ಪ್ರವಾಸಕ್ಕೆಂದು ಸಾವಿರಾರು ಜನ ಬರುತ್ತಾರೆ. ಆದರೆ ಇದೀಗ ಬನ್ನೇರುಘಟ್ಟದಲ್ಲಿ ಪ್ರಾಣಿಗಳ ಸರಣಿ ಸಾವು ಆತಂಕಕ್ಕೀಡು ಮಾಡಿದೆ. ಇದುವರೆಗೂ 7 ಚಿರತೆ ಮರಿಗಳು ಹಾಗೂ 13 ಚಿಂಕೆಗಳು ಮೃತಪಟ್ಟಿವೆ. ತಿಂಗಳ ಹಿಂದೆಯಷ್ಟೇ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಬೆಂಗಳೂರು ಸೆಂಟ್ ಜಾನ್ಸ್ ಆಸ್ಪತ್ರೆಯ ಉದ್ಯಾನವನದಲ್ಲಿದ್ದ 37 ಜಿಂಕೆಗಳನ್ನು ತರಲಾಗಿತ್ತು. ಆದರೆ ಈಗ ನಾನಾ ಕಾರಣದಿಂದಾಗಿ 13 ಜಿಂಕೆಗಳು ಮೃತಪಟ್ಟಿವೆ.

ಬೆಂಗಳೂರು ಸೆಂಟ್ ಜಾನ್ಸ್ ಆಸ್ಪತ್ರೆಯ ಉದ್ಯಾನವನದಲ್ಲಿದ್ದ ಜಿಂಕೆಗಳನ್ನ ಸರಿಯಾಗಿ ಆರೈಕೆ ಮಾಡಿರಲಿಲ್ಲ. ಹೀಗಾಗಿ ಡಿಸಿಎಫ್ ಪ್ರಭಾಕರ್ ಅವರು ಜಿಂಕೆಗಳನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹಸ್ತಾಂತರಿಸಿದ್ದರು. 37 ಜಿಂಕೆಗಳನ್ನ ರಕ್ಷಣೆ ಮಾಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕರೆತರಲಾಗಿತ್ತು. ಹತ್ತು ದಿನಗಳ ಕ್ವಾರೆಂಟೈನ್ ಬಳಿಕ ಸಫಾರಿಗೆ ಬಿಡಲಾಗಿತ್ತು. ಹಿಂಡುಗಳ ಕಾದಾಟ ಹಾಗೂ ಜಂತುಹುಳು ಸಮಸ್ಯೆಯಿಂದ ಜಿಂಕೆಗಳು ಮೃತಪಡುತ್ತಿವೆ. ಕೆಲ ಜಿಂಕೆಗಳು ಹೃದಯಾಘಾತದಿಂದ ಮರಣ ಹೊಂದುತ್ತಿವೆ. ಇದುವರೆಗೂ 13 ಜಿಂಕೆಗಳು ಪ್ರಾಣ ಬಿಟ್ಟಿವೆ.

ಇದನ್ನೂ ಓದಿ: ಅರ್ಮೇನಿಯನ್ ನಿಯಂತ್ರಿತ ಕರಾಬಾಕ್‌ನಲ್ಲಿ ಅಜರ್‌ಬೈಜಾನ್‌ ಮಿಲಿಟರಿ ದಾಳಿ – 25 ಮಂದಿ ಸಾವು

