ʼ40% ಕಮಿಷನ್ ಹಗರಣದ ತನಿಖೆ ಉಚಿತ, ನಿಮಗೆ ಶಿಕ್ಷೆ ಖಚಿತʼ! – ಬಿಜೆಪಿಗೆ  ಕಾಂಗ್ರೆಸ್‌ ಎಚ್ಚರಿಕೆ

ʼ40% ಕಮಿಷನ್ ಹಗರಣದ ತನಿಖೆ ಉಚಿತ, ನಿಮಗೆ ಶಿಕ್ಷೆ ಖಚಿತʼ! – ಬಿಜೆಪಿಗೆ  ಕಾಂಗ್ರೆಸ್‌ ಎಚ್ಚರಿಕೆ

ಬೆಂಗಳೂರು: ಕಾಂಗ್ರೆಸ್‌ ನ ಐದು ಗ್ಯಾರಂಟಿ ಯೋಜನೆಗಳ ಕುರಿತು ಬಿಜೆಪಿ, ಕಾಂಗ್ರೆಸ್‌ ಟ್ವೀಟ್‌ ಮುಂದುವರಿಯುತ್ತಲೇ ಇದೆ. ಐದು ಗ್ಯಾರಂಟಿಗಳನ್ನು ಈಡೇರಿಸುವ ಉದ್ದೇಶದಿಂದಲೇ ಕಾಂಗ್ರೆಸ್‌ ಬೆಲೆ ಏರಿಕೆ ಮಾಡುತ್ತಿದೆ ಎಂದು ಬಿಜೆಪಿ ಕಿಡಿಕಾರಿತ್ತು. ಇದೀಗ  ಕಾಂಗ್ರೆಸ್‌ ರೀ ಟ್ವೀಟ್‌ ಮುಖೇನ ಬಿಜೆಪಿ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಒತ್ತುವರಿದಾರರಿಗೆ ಬಿಗ್ ಶಾಕ್ – ರಾಜಕಾಲುವೆ ಮೇಲೆ ತಲೆ ಎತ್ತಿದ್ದ ಕಟ್ಟಡಗಳು ನೆಲಸಮ!

ಕಾಂಗ್ರೆಸ್‌ ಐದು ಗ್ಯಾರಂಟಿಗಳ ಬಗ್ಗೆ ಬಿಜೆಪಿ ಶುಕ್ರವಾರ ಲೇವಡಿ ಮಾಡಿತ್ತು. “1ನೇ ಗ್ಯಾರಂಟಿ – ವಿದ್ಯುತ್, ಮೀಟರ್ ದರ ಏರಿಕೆ, 2ನೇ ಗ್ಯಾರಂಟಿ – ಕುಡಿಯುವ ನೀರಿನ ಬೆಲೆ ಏರಿಕೆ, 3ನೇ ಗ್ಯಾರಂಟಿ – ಸದ್ದಿಲ್ಲದೆ ಕೆಎಸ್​ಆರ್​ಟಿಸಿ ಟಿಕೆಟ್ ದರ ಏರಿಕೆ, 4ನೇ ಗ್ಯಾರಂಟಿ – ಮದ್ಯಪಾನದ ಬೆಲೆಯೂ ಏರಿಕೆ, 5ನೇ ಗ್ಯಾರಂಟಿ – ನಂದಿನಿ ಹಾಲಿನ ದರವೂ ಏರಿಕೆ, 6ನೇ ಗ್ಯಾರಂಟಿ – ಆಸ್ತಿ ನೋಂದಣಿ ಶುಲ್ಕ ಏರಿಕೆ, 7ನೇ ಗ್ಯಾರಂಟಿ – ಮೊಟ್ಟೆ, ಮಾಂಸದ ದರವೂ ಏರಿಕೆ” ಎಂದು ವ್ಯಂಗ್ಯವಾಡಿತ್ತು. ಇದೀಗ ಬಿಜೆಪಿ ಮಾಡಿದ ಈ ಟ್ವೀಟ್​ ಅನ್ನು ಉಲ್ಲೇಖಿಸಿರುವ ಕಾಂಗ್ರೆಸ್, “ಬಿಜೆಪಿಯವರೇ ನಮ್ಮ ಇತರ ಗ್ಯಾರಂಟಿಗಳು 40% ಕಮಿಷನ್ ಹಗರಣದ ತನಿಖೆ ಉಚಿತ, ನಿಮಗೆ ಶಿಕ್ಷೆ ಖಚಿತ, ಜನರಿಗೆ ನೆಮ್ಮದಿ ನಿಶ್ಚಿತ” ಎಂದು ಟ್ವೀಟ್ ಮಾಡಿ, ಕಮಿಷನ್‌ ಹಗರಣವನ್ನು ತನಿಖೆ ಮಾಡಿ ಅಕ್ರಮ ಬಯಲಿಗೆಳೆಯುತ್ತೇವೆ ಎಂಬ ಎಚ್ಚರಿಕೆಯನ್ನು ನೀಡಿದೆ.

ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಅವರು ಅನ್ನಭಾಗ್ಯ ಯೋಜನೆಯ ಅಕ್ಕಿ ಖರೀದಿ ವಿಚಾರವಾಗಿ ಹೇಳಿಕೆ ನೀಡಿದ್ದರು. ಹೊರ ರಾಜ್ಯಗಳಿಂದ ಅಕ್ಕಿ ಖರೀದಿಸಲು ರಾಜ್ಯ ಸರಕಾರ ಮುಂದಾಗಿರುವುದು ಹಾಸ್ಯಾಸ್ಪದ, ಹೊರ ರಾಜ್ಯದಿಂದ ಅಕ್ಕಿ ಖರೀದಿಸುವುದು ಕಮಿಷನ್ ಪಡೆಯುವ ಹುನ್ನಾರ ಎಂದು ಆರೋಪಿಸಿದ್ದರು. ಇದೀಗ ಈ ಆರೋಪಕ್ಕೂ ಕಾಂಗ್ರೆಸ್‌ ಪ್ರತ್ಯುತ್ತರ ನೀಡಿದೆ. ʼಕಮಿಷನ್ ಹೊಡೆಯುವ ಪೇಟೆಂಟ್ ಬಿಜೆಪಿಯದ್ದು ಹೊರತು ಕಾಂಗ್ರೆಸ್‌ನದ್ದಲ್ಲ, ನಿಮ್ಮ #VijayendraServiceTax ಹೇಗಿತ್ತು ಅನ್ನೋದನ್ನ ಯತ್ನಾಳ್ ಅವರೇ ವಿವರಿಸುತ್ತಾರೆ. ಒಮ್ಮೆ ಕೇಳಿ! ರಾಜ್ಯದ ಬಡವರ ಹೊಟ್ಟೆ ಮೇಲೆ ಹೊಡೆಯಲು ರಾಜ್ಯದಿಂದ ಹಿಡಿದು ಕೇಂದ್ರದವರೆಗೂ ಬಿಜೆಪಿಯ ಪ್ರತಿ ನಾಯಕರೂ ಟೊಂಕ ಕಟ್ಟಿ ನಿಂತಿದ್ದಾರೆ. ಜನ ಇವೆಲ್ಲವಕ್ಕೂ ಉತ್ತರಿಸುತ್ತಾರೆ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

suddiyaana