ಮುಂದಿನ ವಾರ ನೌಕೆಯಷ್ಟೇ ಭೂಮಿಗೆ..! – ಮುಂದಿನ ವರ್ಷವೇ ಸುನಿತಾ ವಿಲಿಯಮ್ಸ್ ಆಗಮನ
ಒಂದು ಸಣ್ಣ ಮಿಸ್ಟೇಕ್ ಗೂ ಇಲ್ಲಿ ಜಾಗವಿಲ್ಲ. ಕಳೆದ ಬಾರಿಯ ದುರಂತ ಕಣ್ಣ ಮುಂದೆ ಇರುವಾಗಲೇ ಯಾವ ತಪ್ಪು ಮಾಡುವ ಹಾಗಿಲ್ಲ. ಇದಕ್ಕಾಗಿಯೇ ಈಗ ಕಷ್ಟ ಪಡ್ತಿರೋದು ಮಾತ್ರ ನಮ್ಮ ಹೆಮ್ಮೆಯ ಸುನೀತಾ ವಿಲಿಯಮ್ಸ್. ಹೌದು. ಈಗ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಸಧ್ಯಕ್ಕಂತೂ ಭೂಮಿಗೆ ಇಳಿಯಲ್ಲ. ಹಾಗಂತಾ ಈಗಲೇ ಕರೆತಂದರೆ ಕಲ್ಪನಾ ಚಾವ್ಲಾ ಸ್ಥಿತಿ ಆದರೆ ಎಂಬ ಆತಂಕವೂ ಎದುರಾಗಿದೆ. ಹೀಗಾಗಿಯೇ ನಾಸಾ ಪ್ಲಾನ್ ಬಿ ರೆಡಿಮಾಡಿಕೊಂಡಿದೆ. ಇದರ ಮೂಲಕ ಸುನಿತಾ ವಿಲಿಯಮ್ಸ್ ರನ್ನ ಬಾಹ್ಯಾಕಾಶದಿಂದ ಕರೆತರಲಾಗುತ್ತದೆ. ಹಾಗಾದರೆ ಆ ಪ್ಲಾನ್ ಬಿ ಯಾವುದು? ಯಾವಾಗ ಬರ್ತಾರೆ ಸುನಿತಾ ವಿಲಿಯಮ್ಸ್. ? ಅಲ್ಲಿಯವರೆಗೆ ಆಕ್ಸಿಜನ್ ಸಾಕಾಗುತ್ತಾ ಎಂಬ ಡಿಟೇಲ್ಸ್ ಇಲ್ಲಿದೆ.
ಇದನ್ನೂ ಓದಿ: ಬಾಹ್ಯಾಕಾಶದಲ್ಲೇ ಬಂಧಿಯಾದ ಸುನೀತಾ – ಟೂರ್ ಟ್ರಯಲ್ ಫೇಲ್ಯೂರ್ ಆಗಿದ್ದೇಗೆ?
ಕಳೆದ ಜೂನ್ 5 ರಂದು ಅಮೆರಿಕದ ಮೂಲದ ಬುಚ್ ವಿಲ್ಮೋರ್ ಜೊತೆ ಸುನಿತಾ ವಿಲಿಯಮ್ಸ್ ಗಗನಯಾನ ಕೈಗೊಂಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಇಷ್ಟೊತ್ತಿಗಾಗಲೇ ಭೂಮಿಗೆ ವಾಪಸ್ ಆಗಬೇಕಿತ್ತು. ಜೂನ್ 6 ರಂದು ಕ್ಯಾಪ್ಸುಲ್ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ. 5 ಥ್ರಸ್ಟರ್ಗಳಲ್ಲಿ ದೋಷ ಕಂಡುಬಂದಿದೆ. ಗಗನನೌಕೆಯಲ್ಲೇ ತಾಂತ್ರಿಕದೋಷ ಕಂಡು ಬಂದಿದ್ದರಿಂದ ಬುಚ್ ವಿಲ್ಮೋರ್ ಜೊತೆ ಸುನಿತಾ ವಿಲಿಯಮ್ಸ್ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಳ್ಳಲೇ ಬೇಕಾದ ಪರಿಸ್ಥಿತಿ ಎದುರಾಗಿದೆ. ಗಗನನೌಕೆಯಲ್ಲಿ ಉಂಟಾದ ಸಣ್ಣ ಹೀಲಿಯಂ ಸಿಸ್ಟಮ್ ಸೋರಿಕೆಯಿಂದಾಗಿ ಭೂಮಿಗೆ ಮರಳುವುದು ವಿಳಂಬವಾಗಿದೆ. ನೌಕೆಯಲ್ಲಿ 45 ದಿನಕ್ಕಾಗುವಷ್ಟು ಇಂಧನ ಇದ್ದಿದ್ದು. ಹೆಚ್ಚಿನ ಪ್ರಮಾಣದಲ್ಲಿ ಇಂಧನ ಸೋರಿಕೆಯಾದ್ರೆ ಮುಂದೆ ಅಪಾಯ ಸಂಭವಿಸುವ ಸಾಧ್ಯತೆಯೂ ಇದೆ. ಹಾಗಂತಾ ಇಬ್ಬರ ಅಮೂಲ್ಯ ಜೀವದ ಜೊತೆ ರಿಸ್ಕ್ ತೆಗೆದುಕೊಳ್ಳುವ ಹಾಗೂ ಇಲ್ಲ. ಹೀಗಾಗಿ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಅವರನ್ನ ಭೂಮಿಗೆ ವಾಪಸ್ ಕರೆತರಲು NASA ಇನ್ನಿಲ್ಲದ ಕಸರತ್ತು ನಡೆಸ್ತಿದೆ. ಸದ್ಯದ ಅಪಡೇಟ್ಸ್ ಏನೆಂದರೆ, ಸುನಿತಾ ವಿಲಿಯಮ್ಸ್ ಡೇಂಜರ್ ಝೋನ್ನಲ್ಲಿದ್ದಾರೆ.