ಇನ್ನು ಇದಕ್ಕೂ ಮೊದಲು ಅಂದ್ರೆ ಕೆಲವು ದಿನಗಳ ಹಿಂದೆಯಷ್ಟೇ ಮಾರಕ ವೈರಸ್​ನಿಂದಾಗಿ ಚಿರತೆ ಮರಿಗಳು ಮೃತ ಪಟ್ಟಿದ್ದವು. ಆಗಸ್ಟ್ 22 ರಿಂದ ಸೆಪ್ಟೆಂಬರ್ 5ರ ನಡುವೆ ಏಳು ಚಿರತೆ ಮರಿಗಳು ವೈರಸ್​ಗೆ ತುತ್ತಾಗಿ ಬಲಿಯಾಗಿವೆ. ಇದರ ಬೆನ್ನಲ್ಲೇ ಇದೀಗ ಜಿಂಕೆಗಳ ಸರಣಿ ಸಾವಾಗುತ್ತಿದ್ದು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸೂತಕದ ಛಾಯೆ ಆವರಿಸಿದೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆ ಮರಿಗಳ ಸಾವಿಗೆ ಫೆಲೈನ್ ಪ್ಯಾನ್ ಲ್ಯುಕೋಪೆನಿಯಾ ಕಾರಣ ಎನ್ನಲಾಗಿದೆ. ಈ ವೈರಸ್ ಸಾಮಾನ್ಯವಾಗಿ ಬೆಕ್ಕುಗಳ ಮೂಲಕ ಹರಡುವ ವೈರಲ್ ಕಾಯಿಲೆಯಾಗಿದೆ. ಬನ್ನೇರುಘಟ್ಟ ಉದ್ಯಾನವನದಲ್ಲಿ ಸುಮಾರು 25 ಮರಿಗಳಿದ್ದು ಅವುಗಳಲ್ಲಿ 15 ಚಿರತೆ ಮರಿಗಳಿಗೆ ಸೋಂಕು ಹರಡಿದೆ. ಮತ್ತು ಏಳು ವೈರಸ್‌ಗೆ ಬಲಿಯಾಗಿವೆ. ಅಲ್ಲದೆ ಒಂದು ಸಿಂಹದ ಮರಿಗೂ ಸೋಂಕು ತಗುಲಿದ್ದು, ಇದೀಗ ಅದು ಚೇತರಿಸಿಕೊಳ್ಳುತ್ತಿದೆ ಎಂದು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ ಎ ವಿ ಸೂರ್ಯ ಸೇನ್ ತಿಳಿಸಿದ್ದಾರೆ.

ಆಗಸ್ಟ್ 22 ರಂದು ಸಫಾರಿ ಪ್ರದೇಶಗಳಲ್ಲಿ ಮೊದಲ ಸೋಂಕಿನ ಪ್ರಕರಣ ವರದಿಯಾಗಿತ್ತು. ಮೃತ ಏಳು ಮರಿಗಳಲ್ಲಿ ನಾಲ್ಕು ಸಫಾರಿ ಪ್ರದೇಶದಲ್ಲಿದ್ದವು ಮತ್ತು ಮೂರನ್ನು ರಕ್ಷಣಾ ಕೇಂದ್ರದಲ್ಲಿ ಇರಿಸಲಾಗಿತ್ತು ಎಂದು ಸೂರ್ಯ ಸೇನ್ ಅವರು ಹೇಳಿದರು. ವೈರಸ್‌ಗೆ ಬಲಿಯಾದ ಮರಿಗಳು ಮೂರು ತಿಂಗಳಿಂದ ಒಂದು ವರ್ಷದೊಳಗಿನವು. ಆಶ್ಚರ್ಯವೆಂದರೆ, ಎಲ್ಲಾ ಮರಿಗಳಿಗೆ ಲಸಿಕೆ ಹಾಕಲಾಗಿತು. ಆದರೂ ವೈರಸ್​ಗೆ ತುತ್ತಾಗಿವೆ. ಅಪರೂಪದ ಸಂದರ್ಭಗಳಲ್ಲಿ, ವ್ಯಾಕ್ಸಿನೇಷನ್ ವೈಫಲ್ಯವಾಗುತ್ತದೆ. ಲಸಿಕೆಯನ್ನು ನಿಷ್ಪರಿಣಾಮಕಾರಿಯನ್ನಾಗಿ ಮಾಡುವ ಮೂಲಕ ವೈರಸ್ ರೂಪಾಂತರಗೊಂಡಿರುವ ಸಾಧ್ಯತೆಯಿದೆ ಎಂದು ಸೂರ್ಯ ಸೇನ್ ಅವರು ತಿಳಿಸಿದ್ದಾರೆ.

Shwetha M