ಜನರಿಗೆ ನಿಮ್ಮ ಈ ಸಾಧನೆಯು ಸ್ಫೂರ್ತಿಯಾಗಲಿ- ದಳಪತಿ ವಿಜಯ್ ಗೆಲುವಿಗೆ ಅಭಿನಂದನೆ ಸಲ್ಲಿಸಿದ ರಿಷಭ್ ಶೆಟ್ಟಿ

ಮೊದಲ ಬಾರಿಗೆ ಚುನಾವಣೆಯ ಅಖಾಡಕ್ಕೆ ಇಳಿದ ನಟ ದಳಪತಿ ವಿಜಯ್ ಅವರಿಗೆ ಗೆಲುವು ಸಿಕ್ಕಿದ್ದು, ನಟ, ನಿರ್ದೇಶಕ ರಿಷಬ್ ಶೆಟ್ಟಿಕೂಡ ವಿಜಯ್ ಅವರನ್ನು ಅಭಿನಂದಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಶೆಟ್ಟಿ ಅವರು ಪೋಸ್ಟ್ ಮಾಡಿದ್ದಾರೆ. ‘ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ ವಿಜಯ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ನಾಯಕತ್ವದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಆಗಲಿ. ಇನ್ನಷ್ಟು ಯುವ ಜನರಿಗೆ ನಿಮ್ಮ ಈ ಸಾಧನೆಯು ಸ್ಫೂರ್ತಿಯಾಗಲಿ’ ಎಂದು ರಿಷಬ್ ಶೆಟ್ಟಿ ಅವರು ಶುಭ ಹಾರೈಸಿದ್ದಾರೆ.
ನಟ ಶಿವರಾಜ್ಕುಮಾರ್ ಕೂಡ ಅಭಿನಂದನೆ ತಿಳಿಸಿದ್ದಾರೆ. ‘ವಿಜಯ್ ಅವರಿಗೆ ಇದು ಅರ್ಹ ಗೆಲುವು. ತೀವ್ರವಾದ ಟೀಕೆ-ದಾಳಿಗಳ ನಡುವೆಯೂ ಮೌನವಾಗಿರುವುದು ಮತ್ತು ನಿಮ್ಮ ಕೆಲಸವೇ ಮಾತನಾಡುವಂತೆ ಮಾಡುವುದು ಎಲ್ಲಕ್ಕಿಂತ ದೊಡ್ಡ ಗೆಲುವು. ಈ ಹಿಂದೆ ಮಾಧ್ಯಮಗಳ ಜೊತೆಗಿನ ಸಂವಾದವೊಂದರಲ್ಲಿ ನಾನು ತಮಾಷೆಯಾಗಿ ‘TVK ಎಂದರೆ – Try Vijay As King’ (ವಿಜಯ್ ಅವರನ್ನು ರಾಜನನ್ನಾಗಿ ನೋಡಿ) ಎಂದು ಹೇಳಿದ್ದೆ. ಇಂದು ನೀವು ನಿಜವಾಗಿಯೂ ಒಬ್ಬ ರಾಜನಂತೆ ಎತ್ತರಕ್ಕೆ ಬೆಳೆದು ನಿಂತಿದ್ದೀರಿ. ತಮಿಳುನಾಡಿನ ಜನತೆಗೆ ನೀವು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುವಂತಾಗಲಿ ಮತ್ತು ಅಲ್ಲಿ ಸದಾ ಪ್ರಗತಿಯುಂಟಾಗಲಿ’ ಎಂದು ಶಿವಣ್ಣ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಹೆಚ್ಚಳ! – ಕೋಟಾ ಹಾಸ್ಟೆಲ್ಗಳ ಸೀಲಿಂಗ್ ಫ್ಯಾನ್ಗೆ ಕಬ್ಬಿಣದ ಪಂಜರ ಅಳವಡಿಕೆ!
ನಾನಿ, ವಿಜಯ್ ದೇವರಕೊಂಡ, ಶಿವಕಾರ್ತಿಕೇಯನ್, ಟೈಗರ್ ಶ್ರಾಫ್, ರವಿತೇಜ, ರಂಭಾ, ವೆಂಕಟ್ ಕೆ. ನಾರಾಯಣ, ಕಾಜಲ್ ಅಗರ್ವಾಲ್, ಚಿಯಾನ್ ವಿಕ್ರಮ್, ಚಿರಂಜೀವಿ, ಮಹೇಶ್ ಬಾಬು, ರಾಮ್ ಚರಣ್, ಸೂರ್ಯ, ರಜನಿಕಾಂತ್, ಎ.ಆರ್. ರೆಹಮಾನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ದಳಪತಿ ವಿಜಯ್ ಅವರ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಚಿತ್ರರಂಗಕ್ಕೆ ವಿಜಯ್ ಅವರು ನೀಡಿರುವ ಕೊಡುಗೆ ಅಪಾರ. 1992ರಿಂದಲೂ ಹೀರೋ ಆಗಿ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿರುವ ಅವರು ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಹಲವು ಸಮಾಜಮುಖಿ ಕೆಲಸಗಳ ಮೂಲಕವೂ ಅವರು ಗುರುತಿಸಿಕೊಂಡಿದ್ದಾರೆ. ಈಗ ಪೂರ್ಣಪ್ರಮಾಣದ ರಾಜಕಾರಣಿ ಆಗಿದ್ದು, ಅವರಿಂದ ಅಭಿವೃದ್ಧಿ ನಿರೀಕ್ಷಿಸಲಾಗಿದೆ.

ನೋಡಿರಿ