ಸಧ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಬೋಯಿಂಗ್ ಸ್ಟಾರ್ ಲೈನರ್ ಬಾಹ್ಯಾಕಾಶ ನೌಕೆ ಸೆಪ್ಟೆಂಬರ್ 7 ರಂದು ವಾಪಸ್ ಬರಲಿದೆ. ಈ ನೌಕೆ ಭಾರತೀಯ ಕಾಲಮಾನ ಬೆಳಗ್ಗೆ 5.30ಕ್ಕೆ ಬಾಹ್ಯಾಕಾಶ ನಿಲ್ದಾಣದಿಂದ ವಾಪಸ್ ಹೊರಡಲಿದೆ. ನಂತರ 12 ಗಂಟೆ 3 ನಿಮಿಷಕ್ಕೆ ಅಮೇರಿಕಾದ ದಕ್ಷಿಣ ಭಾಗದಲ್ಲಿ ಧರೆಗೆ ಇಳಿಯಲಿದೆ. ಇಳಿಯುವಾಗ ಭೂಮಿಯ ವಾತಾವರಣಕ್ಕೆ ಎಂಟ್ರಿಯಾಗ್ತಿದ್ದಂತೆ ಕ್ಯಾಪ್ಸೂಲ್ ನ ಪ್ಯಾರಾಚೂಟ್ ಗಳು ತೆರೆಯಲಿದ್ದು, ಸೇಫ್ ಆಗಿ ಲ್ಯಾಂಡ್ ಮಾಡುವ ಲೆಕ್ಕಾಚಾರದಲ್ಲಿ ನಾಸಾ ವಿಜ್ಞಾನಿಗಳಿದ್ದಾರೆ.
ಸುನಿತಾ ವಿಲಿಯಮ್ಸ್ ಸ್ಪೇಸ್ ಎಕ್ಸ್ ನ ಕ್ರಿವ್ಯೂ (ವ್) (crew) ಡ್ರಾಗನ್ ನಲ್ಲಿ 2025ರ ಆರಂಭದಲ್ಲಿ ಭೂಮಿಗೆ ವಾಪಸ್ ಕರೆಸಲು ಪ್ಲಾನ್ ಮಾಡಿಕೊಳ್ಳಲಾಗ್ತಿದೆ. ಅಲ್ಲಿವರೆಗೂ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಇರ್ತಾರೆ. ಅಷ್ಟಕ್ಕೂ ಸುನಿತಾ ಅವರನ್ನ ಈಗಲೇ ಕರೆತರದೆ ಇರೋದಕ್ಕೂ ಕಾರಣವಿದೆ. ನಿಮಗೆಲ್ಲಾ ನೆನಪಿರಬಹುದು. ಫೆಬ್ರವರಿ 1, 2003 ರಂದು ಭಾರತೀಯ ಮೂಲದ ಅಮೇರಿಕನ್ ಗಗನಯಾತ್ರಿ ಕಲ್ಪನಾ ಚಾವ್ಲಾ ಮತ್ತು ಇತರ ಆರು ಮಂದಿ ದಾರುಣ ಸಾವನ್ನಪ್ಪಿದ ದಿನ ಅದು. ಕೊಲಂಬಿಯಾ ಬಾಹ್ಯಾಕಾಶ ನೌಕೆ ಒಡೆದ ಪರಿಣಾಮ ಭೂಮಿಗೆ ತಲುಪುತ್ತಲೆ ಸುಟ್ಟುಹೋಗಿತ್ತು. ಇದೇ ರೀತಿ ಸುನಿತಾ ಅವರ ವಿಚಾರದಲ್ಲಿ ಆಗಬಾರದು ಅಂತಾನೇ NASA ಅಧಿಕಾರಿಗಳು ಈಗ ಪ್ಲಾನ್ ಬಿ ರೆಡಿ ಮಾಡಿದ್ದಾರೆ. ಹೀಗಾಗಿಯೇ ಸುನಿತಾ ವಿಲಿಯಮ್ಸ್ ಮುಂದಿನ ವರ್ಷ ಆರಂಭದವರೆಗೂ ಬಾಹ್ಯಾಕಾಶದಲ್ಲಿಯೇ ಕಳೆಯಬೇಕಿದೆ. ಆಲ್ ರೆಡಿ ಡೇಂಜರ್ ನಲ್ಲಿರೋ ಬಾಹ್ಯಾಕಾಶ ನೌಕೆ ಧರೆಗೆ ತಾಗಿದ ತಕ್ಷಣ ಉರಿಯುವ ಸಾಧ್ಯತೆಯಿದೆ. ಹೀಗಾಗಿ ಸುನಿತಾ ವಿಲಿಯಮ್ಸ್ ಅವರ ರಕ್ಷಣೆಯೇ ನಾಸಾ ಅಧಿಕಾರಿಗಳ ಮೈನ್ ಟಾರ್ಗಿಟ್. ಆದರೆ, ಇರೋದು ಒಂದೇ ಒಂದು ಟೆನ್ಷನ್. ಅಲ್ಲಿಯವರೆಗೆ ಆಕ್ಸಿಜನ್ ಸಾಕಾಗುತ್ತಾ ಅನ್ನೋದು.
