ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕೌಂಟ್‌ಡೌನ್‌! – ಮದುವಣಗಿತ್ತಿಯಂತೆ ಸಿಂಗಾರಗೊಂಡ ರಾಮನಗರಿ

ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕೌಂಟ್‌ಡೌನ್‌! – ಮದುವಣಗಿತ್ತಿಯಂತೆ ಸಿಂಗಾರಗೊಂಡ ರಾಮನಗರಿ

ಶತಶತಮಾನಗಳಿಂದ ರಾಮ ಭಕ್ತರ ಕನಸು ನನಸಾಗುತ್ತಿದೆ. ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ. ಅದಕ್ಕಾಗಿ ದೇವನಗರಿ ಅಯೋಧ್ಯೆ ಹಿಂದೆಂದಿಗಿಂತಲೂ ನವ ವೈಭವದಲ್ಲಿ ಅದ್ಧೂರಿಯಾಗಿ ಸಜ್ಜುಗೊಂಡಿದೆ. ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ರಾಮ ಮಂದಿರದ ವಿಹಂಗಮ ನೋಟ ಎಲ್ಲರನ್ನ ಸೆಳೆಯುತ್ತಿದೆ.

ಇದನ್ನೂ ಓದಿ: 2024ರ ಜನವರಿ 22ರಂದೇ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಮಾಡ್ತಿರೋದ್ಯಾಕೆ?

ಹೌದು, ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ಹೀಗಿರುವಾಗ ದೇಗುಲದ ಜತೆಗೆ ಇಡೀ ಅಯೋಧ್ಯೆ ಸಿಂಗಾರಗೊಳ್ಳುತ್ತಿದೆ.ರಾಮನಗರಿ ಅಯೋಧ್ಯೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಬೀದಿ ಬೀದಿಗಳಲ್ಲಿ ವಿದ್ಯುತ್ ದೀಪಗಳ ಅಲಂಕಾರ ಒಂದೆಡೆಯಾದರೆ, ನಾನಾ ಬಗೆಯ ಹೂಗಳಿಂದ ರಾಮನ ಭವ್ಯ ಮಂದಿರವನ್ನ ಸಿಂಗಾರಗೊಳಿಸಲಾಗಿದೆ. ರಾಮಮಂದಿರದ ಕಂಬ ಕಂಬಗಳೂ ಪುಷ್ಪಾಲಂಕೃತವಾಗಿ ಕಂಗೊಳಿಸುತ್ತಿವೆ. ಸ್ವಾಗತ ದ್ವಾರವನ್ನು ಪುಷ್ಪಲಂಕಾರದಿಂದ ಅಲಂಕರಿಸಲಾಗಿದೆ.

ದೇವಾಲಯದ ಅಲಂಕಾರಕ್ಕಾಗಿ 50 ಸಾವಿರ ಕೆಜಿಗೂ ಹೆಚ್ಚು ಹೂವುಗಳನ್ನು ಬಳಕೆ ಮಾಡಲಾಗಿದೆ. ಈ ಹೂವುಗಳು ದೇಶದ ಮೂಲೆ ಮೂಲೆಯಿಂದ ಅಯೋಧ್ಯೆ ತರಲಾಗಿದೆ. ಚೆಂಡು ಹೂವುಗಳನ್ನು ಅಲಂಕಾರದಲ್ಲಿ ಬಳಸಲಾಗಿದೆ. ಇದರೊಂದಿಗೆ ಕೆಂಪು, ಹಳದಿ, ಹಸಿರು ಮತ್ತು ನೀಲಿ ಬಣ್ಣದ ಹೂಗಳನ್ನು ಬಳಸಿಕೊಳ್ಳಲಾಗಿದೆ. ದೇವಾಲಯದ ಒಳಗಿನ ವಿನ್ಯಾಸದಂತೆಯೇ, ಸುಂದರ ಮತ್ತು ಭವ್ಯವಾಗಿ ಕಾಣಲು ಅದೇ ರೀತಿಯಲ್ಲಿ ಹೂವುಗಳಿಂದ ಅಲಂಕರಿಸಲಾಗಿದೆ.

Shwetha M