ಮತ್ತೊಂದೆಡೆ ಆರೋಗ್ಯ ಸಮಸ್ಯೆ ಕೂಡಾ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಸುನಿತಾ ವಿಲಿಯಮ್ಸ್ ಅವರ ಮೇಲೆ ಪ್ರಭಾವ ಬೀರಿದೆ ಎನ್ನಲಾಗ್ತಿದೆ. ಅವರ ದೇಹದ ತೂಕವೂ ಇಳಿಮುಖವಾಗಿದೆ. ಹೀಗಿದ್ದರೂ ಕೂಡಾ ಬಾಹ್ಯಾಕಾಶ ನಿಲ್ದಾಣದಲ್ಲಿ ಸುನಿತಾ ವಿಲಿಯಮ್ಸ್ ಸುಮ್ಮನೆ ಕುಳಿತಿಲ್ಲ. ಬಾಹ್ಯಾಕಾಶದಲ್ಲಿ ಬೆಳೆದ ಸಸ್ಯಗಳಿಗೆ ನೀರುಣಿಸುತ್ತಿದ್ದಾರೆ. ಮತ್ತು ಪೋಷಿಸುತ್ತಿದ್ದಾರೆ. ಗುರುತ್ವಾಕರ್ಷಣೆಯ ಕೊರತೆಯನ್ನು ನೀಗಿಸುವುದು ಹೇಗೆ ಎಂಬ ವಿಷಯದ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಬಾಹ್ಯಾಕಾಶದಲ್ಲಿ ಸಸ್ಯಗಳು ಹೇಗೆ ಬೆಳೆಯುತ್ತವೆ ಮತ್ತು ಮೈಕ್ರೋಗ್ರಾವಿಟಿ ಅಂದರೆ ದುರ್ಬಲ ಗುರುತ್ವಾಕರ್ಷಣ ಪರಿಸ್ಥಿತಿಯಲ್ಲಿ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅಧ್ಯಯನ ನಡೆಸುತ್ತಿದ್ದಾರೆ.
ಸೌರವ್ಯೂಹದಲ್ಲಿ ಮತ್ತು ಅದರಾಚೆಗೆ ಮನುಷ್ಯ ತನ್ನ ನೆಲೆಗಳನ್ನು ಸ್ಥಾಪಿಸಲು ಹೊರಟಾಗ ಈ ಎಲ್ಲಾ ಸಂಶೋಧನೆಗಳು ನಿರ್ಣಾಯಕವಾಗಿರುತ್ತವೆ ಎಂದು ನಾಸಾ ಹೇಳಿದೆ. ಅದೇನೇ ಇರಲಿ, ಒಂದು ವಾರದಲ್ಲಿ ವಾಪಸ್ ಬರುವ ಯೋಜನೆಯೊಂದಿಗೆ ISS’ಗೆ ತೆರಳಿದ್ದ ಗಗನಯಾನಿಗಳು ಇನ್ನೂ ಅಲ್ಲೇ ಸಿಲುಕಿದ್ದಾರೆ. ಅವರ ಆರೋಗ್ಯದ ಮೇಲೂ ಈಗಾಗಲೇ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನೆಲ್ಲಾ ನಾಸಾ ಅಧಿಕಾರಿಗಳು ಹೇಗೆ ನಿಭಾಯಿಸ್ತಾರೆ? ನಮ್ಮ ಹೆಮ್ಮೆಯ ಸುನಿತಾ ವಿಲಿಯಮ್ಸ್ ಇಂಥಾ ಕಠಿಣ ಪರಿಸ್ಥಿತಿಯಲ್ಲಿ ಹೇಗಿರಲಿದ್ದಾರೆ ಅನ್ನೋ ಆತಂಕ ಇದೆ. ಕೋಟಿ ಕೋಟಿ ಭಾರತೀಯರ ಹಾರೈಕೆ ಒಂದೇ. ನಮ್ಮ ಸುನಿತಾ ವಿಲಿಯಮ್ಸ್ ಸೇಫ್ ಆಗಿ ಭೂಮಿ ಮರಳಿ ಅನ್ನೋದು.